Monday, February 26, 2007

ಯಾವ ಭಾಷೆಯ ಮೂಲಕ ಕಲಿಯಬೇಕು?

ಮಕ್ಕಳು ಯಾವ ಭಾಷೆಯ ಮೂಲಕ ಚೆನ್ನಾಗಿ ಕಲಿಯುತ್ತಾರೆ ಎನ್ನುವ ವಿಷಯವನ್ನು ಕುರಿತು ವಾದವಿವಾದಗಳು ನಡೆಯುತ್ತಲೇ ಇವೆ. ಕರ್ನಾಟಕದಲ್ಲಿ ನಡೆಯುತ್ತಿರುವ ಈ ವಿವಾದಕ್ಕೆ ಎರಡು ಪಕ್ಷಗಳಿವೆ. ಒಂದು ಪಕ್ಷದವರು ಕನ್ನಡ ಪರವಾದವರು;ಇನ್ನೊಂದು ಪಕ್ಷದವರನ್ನು ಮೊದಲ ಪಕ್ಷದವರು ಕನ್ನಡ ವಿರೋಧಿಗಳು ಎಂದು ಗುರುತಿಸುತ್ತಾರೆ. ಕನ್ನಡ ಪರವಾದ ವಾದಿಗಳು ಮಕ್ಕಳಿಗೆ ಕನ್ನಡದ ಮೂಲಕ ಕಲಿಸುವುದು ಸರಿಯಾದ ಬಗೆಯೆಂದು ವಾದಿಸುತ್ತಾರೆ. ತಮ್ಮ ವಾದದ ಸಮರ್ಥನೆಗೆ ಎರದು ದಾರಿಗಳನ್ನು ಅವರು ಹಿಡಿಯುತ್ತಾರೆ. ಮೊದಲನೆಯದು ಭಾವನಾತ್ಮಕವಾದುದು. ಮಗುವಿಗೆ ಪರಿಚಿತವಾದ ಮೊದಲ ನುಡಿಯಲ್ಲೇ ಕಲಿಕೆ ನಡೆಯುವುದು ಹೆಚ್ಚು ಸರಿಯೆಂದೂ ಅದಿನ್ನೂ ಕಲಿತಿಲ್ಲದ ಬೇರೆ ಭಾಷೆಯ ಮೂಲಕ ಕಲಿಸುವುದರಿಂದ ಕಲಿಕೆ ಎನ್ನುವುದು ಹಿಂಸೆಯಾಗುತ್ತದೆಂದು ಹೇಳುತ್ತಾರೆ. ಇದಲ್ಲದೆ ಇನ್ನೊಂದು ಅಪಾಯದ ಸೂಚನೆಯನ್ನೂ ನೀಡುತ್ತಾರೆ. ಹೀಗೆ ಮಗುವಿಗೆ ಕನ್ನಡವಲ್ಲದ ಇನ್ನೊಂದು ಭಾಷೆಯ ಮೂಲಕ ಕಲಿಸುವುದರಿಂದ ಮಗು ಭಾವನಾತ್ಮಕವಾಗಿ ತನ್ನ ನುಡಿಯ ಪರಿಸರದಿಂದ ಹೊರಗುಳಿಯುತ್ತದೆಂದೂ ಹೀಗೆ ಹೊರಗುಳಿಯುವ ಮಕ್ಕಳು ಕನ್ನಡ ಸಂಸ್ಕೃತಿಗೆ ಅನ್ಯರಾಗುತ್ತಾರೆಂದು ಹೇಳುತ್ತಾರೆ. ಅವರ ವಾದದ ಇನ್ನೊಂದು ದಾರಿ ಕಲಿಕೆಯ ತಾತ್ವಿಕ ನೆಲೆಗಳಿಂದ ರೂಪಿತವಾದದ್ದು. ಪರಿಚಿತವಾದ್ದರಿಂದ ಅಪರಿಚಿತವಾದದ್ದರ ಕಡೆಗೆ ಕಲಿಕೆಯು ನಮ್ಮನ್ನು ಒಯ್ಯುವುದು ಎಂದು ನಂಬುವುದಾದರೆ ಮಗುವಿನ ಮೊದಲ ಭಾಷೆಯಲ್ಲೇ ಅದರ ಕಲಿಕೆ ನಡೆಯ ಬೇಕೆಂದು ಒಪ್ಪಲೇ ಬೇಕಾಗುತ್ತದೆಂದು ಈ ವಾದದ ತಿರುಳು.ಭಾರತದ ಸಂದರ್ಭದಲ್ಲಿ ಗಾಂಧಿ,ರವೀಂದ್ರನಾಥ ಟಾಗೋರರನ್ನು ಈ ವಾದದ ಸಮರ್ಥನೆಗಾಗಿ ಉಲ್ಲೇಖಿಸಲಾಗುತ್ತದೆ.

ಕನ್ನಡದ ಮೂಲಕವಲ್ಲದೆ ಬೇರೆ ಯಾವ ಭಾಷೆಗಳ ಮೂಲಕ ಕರ್ನಾಟಕದಲ್ಲಿ ಮಕ್ಕಳು ಕಲಿಯುತ್ತಿದ್ದಾರೆ? ಸಾಮಾನ್ಯವಾಗಿ ನೆರೆಯ ರಾಜ್ಯಗಳ ಭಾಷೆಗಳಾದ ತಮಿಳು,ತೆಲುಗು,ಮಲೆಯಾಳಮ್,ಮರಾಠಿಗಳ ಜೊತೆಗೆ ಉರ್ದು,ಹಿಂದಿಗಳ ಮೂಲಕವೂ ಸಾಕಷ್ಟು ಮಕ್ಕಳು ತಮ್ಮ ಶಾಲಾಶಿಕ್ಷಣದ ಮೊದಲ ಕೆಲವು ವರ್ಷಗಳ ಅವಧಿಯಲ್ಲಿ ಕಲಿಯುತ್ತಿದ್ದಾರೆ. ಇವೆಲ್ಲದರ ಜೊತೆಗೆ ಇಂಗ್ಲಿಶ್ ಕೂಡ ಕಲಿಕೆಯ ಮಾಧ್ಯಮವಾಗಿ ಬಳಕೆಯಾಗುತ್ತಿದೆ. ಶಾಲಾಶಿಕ್ಷಣದ ಅನಂತರದ ಹಂತದಲ್ಲಿ ಇಂಗ್ಲಿಶ್ ಮಾತ್ರ ಅಧಿಕೃತ ಕಲಿಕೆಯ ಮಾಧ್ಯಮವಾಗಿದೆ. ಅನಧಿಕೃತವಾಗಿ ಮಾನವಿಕ ಅಧ್ಯಯನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕನ್ನಡವನ್ನು ಬಳಸಲಾಗುತ್ತಿದೆ. ಕರ್ನಾಟಕದ ಎಲ್ಲ ವಿಶ್ವವಿದ್ಯಾಲಯಗಳ(ಕನ್ನಡ ವಿಶ್ವವಿದ್ಯಾಲಯವನ್ನು ಹೊರತು ಪಡಿಸಿ) ಅಧಿಕೃತ ಶಿಕ್ಷಣ ಮಾಧ್ಯಮ ಇಂಗ್ಲಿಶ್ ಆಗಿದೆಯಾದರೂ ವಿದ್ಯಾರ್ಥಿಗಳು ಬಿ.ಎ, ಎಂ.ಎ ತರಗತಿಳಲ್ಲಿ ಉತ್ತರವನ್ನು ಬರೆಯುವುದಂತೂ ಕನ್ನಡದಲ್ಲೇ ಸರಿ. ಆದರೆ ವಿಜ್ಞಾನ ಮತ್ತು ತಾಂತ್ರಿಕ ವಿಷಯಗಳಲ್ಲಿ ಇಂಗ್ಲಿಶ್ ಇನ್ನೂ ತನ್ನ ಆಧಿಪತ್ಯವನ್ನು ಉಳಿಸಿಕೊಂಡಿದೆ. ಈ ವಿಷಯಗಳು ಸಾಮಾಜಿಕವಾಗಿ ಪಡೆದುಕೊಂಡಿರುವ ಮನ್ನಣೆಯಿಂದಾಗಿ ಕಲಿಕೆಯ ಮೊದಲ ಹಂತದಿಂದಲೇ ಇಂಗ್ಲಿಶ್ ಭಾಷೆಯನ್ನು ಮಾಧ್ಯಮವನ್ನಾಗಿ ಆಯ್ಕೆಮಾಡುವ ಪ್ರವೃತ್ತಿ ಹೆಚ್ಚಾಗಿದೆ. ಇದು ಸರಿಯೋ ತಪ್ಪೋ ಎಂಬುದು ಈಗ ಮುಖ್ಯ ಪ್ರಶ್ನೆಯಾಗಿ ಉಳಿದಿಲ್ಲ. ಇಂಗ್ಲಿಶಿನ ಮೂಲಕ ಕಲಿತರೂ ಕನ್ನಡದ ಸಾಹಚರ್ಯವನ್ನು ಮಕ್ಕಳಲ್ಲಿ ಉಳಿಸುವಂತೆ ಮಾಡುವುದು ಹೇಗೆ ಎಂಬುದಷ್ಟೇ ನಮಗೀಗ ಉಳಿದಿರುವ ಆಯ್ಕೆಯೆಂದು ತೋರುತ್ತದೆ.

ಆದರೆ ಮೊದಲ ಭಾಷೆ (ಕೆಲವರು ಹೇಳುವಂತೆ ಮಾತೃ ಭಾಷೆ)ಯ ಮೂಲಕ ಕಲಿಕೆ ನಡೆಯದಿದ್ದರೆ ಅದು ಮಕ್ಕಳಿಗೆ ಹಿಂಸೆಯಾಗುತ್ತದೆ ಎನ್ನುವುದನ್ನು ಸದ್ಯಕ್ಕೆ ಒಪ್ಪಿದರೂ ನಮ್ಮ ಸಮಾಜದ ರಚನೆಯ ಕೆಲವು ಲಕ್ಷಣಗಳ ಹಿನ್ನಲೆಯಲ್ಲಿ ಹಲವಾರು ಸಮಸ್ಯೆಗಳು ಉಂಟಾಗುತ್ತವೆ. ಉದಾಹರಣೆಗೆ ಭಾರತದಲ್ಲಿ ಅಧಿಕೃತವಾಗಿ ೧೬೫೦ ಮಾತೃ ಭಾಷೆಗಳನ್ನಾಡುವ ಜನರಿದ್ದಾರೆ. ಇವುಗಳಲ್ಲಿ ಕಲಿಕೆಯ ಮಾಧ್ಯಮವಾಗಿ ಬಳಕೆಯಾಗುತ್ತಿರುವ ಭಾಷೆಗಳ ಸಂಖ್ಯೆ ಐವತ್ತರ ಆಸುಪಾಸಿನಲ್ಲಿವೆ. ಉಳಿದ ಭಾಷೆಗಳ ಮೂಲಕ ಕಲಿಕೆ ನಡೆಸುವುದು ಸಾಧ್ಯವಾಗುತ್ತಿಲ್ಲ. ಹಾಗೆ ಕಲಿಸಲು ಮಾಡಿದ ಪ್ರಯತ್ನಗಳು ಪೂರ್ಣವಾಗಿ ಗೆಲುವನ್ನು ಕಂಡಿಲ್ಲ. ಆ ಭಾಷೆಗಳನ್ನಾಡುವ ಜನರು ತಮ್ಮ ಮಕ್ಕಳಿಗೆ ತಮ್ಮದೇ ಭಾಷೆಯ ಮೂಲಕ ಕಲಿಸುವುದರಿಂದ ಅವರಿಗಿರುವ ಅವಕಾಶಗಳು ಕಡಿಮೆಯಾಗುತ್ತವೆ ಎಂದು ವಾದಿಸುತ್ತಿದ್ದಾರೆ. ಕರ್ನಾಟಕದ ಪರಿಸ್ಥಿತಿ ಇದಕ್ಕಿಂತ ಬೇರೆಯಾಗಿಲ್ಲ. ಬುಡಕಟ್ಟು ಜನರ ಭಾಷೆಗಳಿರಲಿ ಸಾಕಷ್ಟು ಜನರು ಬಳಸುವ 'ಸಾಮಾಜಿಕ' ಭಾಷೆಗಳಾದ ತುಳು,ಕೊಡಗು,ಲಂಬಾಣಿ ಭಾಷೆಗಳ ಮೂಲಕ ಕೂಡ ಕಲಿಕೆಯು ನಡೆಯುತ್ತಿಲ್ಲ.

ಇಂತಹ ಪರಿಸ್ಥಿತಿಯನ್ನು ಮನಗಂಡವರು ಕಲಿಕೆಗೆ ಮೊದಲ ಭಾಷೆಯನ್ನು ಮಾಧ್ಯಮವಾಗಿ ಬಳಸಬೇಕು ಎನ್ನುವ ಬದಲು ಪ್ರಾದೇಶಿಕ ಭಾಷೆಯನ್ನು ಬಳಸಬೇಕು ಎಂಬ ವಾದವನ್ನು ಮಂಡಿಸುತ್ತಾರೆ. ಯುನೆಸ್ಕೋ ಕೂಡ ತನ್ನ ಐವತ್ತರ ದಶಕದ ಖ್ಯಾತ ದಾಖಲೆಯಲ್ಲಿ ಮಾತೃ ಭಾಷೆಯಲ್ಲಿ ಕಲಿಸಬೇಕು ಎಂದು ಹೇಳುವ ಬದಲು ವರ್ನಾಕ್ಯುಲರ್( ದೇಶೀಯ ಎಂದು ಹೇಳೋಣ) ಭಾಷೆಗಳನ್ನು ಕಲಿಕೆಯ ಮಾಧ್ಯಮಗಳನ್ನಾಗಿ ಬಳಸಬೇಕು ಎಂದು ಹೇಳಿದೆ. ವಸಾಹತು ಆಡಳಿತದಿಂದ ಬಿಡುಗಡೆ ಪಡೆದ ನೂರಾರು ರಾಷ್ಟ್ರಗಳ ಸಂದರ್ಭದಲ್ಲಿ ಯುನೆಸ್ಕೋದ ವಿಚಾರವನ್ನು ಅರ್ಥ ಮಾಡಿಕೊಳ್ಳಬೇಕು. ಇಂಗ್ಲಿಶ್, ಫ್ರೆಂಚ್,ಸ್ಪ್ಯಾನಿಶ್,ಡಚ್,ಪೋರ್‍ಚುಗೀಸ್ ಮುಂತಾದ ವಸಾಹತು ಭಾಷೆಗಳ ಜಾಗದಲ್ಲಿ ದೇಶಿಯ ಭಾಷೆಗಳನ್ನು ಕಲಿಕೆಯ ಮಾಧ್ಯಮಗಳನ್ನಾಗಿ ಬಳಸಲು ಸಲಹೆ ನೀಡಿದ್ದು ಸರಿಯಾಗಿಯೇ ಇದೆ. ಈ ಕಾರಣದಿಂದಾಗಿಯೇ ಕಳೆದ ಶತಮಾನ ಆರು,ಏಳನೆಯ ದಶಕಗಳಲ್ಲಿ ದೇಶೀಯ ಭಾಷೆಗಳನ್ನು ಕಲಿಕೆಯ ಮಾಧ್ಯಮಗಳನ್ನಾಗಿ ಬಳಸಲು ಜಾಗತಿಕವಾಗಿ ಹೆಚ್ಚಿನ ಪ್ರಯತ್ನಗಳು ನಡೆದವು. ಕನ್ನಡದಲ್ಲೂ ಇಂತಹ ಯತ್ನಗಳು ನಡೆದವು.

ಚಾರಿತ್ರಿಕ ಸಂದರ್ಭವನ್ನು ಅವಲಂಬಿಸಿದ ಮೇಲಿನ ವಿಚಾರಗಳನ್ನು ಒಪ್ಪಿದರೆ ಮೊದಲ ಭಾಷೆಯಲ್ಲಿ ಕಲಿಕೆ ನಡೆಯ ಬೇಕೆನ್ನುವುದಕ್ಕೆ ಭಾವುಕವಾದ ಕಾರಣಗಗಳನ್ನು ಅಥವಾ ಶೈಕ್ಷಣಿಕ ತತ್ವಗಳನ್ನು ಅಧರಿಸಿದ ಕಾರಣಗಳನ್ನು ನೀಡುವ ವಾದವನ್ನು ಒಪ್ಪುವುದು ಸಾಧ್ಯವಾಗುವುದಿಲ್ಲ. ಆ ವಾದದ ತಿರುಳು ಸರಿಯೋ ತಪ್ಪೋ ಎನ್ನುವುದು ಮುಖ್ಯವಲ್ಲ, ವಾಸ್ತವವಾಗಿ ಹಾಗೆ ನಡೆಯುವುದು ಸಾಧ್ಯವೋ ಇಲ್ಲವೋ ಎನ್ನುವುದಷ್ಟೇ ನಮಗೆ ಮುಖ್ಯ.

ಶಿಕ್ಷಣವೆನ್ನುವುದು ಈಗ ವ್ಯಕ್ತಿಗತ ನೆಲೆಯ ವ್ಯಾಖ್ಯಾನಕ್ಕೆ ಒಳಗಾಗುವ ಪ್ರಕ್ರಿಯೆಯಾಗಿ ಉಳಿದಿಲ್ಲ. ಅದೀಗ ಸಾಮಾಜೀಕರಣದ ಒಂದು ಸಾಧನ. ಪಾರಂಪರಿಕ ಉತ್ಪಾದನಾ ವಿಧಾನಗಳನ್ನು ಬಿಟ್ಟುಕೊಟ್ಟ ಸಮಾಜ ಹೊಸಬಗೆಯ ದುಡಿಮೆಗಳಿಗಾಗಿ ತನ್ನ ಎಳೆಯ ತಲೆಮಾರನ್ನು ಕಟ್ಟುತ್ತಿರುತ್ತದೆ. ಹಾಗಾಗಿ ಕಲಿಕೆ ಎನ್ನುವುದು ಈ ಸಾಮಾಜಿಕ ಜವಾಬ್ದಾರಿಯ ನಿರ್ವಹಣೆಯಾಗಿದೆ. ಇಲ್ಲಿ ಕಲಿಕೆಯು ಯಾವ ಭಾಷೆಯಲ್ಲಿ ಆಗಬೇಕು ಎನ್ನುವುದನ್ನು ಚಾರಿತ್ರಿಕವಾದ ಮತ್ತು ಸಾಮಾಜಿಕವಾದ ಸಂಗತಿಗಳು ನಿರ್ದೇಶಿಸುತ್ತಿರುತ್ತವೆ. ಹೀಗಾದಾಗ ಕನ್ನಡದಂತಹ ಭಾಷೆಗಳಿಗೆ ಹಲವಾರು ಅಡ್ಡಿಆತಂಕಗಳು ಬರುವುದು ಸಹಜ. ನಾವು ಕನ್ನಡಪರ ಇಲ್ಲವೇ ಕನ್ನಡ ವಿರೋಧ ಎನ್ನುವ ನೆಲೆಯಲ್ಲಿ ಯೋಚಿಸುತ್ತ ಕೂರುವುದು ಈಗ ಸಾಧ್ಯವಿಲ್ಲ. ಸಾಮಾಜಿಕ ಆಶೋತ್ತರ ಮತ್ತು ಸಾಂಸ್ಕೃತಿಕ ಅಪೇಕ್ಷೆಗಳ ನಡುವೆ ಸಹಬಾಳ್ವೆ ಹೇಗೆ ನಡೆಯಬೇಕು ಎಂಬ ಕಡೆಗೆ ನಮ್ಮ ಚಿಂತನೆ ಮತ್ತು ಕಾರ್ಯಯೋಜನೆಗಳು ರೂಪಗೊಳ್ಳ ಬೇಕು. ಹೀಗಾಗಿ ಕನ್ನಡ ಇಲ್ಲವೇ ಇಂಗ್ಲಿಶ್ ಎನ್ನುವ ನಿಲುವಿಗಿಂತ ಕನ್ನಡ ಮತ್ತು ಇಂಗ್ಲಿಶ್ ಎಂದು ಗ್ರಹಿಸುವುದು ಹೆಚ್ಚು ಸೂಕ್ತ. ಹೀಗೆ ಗ್ರಹಿಸಿದಾಗ ಕನ್ನಡ ಯಾವಾಗಲೂ ದುರ್ಬಲವಾಗಿಯೇ ಇರುತ್ತದೆ ಎಂದು ತಿಳಿಯಬೇಕಾಗಿಲ್ಲ. ಬದಲಾವಣೆಯ ಮಿಡಿತಗಳಿಗೆ ಅನುಗುಣವಾಗಿ 'ನಮ್ಮ ಕನ್ನಡ'ವನ್ನು ಹೊಂದಿಸಿಕೊಂಡರೆ ಅದು ಸಾಕಷ್ಟು ಸಬಲವಾಗಿ ಮತ್ತು ತನ್ನ ಜಾಗವನ್ನು ಕಾಯ್ದುಕೊಳ್ಳಲು ಶಕ್ತವಾಗಬಲ್ಲುದು. ಹಾಗಿಲ್ಲದೆ ಕನ್ನಡದ ಚಲನಶೀಲತೆಯನ್ನು ನಿರಾಕರಿಸಿ ಭಾವುಕ ನೆಲೆಯಲ್ಲಿ 'ಕಾಯ್ದುಕೊಳ್ಳುವ' ಹಾದಿ ಹಿಡಿದರೆ ಅದರಿಂದ ಆಗುವ ಪ್ರಯೋಜನಗಳು ಕಡಿಮೆ.

ವಿರುದ್ಧ ಪದ, ನಿಷೇಧ ಪದ: ಹೀಗೆಂದರ್‍ಏನು?

ನಮ್ಮ ಶಾಲೆಗಳಲ್ಲಿ ಮಕ್ಕಳಿಗೆ ಕನ್ನಡವನ್ನು ಕಲಿಸುವಾಗ ಕೆಲವು ಪದಗಳನ್ನು ನೀಡಿ ಅವುಗಳಿಗೆ 'ವಿರುದ್ಧಾರ್ಥ'ವನ್ನು ಬರೆಯಲು ಹೇಳುತ್ತಾರೆ. ಎಲ್ಲ ಪಾಠಗಳ ಕೊನೆಯಲ್ಲಿ ಬರುವ ಭಾಷಾಭ್ಯಾಸವೆಂಬ ಭಾಗದಲ್ಲಿ ಈ ವಿರುದ್ಧಾರ್ಥದ ಅಭ್ಯಾಸ ಸಾಮಾನ್ಯವಾಗಿ ಇದ್ದೇ ಇರುತ್ತದೆ. ತಂದೆ ತಾಯಂದಿರು ಕೆಲವೊಮ್ಮೆ ಮಕ್ಕಳ ಮನೆಗೆಲಸವನ್ನು ಮುಗಿಸುವ ಹೊಣೆ ಹೊತ್ತಾಗ ಹೀಗೆ ವಿರುದ್ಧಾರ್ಥಗಳನ್ನು ಮಕ್ಕಳಿಗೆ ಹೇಳಿಕೊಡ ಬೇಕಾದ ಪ್ರಸಂಗವನ್ನು ಎದುರಿಸುತ್ತಾರೆ. ಆಗ ಕನ್ನಡ'ಬಲ್ಲವರನ್ನು" ಹುಡುಕಿಕೊಂಡು ತಂದೆ ತಾಯಂದಿರು ಹೋಗುವುದುಂಟು. ಫೋನಿನಲ್ಲಿ ಕೇಳುವುದೂ ಉಂಟು. ಅಂತೂ ಎಲ್ಲರೂ ಈ ವಿದುದ್ಧ ಪದಗಳಿಗಾಗಿ ಹುಡುಕಾಟವನ್ನು ಮುಂದುವರೆಸುತ್ತಾರೆ. ಇದರಿಂದ ದೊರಕುವುದೇನು? ರಾತ್ರಿಗೆ ಹಗಲು, ಗಂಡನಿಗೆ ಹೆಂಡತಿ, ಬಿಳಿಗೆ ಕಪ್ಪು, ಎಡಕ್ಕೆ ಬಲ, ಆಕಾಶಕ್ಕೆ ಭೂಮಿ,ಬೆಂಕಿಗೆ ನೀರು, ಹಿಂದೂಗೆ ಮುಸ್ಲಿಂ,ಬಡವನಿಗೆ ಬಲ್ಲಿದ ಹೀಗೆ ಇನ್ನೂ ಹಲವು ಸೋಜಿಗದ ಪದ ಜೋಡಿಗಳು ನಿಮಗೆ ಸಿಗುತ್ತವೆ. ಕೆಲವೊಮ್ಮೆ ಒಂದೇ ಪದಕ್ಕೆ ಒಂದಕ್ಕಿಂತ ಹೆಚ್ಚು ವಿರುದ್ಧ ಪದಗಳು ತಾಮುಂದು ತಾಮುಂದು ಎಂದು ಪೈಪೋಟಿ ನಡೆಸುತ್ತವೆ.ಯಾವುದು ಸರಿಯಾದ ವಿರುದ್ಧ ಪದ ಎಂದು ತೀರ್ಮಾನಿಸುವುದು ಅಷ್ಟು ಸುಲಭವೇನಲ್ಲ. ಉದಾಹರಣೆಗೆ ಸಿಹಿಗೆ ಕಹಿ ವಿರುದ್ಧ ಪದವೆಂದು ತಿಳಿದರೆ ಏನಾಗುತ್ತದೆ? ಸಿಹಿಯಲ್ಲದುದು ಕಹಿಯಾಗಿ ಇರುತ್ತದೆ ಎಂದು ಹೇಳಬೇಕಾಗುತ್ತದೆ. ಆದರೆ ಸಿಹಿಯಲ್ಲದುದು ಕಹಿಯಾಗಿಯೇ ಇರಬೇಕಿಲ್ಲವಲ್ಲ. ಸಿಹಿಯಲ್ಲದ ಆದರೆ ಕಹಿಯೂ ಅಲ್ಲದ ಹಲವು ರುಚಿಗಳು ಇವೆಯಲ್ಲವೇ? ಅಂದರೆ ವಿರುದ್ಧ ಅರ್ಥವುಳ್ಳ ಪದಗಳು ಎಂಬ ಚಿಂತನೆಯೇ ಸರಿಯಾದುದಲ್ಲ.

ಈ ಗೊಂದಲ ಇಲ್ಲಿಗೇ ಮುಗಿಯುವುದಿಲ್ಲ. ಶಾಲಾ ಪುಸ್ತಕಗಳು ನಿಷೇಧ ಪದಗಳು ಎಂಬ ಇನ್ನೊಂದು ಗುಂಪನ್ನು ಮಾಡಿಕೊಳ್ಳುತ್ತವೆ. ನೀತಿ-ಅನೀತಿ, ಅರ್ಥ-ಅನರ್ಥ, ಆಚಾರ-ಅನಾಚರ,ಆಹಾರ-ನಿರಾಹಾರ,ನಿಶ್ಚಿತ-ಅನಿಶ್ಚಿತ, ಕಲ್ಮಶ-ನಿಷ್ಕಲ್ಮಶ, ತಂತು-ನಿಸ್ತಂತು ಹೀಗೆ ಪದಪಟ್ಟಿಯನ್ನು ಬೆಳೆಸಬಹುದು. ಇವೆಲ್ಲ ಪದ ಮತ್ತು ನಿಷೇಧ ಪದಗಳ ಜೋಡಿಗಳು. ಈ ಪಟ್ಟಿಯನ್ನು ಗಮನಿಸಿದರೆ ಇವೆಲ್ಲವೂ ಸಂಸ್ಕೃತದಿಂದ ಕನ್ನಡಕ್ಕೆ ಬಂದ ಪದಗಳು ಎಂಬುದು ತಿಳಿಯುತ್ತದೆ. ಅಲ್ಲದೆ ಜೋಡಿ ಪದಗಳಲ್ಲಿ ಮೊದಲ ಪದಕ್ಕೆ ಮೊದಲಲ್ಲಿ ಏನನ್ನೋ ಕೂಡಿಸುವುದರಿಂದ ನಿಷೇಧ ಪದವನ್ನು ಪಡೆದಿರುವುದೂ ತಿಳಿಯುತ್ತದೆ. ಅಂದರೆ ನಿಷೇಧ ಪದಗಳು ಪದರಚನೆಯ ನೆಲೆಯಲ್ಲಿ ರೂಪುಗೊಳ್ಳುತ್ತವೆ. ಅವುಗಳಲ್ಲಿ ಒಂದು ಮೂಲಪದವಾಗಿದ್ದು ಇನ್ನೊಂದನ್ನು ಗೊತ್ತುಪಡಿಸಿದ ನಿಯಮದ ಮೂಲಕ ನಾವು ರಚಿಸಿಕೊಳ್ಳುತ್ತೇವೆ. ಮೇಲೆ ನೀಡಿದ ಪದಜೋಡಿಗಳನ್ನು ಕೊಂಚ ಎಚ್ಚರಿಕೆಯಿಂದ ಗಮನಿಸಿದರೆ ಹೀಗೆ ನಿಷೇಧ ಪದಗಳನ್ನು ರಚಿಸುವಾಗ ಎರಡು ವಿಧಾನಗಳನ್ನು ನಾವು ಅನುಸರಿಸುವುದು ಗೊತ್ತಗುತ್ತದೆ. ಒಂದು ವಿಧಾನದಲ್ಲಿ ಮೂಲ ವಸ್ತು ಅಥವಾ ಗುಣ 'ಇಲ್ಲದಿರುವ' ಸ್ಥಿತಿಯನ್ನು ಸೂಚಿಸಲು ನಿಷೇಧ ರೂಪವನ್ನು ರಚಿಸುತ್ತೇವೆ. ಉದಾಹರಣೆಗೆ ಈ ಮುಂದಿನ ಪದಗಳ ಜೋಡಿಯನ್ನು ಗಮನಿಸಿ. ಚಿಂತೆ-ನಿಶ್ಚಿಂತೆ,ಫಲ-ನಿಷ್ಫಲ,ಜಲ-ನಿರ್ಜಲ,ಜನ-ನಿರ್ಜನ,ಚಲ-ನಿಶ್ಚಲ,ಶೇಷ-ನಿಶ್ಶೇಷ ಇತ್ಯಾದಿ. ಇವುಗಳಲ್ಲಿ ಮೊದಲ ಪದ ಸೂಚಿಸುವ ಗುಣ ಇಲ್ಲವೇ ಸ್ಥಿತಿಯು 'ಇಲ್ಲದಿರುವುದನ್ನು' ಎರಡನೆಯ ಪದ ಸೂಚಿಸುತ್ತದೆ. ಇನ್ನೊಂದು ನಿಷೇಧ ರಚನೆಯ ಬಗೆಯಲ್ಲಿ ಒಂದು ಪದ ಸೂಚಿಸುವ ಗುಣ ಇಲ್ಲವೇ ಸ್ಥಿತಿಯು 'ಅಲ್ಲದಿರುವುದನ್ನು' ನಿಷೇಧ ಪದದ ಮೂಲಕ ಸೂಚಿಸುತ್ತೇವೆ. ಈ ಮುಂದಿನ ಪದಜೋಡಿಗಳನ್ನು ಗಮನಿಸಿ. ಹಿಂಸೆ-ಅಹಿಂಸೆ, ಹಿತ-ಅಹಿತ, ಕಾಲ-ಅಕಾಲ, ವೇಳೆ-ಅವೇಳೆ, ಉದಾರ-ಅನುದಾರ, ಧೈರ್ಯ-ಅಧೈರ್ಯ, ನೀತಿ-ಅನೀತಿ ಇತ್ಯಾದಿ. ಇಲ್ಲೆಲ್ಲಾ ಮೊದಲ ಪದದಲ್ಲಿ ಸೂಚಿತವಾಗುವುದನ್ನು ಎರಡನೆಯ ಪದ ಅಲ್ಲಗಳೆಯುತ್ತದೆ. ಕನ್ನಡದ 'ಇಲ್ಲ' ಮತ್ತು 'ಅಲ್ಲ' ಎಂಬ ಪದಗಳ ಕೆಲಸವನ್ನು ಮೇಲೆ ಹೇಳಿದ ನಿಷೇಧ ರೂಪಗಳು ಮಾಡುತ್ತಿವೆ.ಹಾಗೆ ನೋಡಿದರೆ ಹೀಗೆ ಪದರಚನೆಯ ಮೂಲಕ ನಿಷೇಧ ರೂಪಗಳನ್ನು ರಚಿಸುವ ವಿಧಾನ ಕನ್ನಡದಲ್ಲಿ ಇಲ್ಲ. ನಾವು ಈ ಪದ ಜೋಡಿಗಳನ್ನು ನೇರವಾಗಿ ಸಂಸ್ಕೃತದಿಂದ ಪಡೆದುಕೊಂಡಿದ್ದೇವೆ. ಕನ್ನಡದ್ದೇ ಆದ ನಿಷೇಧ ರೂಪರಚನೆಯ ನಿಯಮಗಳು ಇಲ್ಲ. ಸಂಸ್ಕೃತದ ಈ ಪದರಚನೆಯ ನಿಯಮವನ್ನು ಕನ್ನಡದ ಮಕ್ಕಳು ತಮ್ಮಶಾಲಾ ಶಿಕ್ಷಣದ ಹಂತದಲ್ಲಿ ಕಲಿಯಬೇಕೆ ಬೇಡವೇ ಎಂಬುದು ಬೇರೆಯೇ ಪ್ರಶ್ನೆ. ಅಂದರೆ ಈ ಪದಜೋಡಿಗಳಲ್ಲಿ ಒಂದೊಂದು ಪದವನ್ನು ಮಕ್ಕಳು ಸ್ವತಂತ್ರ ಪದಗಳಾಗಿಯೇ ಕಲಿಯುತ್ತಾರೆಯೇ ಹೊರತು. ಒಂದು ಮೂಲಪದವನ್ನು ಕಲಿತು ಅದಕ್ಕೆ ನಿಷೇಧ ಪ್ರತ್ಯಯವನ್ನು ಹತ್ತಿಸುವ ನಿಯಮವನ್ನು ಬಳಸುವುದಿಲ್ಲ. ಸದ್ಯ ನಾವಿಲ್ಲಿ ಈ ವಿವರಗಳನ್ನು ಕುರಿತು ಚರ್ಚಿಸುವುದು ಬೇಕಾಗಿಲ್ಲ.

ಆದರೆ ವಿರುದ್ಧ ಪದಗಳು ಹೀಗಲ್ಲ. ಒಂದು ಪದ ಸೂಚಿಸುವ ವಸ್ತು ಇಲ್ಲವೇ ಸ್ಥಿತಿ ವಿರುದ್ಧವಾದ ವಸ್ತು ಇಲ್ಲವೇ ಸ್ಥಿತಿ ನಮ್ಮ ಸುತ್ತಣ ಜಗತ್ತಿನಲ್ಲಿ ಇರುತ್ತದೆ ಎನ್ನುವ ಊಹೆಯ ಮೇಲೆ ಈ ವಿರುದ್ಧ ಪದಗಳ ನೆಲೆಗಟ್ಟು ನಿಂತಿದೆ. ಇದು ಪದರಚನೆಯ ನೆಲೆಗೆ ಸಂಬಂಧಿಸಿದ್ದಲ್ಲ. ಲೋಕ ಗ್ರಹಿಕೆಯ ನೆಲೆಗೆ ಸಂಬಂಧಿಸಿದೆ. ಅಂದರೆ ಲೋಕವನ್ನು ಅದರ ಬಿಡಿಬಿಡಿ ನೆಲೆಗಳನ್ನು ನಾವು ಗ್ರಹಿಸುವಾಗಲೇ ಪ್ರತಿಯೊಂದಕ್ಕೂ ಅದಕ್ಕೆ ವಿರುದ್ಧವಾದುದು ಇರುತ್ತದೆ ಎನ್ನುವ ನೆಲೆಯಲ್ಲೇ ಗ್ರಹಿಸುವಂತೆ ಮಾಡುವುದು ಎಷ್ಟು ಸರಿಯಾದುದುದು? ನಾವು ವಿರುದ್ಧ ಪದಗಳು ಎಂದು ಸಾಮಾನ್ಯವಾಗಿ ಶಾಲೆಯಲ್ಲಿ ಹೇಳಿಕೊಡುತ್ತಿರುವ ಪದಗಳಲ್ಲಿ ಕೆಲವನ್ನು ಆಯ್ದು ಈಗ ಈ ಬಗೆಯ ಗ್ರಹಿಕೆಯಲ್ಲಿ ಇರುವ ಎಡರುತೊಡರುಗಳೇನು ಎಂಬುದನ್ನು ತಿಳಿಯೋಣ. ಮಿತ್ರ ಎಂಬುದಕ್ಕೆ ಶತ್ರು ವಿರುದ್ಧ ಪದ ಎಂದು ಹೇಳಿದರೆ ಏನಾಗುತ್ತದೆ? ಇವೆರಡೂ ಸಾಪೇಕ್ಷ ಮತ್ತು ಸ್ವತಂತ್ರ ಸ್ಥಿತಿಗಳು. ನನಗೆ ಮಿತ್ರನಲ್ಲದ ವ್ಯಕ್ತಿ ನನಗೆ ಶತ್ರು ಆಗಿರಲೇ ಬೇಕಾಗಿಲ್ಲ. ಅಲ್ಲದೆ ಮಿತ್ರ ಮತ್ತು ಶತ್ರು ಎಂಬುದು ಯಾರು ಆ ಪದಗಳನ್ನು ಬಳಸುತ್ತಿದ್ದಾರೆ ಎಂಬುದನ್ನು ಅವಲಂಬಿಸಿ ಬದಲಾಗುತ್ತಲೇ ಹೋಗುತ್ತವೆ. ಮಿತ್ರ ಮತ್ತು ಶತ್ರು ಎಂಬ ಪದಗಳಿಂದ ಮಿತ್ರಪಕ್ಷ,ಶತ್ರುಪಕ್ಷ (ಅಥವಾ ಮಿತ್ರದೇಶ ಮತ್ತು ಶತ್ರುದೇಶ) ಎಂಬ ಪದಗಳನ್ನು ಪಡೆದುಕೊಂಡೆವು ಎಂದುಕೊಳ್ಳೋಣ. ಈ ಪದಗಳಿಗೆ ನಿರ್ದಿಷ್ಟವಾದ ಮತ್ತು ಕಾಲದೇಶ ಬದ್ಧವಲ್ಲದ ವ್ಯಾಖ್ಯಾನ ಇರುವುದು ಸಾಧ್ಯವೇ ಇಲ್ಲ. ಅಂದರೆ ಆ ಪದಗಳು ಹೇಗೆ ವಿರುದ್ಧ ಪದಗಳಾಗಬಲ್ಲವು? ಇದೇ ಬಗೆಯಲ್ಲಿ ವಿರುದ್ಧ ಪದಗಳ ಜೋಡಿಗಳನ್ನು ನಾವು ಬೇರೆಬೇರೆಯಾಗಿ ತೆಗೆದುಕೊಂಡು ನೋಡಬಹುದು. ಎಲ್ಲ ಕಡೆಗಳಲ್ಲೂ ಆ ಪದಗಳ ನಡುವೆ ವಿರುದ್ಧವಾದುದು ಏನೂ ಇರುವುದಿಲ್ಲ. ನಾವು ಆ ವಿರುದ್ಧ ಸ್ಥಿತಿಯನ್ನು ಆರೋಪಿಸುತ್ತೇವೆ. ಆ ಆರೋಪಿತ ಸ್ಥಿತಿಯನ್ನು ಮಕ್ಕಳಿಗೆ ಕಲಿಯ ಮೂಲಕ ರವಾನಿಸುತ್ತೇವೆ. ತನ್ನದು ತನ್ನದಲ್ಲದು ಅತ್ನವಾ ಸ್ವ ಮತ್ತು ಅನ್ಯ ಎಂಬ ಒಡೆದ ಸ್ಥಿತಿಯನ್ನು ಮೀರುವುದು ಎಲ್ಲ ಕಲಿಕೆಗಳ ಗುರಿಯಾಗ ಬೇಕಾಗಿರುವಾಗ ನಮಗೆ ಗೊತ್ತಿಲ್ಲದಂತೆ ಈ ನಿರಾಕರಣಗೊಳ್ಳಬೇಕಾದ ಮನೋಭಾವವೇ ನಮ್ಮ ಮಕ್ಕಳಲ್ಲಿ ಮೊಳಕೆಯೊಡುವಂತೆ ನಾವು ಮಾಡುತ್ತಿದ್ದೇವೆಯೇ?

ಇದೆಲ್ಲ ನಮ್ಮ ಕಲಿಕೆಯಲ್ಲಿ ಬೇರೂರಿದ್ದು ಹೇಗೆ? ವಸಾಹತು ಆಡಳಿತಕ್ಕೆ ಮಾದರಿಯಾಗಿದ್ದ ಪಬ್ಲಿಕ್ ಶಾಲೆಗಳ ಶಿಕ್ಷಣವು ಸಮಾನತಾ ಭಾವವನ್ನು ಬೆಳೆಸುವ ಗುರಿಯನ್ನು ಹೊಂದಿರಲಿಲ್ಲ.ತರತಮ ಭಾವವನ್ನೇ ಬೆಳೆಸಲು ಮುಂದಾಗಿದ್ದ ವಸಾಹತು ಮಾದರಿಯ ಕಲಿಕೆಯಲ್ಲಿ ಭಾಷಾ ಪಠ್ಯಕ್ರಮವು,ಮುಖ್ಯವಾಗಿ ಇಂಗ್ಲಿಶ್ ಭಾಷಾ ಕಲಿಕೆಯ ಪಠ್ಯ ಕ್ರಮವು ಸಿನಾನಿಮ್ ಮತ್ತು ಆಂಟಾನಿಮ್ ಗಳೆಂಬ ಪರಿಕಲ್ಪನೆಗಳನ್ನು ರೂಢಿಗೊಳಿಸಿತ್ತು. ನಾವು ಕಣ್ಣುಮುಚ್ಚಿ ಅದನ್ನೇ ನಮ್ಮ ಕಲಿಕೆಗೂ ನಕಲು ಮಾಡಿಕೊಂಡಿದ್ದರ ಪರಿಣಾಮವೇ ಇದು.ಕೊನೆಯ ಪಕ್ಷ ಉದ್ದೇಶದಲ್ಲಾದರೂ ಸಮಾನತಾ ಭವನ್ನು ಬೆಳೆಸುವ ಗುರಿ ನಮ್ಮ ಶಿಕ್ಷಣಕ್ಕೆ ಇದೆ.ಹಾಗಿದ್ದ ಮೇಲೆ ಇನ್ನಾದರೂ ಎಚ್ಚತ್ತು ಬದಲಾಗಬೇಕಲ್ಲವೇ?

ಊರಿಗೆಷ್ಟು ಹೆಸರು?

ನಾಡಿನ ತಿಳಿದ ಮಂದಿ ಊರುಗಳ ಹೆಸರು ಬದಲಾಯಿಸುವ ಉಮೇದನ್ನು ತೋರುತ್ತಿದ್ದಾರೆ.ಇದರಿಂದ ನಾಡಿನ ಜನರಿಗೆ ತಮ್ಮತನವನ್ನು ಕಾಯ್ದುಕೊಳ್ಳುವ ದಾರಿ ಸಿಗುತ್ತದೆ ಎನ್ನುತ್ತಿದ್ದಾರೆ. ಬೇರೆಯವರು ಬದಲಾಯಿಸಿದ ಹೆಸರನ್ನು ನಾವು ಮತ್ತೆ ಮೊದಲಿನಂತೆ ಮಾಡುವುದರಿಂದ ಕನ್ನಡದ ಚಹರೆಯನ್ನು ಕಾಯ್ದುಕೊಂಡಂತೆ ಆಗುವುದೆಂದು ಹೇಳುತ್ತಿದ್ದಾರೆ. ಹೀಗೆ ಹೆಸರು ಬದಲಾಯಿಸಬೇಕಾದ ಊರುಗಳ ಪಟ್ಟಿಯನ್ನು ಜನರು ತಮ್ಮಪಾಡಿಗೆ ತಾವು ತಯಾರಿಸುತ್ತಿದ್ದಾರೆ. ಈ ಹೊತ್ತಿನಲ್ಲಿ ಕೊಂಚ ಈ ಬಗ್ಗೆ ಬೇರೊಂದು ಕಡೆಯಿಂದ ನೋಡುವುದು ಆಗುವಂತಿದ್ದರೆ ಹಾಗೆ ಮಾಡಬೇಕಲ್ಲವೇ?

ನಾಡಿನ ಊರುಗಳಿಗೆ ಯಾರು ಹೆಸರನ್ನಿಟ್ಟರೋ ಯಾರಿಗೂ ಗೊತ್ತಿಲ್ಲ. ಆ ಊರಿನಲ್ಲಿ ನೆಲೆ ನಿಂತವರಿಗೂ ಗೊತ್ತಿರುವುದಿಲ್ಲ. ಆದರೆ ಎಲ್ಲ ಊರುಗಳ ಹೆಸರಿಗೂ ಒಂದೊಂದು ಕತೆ ಇರುತ್ತದೆ. ಕೆಲವೊಮ್ಮೆ ಒಂದಕ್ಕಿಂತ ಹೆಚ್ಚು ಕತೆಗಳೂ ಇರುತ್ತವೆ. ಈ ಕತೆಗಳು ಹೆಸರಿಟ್ಟ ಮೇಲೆ ಹುಟ್ಟಿದವು. ಅದಕ್ಕಾಗಿ ಬೇರೆ ಬೇರೆ ಕತೆಗಳು ಒಂದೇ ಹೆಸರಿಗೆ ಅಂಟಿಕೊಂಡಿರುತ್ತವೆ. ಈ ಹೆಸರುಗಳು ಜನರ ಬಾಯಲ್ಲಿ ಬಳಕೆಯಾಗುವಾಗ ಬದಲಾಗುತ್ತಾ ಹೋಗುತ್ತವೆ. ನೂರಾರು ವರುಷಗಳು ಕಳೆದ ಹಾಗೆ ಹೆಸರುಗಳು ಮೊದಲಿನ ಹಾಗೆ ಇರದೇ ಗುರುತಿಸಲೂ ಆಗದ ಹಾಗೆ ಬದಲಾಗಿಬಿಟ್ಟಿರುತ್ತವೆ. ಜನರ ಬಾಯಲ್ಲಿ ಬದಲಾಗುವ ಹಾಗೆಯೇ ಆಗಾಗ ಬದಲಾಗುತ್ತಿದ್ದ ಅರಸರು ಊರುಗಳ ಹೆಸರನ್ನು ಬದಲಾಯಿಸುತ್ತಿದ್ದರು.ಇಂದಿನ 'ಚಾಮರಾಜ ನಗರ' ಹಿಂದೆ 'ಅರಿಕೊಠಾರ'ವಾಗಿತ್ತು. ಮೈಸೂರು ಅರಸರು ಅದನ್ನು ಬದಲಾಯಿಸಿದರು. ನಾಡಿನ ಕಲ್ಬರಹಗಳಲ್ಲಿ ಒಂದು ಊರಿನ ಹೆಸರಿನ ಜೊತೆಗೆ ಅದಕ್ಕಿರುವ ಇನ್ನೊಂದು ಹೆಸರನ್ನು 'ಪ್ರತಿನಾಮ' ಎಂದು ಗುರುತಿಸಿ ಹೇಳಿರುವುದುಂಟು. ಕೆಲವೊಮ್ಮೆ ಕನ್ನಡದ ಹೆಸರುಗಳನ್ನು ಸಂಸ್ಕೃತಕ್ಕೆ ಅನುವಾದಿಸಿರುವುದೂ ಇದೆ. 'ಅತ್ತಿಬೆಲೆ'ಯು "ಔದುಂಬರಪುರ'ವಾಗುತ್ತದೆ;'ನಂಜನಗೂಡು' 'ಗರಳಪುರಿ'ಯಾಗುತ್ತದೆ;'ಹಾಡುವಳ್ಳಿ' 'ಸಂಗೀತಪುರ'ವಾಗುತ್ತದೆ.ಇನ್ನೂ ಕೆಲವೊಮ್ಮೆ ಊರುಗಳ ಹೆಸರುಗಳು ಕಳೆದುಹೋಗುವುದೂ ಉಂಟು. ಈಗ ನಾವು ಬೆಂಗಳೂರು ಎಂದು ಕರೆಯುತ್ತಿರುವ ಊರಿನಲ್ಲಿ ಸರಿಸುಮಾರು ಐವತ್ತು ಊರ ಹೆಸರುಗಳು ಕಳೆದುಹೋಗಿವೆ. ಗವಿಪುರ,ಸಿದ್ಧಾಪುರ,ಗುಟ್ಟಹಳ್ಳಿ,ಮಾರತ್ ಹಳ್ಳಿ,ಜಕ್ಕಸಂದ್ರ, ಸಾರಕ್ಕಿ,ಶಿವನ ಹಳ್ಳಿ, ಸಾಣೇ ಗುರವನ ಹಳ್ಳಿ, ಹೆಣ್ಣೂರು, ಬಾಣಸವಾಡಿ, ಹಲಸೂರು,ನಾಗಸಂದ್ರ, ಗಂಗೇನ ಹಳ್ಳಿ ಹೀಗೆ ಪಟ್ಟಿ ಇದೆ. ಇವುಗಳಲ್ಲಿ ಕೆಲವು ಹೆಸರುಗಳು ಬಡಾವಣೆಗಳ ಹೆಸರುಗಳಾಗಿ ಉಳಿದಿವೆ. ಆದರೆ ಊರ ಹೆಸರುಗಳಾಗಿ ಅಲ್ಲ.

ಇದೇನೇ ಇರಲಿ. ಹೆಸರುಗಳನ್ನು ಬಾಯಲ್ಲಿ ಹೇಳುವುದೂ ಅವನ್ನು ಬರೆಯುವುದೂ ಬೇರೆಬೇರೆ. ನಮ್ಮ ಸಾವಿರಾರು ಊರುಗಳ ಹೆಸರನ್ನು ಬರೆಯ ಬೇಕಾಗಿ ಬಂದದ್ದೇ ಈಚಿನ ವರುಷಗಳಲ್ಲಿ. ಅದರಲ್ಲೂ ಆ ಯ್ ಊರಿನ ದಾಖಲೆಗಳನ್ನು ಜತನವಾಗಿ ಇರಿಸಲು ಸರಕಾರದ ಬೇರೆ ಬೇರೆ ಇಲಾಖೆಗಳು ಮುಂದಾಗಿರುವುದರಿಂದ ಹೀಗೆ ಹೆಸರನ್ನು ಬರೆಯಬೇಕಾಗಿ ಬಂದಿದೆ. ಹೀಗೆ ಬರೆಯುವಾಗ ಒಂದೇ ಬಗೆಯಲ್ಲಿ ಬರೆಯುತ್ತಿಲ್ಲ ಎನ್ನುವುದು ಹೆಚ್ಚು ಜನರಿಗೆ ಗೊತ್ತಿಲ್ಲ. ಅಂಚೆ ಇಲಾಖೆಯವರು ಒಂದು ಬಗೆಯಲ್ಲಿ ಬರೆದಿದ್ದರೆ,ಕಂದಾಯ ಇಲಾಖೆಯವರು ಮತ್ತೊಂದು ಬಗೆಯಲ್ಲಿ ಬರೆದಿರುತ್ತಾರೆ. ಪಂಚಾಯತ್ ರಾಜ್ಯ ಇಲಾಖೆಯವರು,ಪೋಲಿಸಿನವರು,ಮರಾಮತ್ ಇಲಾಖೆಯವರು,ಸಮಾಜ ಕಲ್ಯಾಣ ಇಲಾಖೆಯವರು ಹೀಗೆ ಹತ್ತು ಹಲವು ಕಡೆಗಳಲ್ಲಿ ಊರಿನ ಹೆಸರನ್ನು ಬರೆಯುವುದು ಈಗ ಬೇಕಾಗಿದೆ. ಒಮ್ಮೆ ಹೀಗೆ ಬರೆಯಲು ಮೊದಲು ಮಾಡಿದ ಮೇಲೆ ಊರಿನ ಹೆಸರುಗಳಿಗೆ ಎರಡು ರೂಪಗಳು ಉಳಿದುಕೊಳ್ಳುತ್ತವೆ. ಮಾತಿನ ರೂಪ ಮತ್ತು ಬರೆಹದ ರೂಪ. ಮಾತಿನ ರೂಪ ಮೊದಲಿನಂತೆ ಜನರ ನೆನಪನ್ನು ಹೊಂದಿಕೊಂಡು ಬದಲಾಗುವುದಿಲ್ಲ. ಬರೆದ ಬಗೆಯನ್ನು ಅನುಸರಿಸಿ ತನ್ನದೇ ಆದ ನೆಲೆಯೊಂದನ್ನು ಕಂಡುಕೊಳ್ಳುತ್ತದೆ. ಬರಹದ ರೂಪವಂತೂ ಈಗಿನ ದಾಖಲಾತಿ ಚೌಕಟ್ಟಿನಲ್ಲಿ ಹೆಚ್ಚು ಬದಲಾಗದೇ ಉಳಿಯಬಹುದಾಗಿದೆ.

ಜನರು ಊರಿನ ಹೆಸರನ್ನು ಬಾಯಲ್ಲಿ ಹೇಳುವಾಗ ಬದಲಾವಣೆ ಮಾಡಿಕೊಳ್ಳುತ್ತಾರೆ ಎಂದು ಹೇಳಿದೆನಷ್ಟೆ. ಈ ಬದಲಾವಣೆ ಎರ್ರಾಬಿರ್ರಿಯಾಗಿರುವುದಿಲ್ಲ. ಊರಿನ ಹೆಸರಿನಲ್ಲಿ ಬಹುಮಟ್ತಿಗೆ ಎರಡು ಭಾಗ ಇರುತ್ತವೆ. ಎರಡನೆಯ ಭಾಗದಲ್ಲಿ 'ಊರು" ಎಂಬುದನ್ನು ಹೇಳುವಂತಿರುವ ಪದವಿರುತ್ತದೆ. ಊರು, ಪುರ, ನಗರ, ಕಲ್ಲು, ಗಾಲ, ಗಿ, ಹಾಳು, ಹಳ್ಳಿ, ವಾಡಿ, ಪಟ್ಟಣ, ಹಟ್ಟಿ, ಸಂದ್ರ, ಕೇರಿ, ಕೆರೆ, ಪೇಟೆ ಹೀಗೆ ಇಂತಹವು. ಮೊದಲ ಭಾದದಲ್ಲಿ ಚಿಕ್ಕ ಪದದಿಂದ ಹಿಡಿದು ಹಲವಾರು ಪದಗಳು ಇರುವುದೂ ಉಂಟು. ಜನರು ಈ ಎರಡು ಭಾಗಗಳನ್ನು ಚಿಕ್ಕದು ಮಾಡಿಕೊಳ್ಳುತ್ತಾರೆ. ಹೀಗೆ ಚಿಕ್ಕದು ಮಾಡಿಕೊಳ್ಳುವಾಗ ಮೊದಲ ಭಾಗದಲ್ಲಿ ಎರಡಕ್ಕಿಂತ ಹೆಚ್ಚು ಸ್ವರಗಳನ್ನು ಇರಿಸಿಕೊಳ್ಳುವುದಿಲ್ಲ.ಹಾಗೆಯೇ ಎರಡನೆಯ ಭಾಗದಲ್ಲಿ ಕೂಡ ಒಂದು ಅಥವಾ ಎರಡು ಸ್ವರಗಳನ್ನು ಮಾತ್ರ ಉಳಿಸಿಕೊಳ್ಳುತ್ತಾರೆ. ಇದೇಕೆ ಹೀಗೆ ಎಂದು ಯಾರಾದರೂ ಕೇಳಬಹುದು. ಅದಕ್ಕೆ ಕನ್ನಡ ನುಡಿಯ ಜಾಯಮಾನ ಎಂದಷ್ಟೇ ಹೇಳಬಹುದು. ಕೆಲವು ಊರುಗಳ ಹೆಸರು ಮಾತಿನಲ್ಲಿ ಏನಾಗುತ್ತದೆ ನೋಡಿ. ಕೃಷ್ಣರಾಜ ನಗರ ಕೆ.ಆರ್.ನಗರ, ತಿರುಮಕೂಡಲು ನರಸೀಪುರ, ಟಿ. ನರ್ಸಿಪುರ ಆಗುತ್ತವೆ.ಊರ ಹೆಸರಿನಲ್ಲಿ ಒಟ್ಟು ನಾಲ್ಕಕ್ಕಿಂತ ಹೆಚ್ಚು ಸ್ವರಗಳಿದ್ದರೆ ಆ ಸ್ವರಗಳನ್ನು ನಾಲ್ಕಕ್ಕೆ ಇಳಿಸಿಕೊಳ್ಳುವುದು ಕಂಡು ಬರುತ್ತದೆ.ಕೆಲವೊಮ್ಮೆ ಈ ಸಂಖ್ಯೆಯನ್ನು ಇನ್ನೂ ಕಡಿಮೆ ಮಾಡಿಕೊಳ್ಳುವುದೂ ಉಂಟು. ಇರುವಷ್ಟು ವ್ಯಂಜನಗಳನ್ನು ಮಾತ್ರ ಹಾಗೇ ಉಳಿಸಿಕೊಳ್ಳುತ್ತಾರೆ.'ಚಿಕ್ಕನಾಯಕನ ಹಳ್ಳಿ'ಯಲ್ಲಿ ಎಂಟು ಸ್ವರಗಳಿವೆ. ಜನರ ಬಾಯಲ್ಲಿ ಅದು 'ಚಿಕ್ ನಾಯ್ಕ್ ನಳ್ಳಿ' ಎಂದು ಆಗುವುದು.ಬದಲಿಗೆ ಕೆಲವೊಮ್ಮೆ 'ಸಿ.ಎನ್.ಹಳ್ಳಿ' ಆದರೂ ಅಲ್ಲಿ ನಾಲ್ಕು ಸ್ವರಕ್ಕೆ ಇಳಿಯುತದೆ.'ಹಾಸನ' 'ಹಾಸನ್' ಅಥವಾ 'ಹಾಸ್ನ' ಆಗುತ್ತದೆ. 'ಚಾಮರಾಜನಗರ' 'ಚಾಮ್ರಾಜ್ ನಗ್ರ' ಎಂದಾಗುತ್ತದೆ. ಹೀಗೇ ಪಟ್ಟಿ ಬೆಳೆಸಬಹುದು. ಈ ಮಾತು ಹೇಳಿದ್ದೇಕೆಂದರೆ, ಜನರಿಗೆ ಊರಿನ ಬರಹ ರೂಪ ಹೇಗಿದೆ ಎನ್ನುವುದು ಅದರ ಹೆಸರನ್ನು ಹೇಳುವಾಗ ಅಷ್ಟು ಗಮನಿಸಬೇಕಾದ ಸಂಗತಿಯಾಗಿ ತೋರುವುದಿಲ್ಲ ಎಂದು ತಿಳಿಸುವುದು.

ಇನ್ನೂ ಒಂದು ಮಾತಿದೆ. ಬಲ್ಲವರು ನಮ್ಮ ಊರುಗಳ ಹೆಸರುಗಳನ್ನು 'ಕುಲಗೆಡಿಸಿ'ದವರು ಇಂಗ್ಲಿಶಿನವರು ಎನ್ನುತ್ತಾರೆ. ಇಂಗ್ಲಿಶಿನವರು ನಮ್ಮ ಊರುಗಳ ಹೆಸರುಗಳನ್ನು ನಾವು ಬರೆದಂತೆ ಬರೆಯಲಿಲ್ಲ. ಏಕೆಂದರೆ ಎಷ್ಟೋ ಊರುಗಳ ಹೆಸರನ್ನು ನಾವು ಬಾಯಲ್ಲಿ ಹೇಳುತ್ತಿದ್ದುದನ್ನು ಅವರು ಕೇಳಿಸಿಕೊಂಡಂತೆ ಬರೆದರು. ಹೀಗಾಗಿ ಅವರು ಕೇಳಿಸಿಕೊಂಡದ್ದು ಹೇಗೋ ಹಾಗೆ ಊರ ಹೆಸರುಗಳು ಬರಹದಲ್ಲಿ ದಾಖಲಾದವು. ಆದರೆ ಸಾವಿರಾರು ಊರುಗಳ ಹೆಸರುಗಳನ್ನು ಮೊದಲು ಬರೆದವರು ನಾವೇ ಆಗಿದ್ದೇವೆ. ಅವುಗಳಿಗೆ ನಮ್ಮ ನುಡಿಯಲ್ಲಿ, ಜತೆಗೆ ಇಂಗ್ಲಿಶಿನಲ್ಲಿ ಬರೆಹ ರೂಪವನ್ನು ಕೊಟ್ಟವರು ನಾವೇ. ಹಾಗಾಗಿ ಏನಾದರೂ ಗೊಂದಲಗಳಿದ್ದರೆ ಅದಕ್ಕೆ ನಾವು ಹೊಣೆಗಾರರಾಗಿದ್ದೇವೆ. ಹಿಗೆ ಅಡ್ಡಾದಿಡ್ಡಿ ಹೆಸರುಗಳನ್ನು ಬರೆಯುವುದನ್ನು ಬದಲಾಯಿಸಿ ಒಂದು ಸರಿಯಾದ ಬಗೆಯಲ್ಲಿ ಬರೆಯುವುದು ಮತ್ತು ಅದೇ ರೂಪವನ್ನು ಎಂದೂ, ಎಲ್ಲೆಲ್ಲೂ ಬಳಸುವುದು ಈಗ ಆಗ ಬೇಕಾಗಿರುವ ಕೆಲಸ; ಹೆಸರುಗಳ ಹಳೆಯ ರೂಪಗಳಿಗೆ ಮರಳಿ ಹೋಗುವುದಕ್ಕಿಂತ ಇದು ಮೊದಲು ಆಗ ಬೇಕಾದ ಕೆಲಸ.

ಮತ್ತೆ ಕೆಲವರು ಇಂಗ್ಲಿಶಿನವರು ಕುಲಗೆಡಿಸಿದ ಹೆಸರುಗಳಿಗೆ ಕೊನೆಯಲ್ಲಿ 'ಉ' ಸೇರಿಸಿ ಬಿಟ್ಟರೆ ಅದು ಕನ್ನಡದ ಹೆಸರಾಗಿಬಿಡುವುದೆಂದು ಹೇಳುವುದುಂಟು. ಇದು ಸರಿಯಾದ ಮಾತಲ್ಲ. ಕನ್ನಡ ಮಾತಾಡುವ ಕೆಲವರು ಕೆಲವೊಮ್ಮೆ ಮತ್ತು ಕೆಲವು ಕಡೆಗಳಲ್ಲಿ ಹೀಗೆ ಕೊನೆಯಲ್ಲಿ 'ಉ' ಸೇರಿಸುವುದುಂಟು. ಕನ್ನಡ ಮಾತಾಡುವವರೆಲ್ಲ ಹೀಗೆ ಮಾಡುವುದಿಲ್ಲ. ತುಂಗಭದ್ರೆಯ ಉತ್ತರಕ್ಕೆ ಹೋದರೆ ಅಲ್ಲಿ ವ್ಯಂಜನದಿಂದ ಕೊನೆಯಾಗುವ ಪದಗಳನ್ನು ಬರೆಯುವಾಗ ಕೊನೆಗೆ 'ಅ' ಸೇರಿಸುತ್ತಾರೆ.ಆ ಕಡೆಯಿಂದ ಬರುವ ಎಷ್ಟೋ ಬಸ್ಸುಗಳಲ್ಲಿ 'ಬೆಂಗಳೂರ','ಮೈಸೂರ''ಮಂಗಳೂರ' ಎಂದು ಬರೆದಿರುವುದನ್ನು ನೋದಬಹುದು. ಆದರೆ ಅಲ್ಲಿ ಕನ್ನಡ ಮಾತನಾಡುವವರು ಈ ಊರುಗಳ ಹೆಸರನ್ನು ಹೇಳುವಾಗ ಕೊನೆಯಲ್ಲಿ 'ಅ' ಹೇಳುವುದಿಲ್ಲ. ಕೊನೆಯಲ್ಲಿ ವ್ಯಂಜನವನ್ನೇ ಹೇಳುತ್ತಾರೆ. ಅಲ್ಲದೆ ವ್ಯಂಜನದಿಂದ ಕೊನೆಯಾಗುವ ಎಲ್ಲ ಕಡೆಯಲ್ಲೂ "ಉ' ಸೇರಿಸಲು ಬರುವುದಿಲ್ಲ. 'ಹೊಸ್ ಪೇಟ್','ಬಾಗಲ್ ಕೋಟ್'.'ಕೋಲಾರ್','ರಾಮ್ ನಗರ್' ಮುಂತಾದವನ್ನು ಏನು ಮಾಡುವುದು. ಎಲ್ಲ ಕಡೆಗೂ ಉಕಾರವೇ ಸಲ್ಲುವುದೆಂದು ಹೇಳಬಹುದೇ?

ಜನರು ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗಿ ನೆಲೆಸುವುದು ಎಂದಿಗಿಂತಲೂ ಈಗ ಹೆಚ್ಚಾಗಿದೆ. ಬೇರೆಬೇರೆ ನುಡಿಗಳನ್ನಾಡುವವರು ಒಂದೆಡೆ ನೆಲಸುತ್ತಿದ್ದಾರೆ. ಇದರಿಂದ ಊರುಗಳ ಹೆಸರನ್ನು ಬರೆಯುವ ಬಗೆಯಲ್ಲಿ ಒಂದು ಚೌಕಟ್ಟನ್ನು ತರಬಹುದೇ ಹೊರತು ಆ ಹೆಸರುಗಳನ್ನು ಜನರು ಹೇಳುವ ಬಗೆಯಲ್ಲಿ ಅಲ್ಲ. ಹೀಗೆ ಹೆಸರನ್ನು ಹೇಳುವ ಬಗೆಯಲ್ಲೂ ನಾವು ಅಂದುಕೊಳ್ಳುವಂತೆ ಏರುಪೇರುಗಳು ಇರುವುದಿಲ್ಲ. ಬೇರೆ ಬಗೆಯಲ್ಲಿ ಹೆಸರನ್ನು ಹೇಳುತ್ತಿದ್ದರೂ ಅದರಲ್ಲೂ ಒಂದು ಚೌಕಟ್ಟು ಇರುತ್ತದೆ. ಮತ್ತು ಹಾಗೆ ಹೇಳುವುದಕ್ಕೆ ಜನರಿಗೆ ಅವರದ್ದೇ ಆದ ಕಾರಣಗಳಿರುತ್ತವೆ.

ಕೊನೆಗೊಂದು ಮಾತು: ಲೋಕದಲ್ಲಿ ಅತಿ ದೊಡ್ಡ ಹೆಸರಿರುವ ಊರು ಯಾವುದು? ಆ ಊರಿನ ಹೆಸರನ್ನು ರೋಮನ್(ಇಂಗ್ಲಿಶ್) ಲಿಪಿಯಲ್ಲಿ ಬರೆದರೆ ಅದರಲ್ಲಿ ೮೪ ಅಕ್ಷರಗಳಿರುತ್ತವೆ.

ಶಾಲೆಯಲ್ಲಿ ವ್ಯಾಕರಣ

ನಮ್ಮ ಶಾಲೆಗಳಲ್ಲಿ ಕನ್ನಡ ಕಲಿಕೆಗೆಂದು ಮೀಸಲಾದ ಯಾವುದೇ ಪಠ್ಯ ಪುಸ್ತಕವನ್ನು ತೆರೆದರೂ ಅದರ ಪಾಠಗಳ ಕೊನೆಯಲ್ಲಿ ವ್ಯಾಕರಣಾಂಶಗಳನ್ನು ಕುರಿತು ಮಾಹಿತಿ ಇರುತ್ತದೆ. ಕಲಿಸುವವರು ಮಕ್ಕಳಿಗೆ ಈ ವ್ಯಾಕರಣಾಂಶಗಳನ್ನು ಹೇಳಿಕೊಡುತ್ತಾರೆ. ಪರೀಕ್ಷೆಯಲ್ಲಿ ಮಕ್ಕಳ ವ್ಯಾಕರಣ ಕುರಿತ ತಿಳುವಳಿಕೆಯನ್ನು ಪ್ರಶ್ನೆಗಳನ್ನು ಕೇಳಿ ಮೌಲ್ಯಮಾಪನಮಾಡಲಾಗುತ್ತದೆ. ಕಲಿಕೆಯ ಈ ಕ್ರಮ ಎಷ್ಟು ಸರಿ ಎಂದು ನಾವೀಗ ಪ್ರಶ್ನಿಸಿಕೊಳ್ಳಬೇಕಾಗಿದೆ. ಇದಕ್ಕೆ ಮೂರು ಮುಖ್ಯ ಕಾರಣಗಳಿವೆ. ಒಂದು: ನಾವು ಶಾಲೆಗಳಲ್ಲಿ ಕಲಿಸುತ್ತಿರುವ ವ್ಯಾಕರಣ ನಿಜವಾಗಿ ಕನ್ನಡದ ಸ್ವರೂಪವನ್ನು ವಿವರಿಸುತ್ತಿಲ್ಲ. ಎರಡು: ಕನ್ನಡವನ್ನು ಮೊದಲ ಭಾಷೆಯನ್ನಾಗಿ ಹೊಂದಿರುವ ಮತ್ತು ಶಾಲೆಗೆ ಬರುವ ಮೊದಲೇ ಅನೌಪಚಾರಿಕವಾಗಿ ಕನ್ನಡ ಮಾತನಾಡಲು ಕಲಿತಿರುವ ಮಕ್ಕಳಿಗೆ ಈ ವ್ಯಾಕರಣದ ಕಲಿಕೆ ಆಗತ್ಯವಿಲ್ಲ. ನಮ್ಮ ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳಲ್ಲಿ ಹೆಚ್ಚಿನ ಸಂಖ್ಯೆಯವರಿಗೆ ಕನ್ನಡ ಮೊದಲ ಭಾಷೆ. ಉಳಿದವರಲ್ಲಿ ಹಲವರಿಗೆ ಶಾಲೆಗೆ ಬರುವ ಮೊದಲೇ ಕನ್ನಡ ಆಡು ಭಾಷೆಯಾಗಿ ಗೊತ್ತಿರುತ್ತದೆ. ಹೀಗೆ ಕನ್ನಡವನ್ನು ಶಾಲೆಯಲ್ಲೆ ಮೊದಲ ಬಾರಿಗೆ ಕೇಳಿಸಿಕೊಳ್ಳುತ್ತಿರುವ ಮಕ್ಕಳೂ ಇದ್ದಾರಾದರೂ ಅವರ ಬಗ್ಗೆ,ಅವರಿಗೆ ಕನ್ನಡವನ್ನು ಕಲಿಸುವ ರೀತಿಯ ಬಗ್ಗೆ ನಾವು ಯಾವ ವಿಶೇಷ ಎಚ್ಚರವನ್ನೂ ವಹಿಸಿಲ್ಲ. ಹೆಚ್ಚಿನ ಪಾಲು ಉರ್ದು ಮಾಧ್ಯಮದ ಶಾಲೆಗಳಲ್ಲಿ ಈ ಸಮಸ್ಯೆ ಇರುವುದನ್ನು ಇತ್ತೀಚಿನ ಅಧ್ಯಯನಗಳು ತೋರಿಸಿಕೊಟ್ಟಿವೆ. ಅವರಿಗೂ ಈ ವ್ಯಾಕರಣ ಬೇಡದ ಹೊರೆಯಾಗಿದೆ. ಮೂರು: ಹೀಗೆ ಒತ್ತಾಯಪೂರ್ವಕವಾಗಿ ಕಲಿಸುವ ವ್ಯಾಕರಣ ಕೂಡ ಮುಂದೆ ಕನ್ನಡ ಬಳಸುವವರ ನೆರವಿಗೆ ಬರುವುದಿಲ್ಲ. ಅದು 'ಕಲಿತು ಮರೆಯುವ' ವಿಷಯವಾಗಿರುತ್ತದೆ.

ಮೊದಲ ಕಾರಣವನ್ನು ಗಮನಿಸೋಣ. ನಾವು ಈಗ ಕಲಿಸುತ್ತಿರುವ ಕನ್ನಡ ವ್ಯಾಕರಣ ನಿಜವಾಗಿ ಕನ್ನಡದ ಚಹರೆಗಳನ್ನು ವಿವರಿಸುವ ರೀತಿಯಲ್ಲಿ ಇಲ್ಲ.ನಾವು ಬಳಸುತ್ತಿರುವ ಕನ್ನಡದ ರಚನೆಯನ್ನು ವಿವರಿಸುವ ನಿಯಮಗಳನ್ನು ನಾವಿನ್ನೂ ಸರಿಯಾಗಿ ತಿಳಿದುಕೊಳ್ಳದಿರುವುದೇ ಇದಕ್ಕೆ ಕಾರಣವಾಗಿದೆ. ಹಳೆಗಾಲದ ಪಂಡಿತರು ಸಂಸ್ಕೃತ ವ್ಯಾಕರಣವನ್ನು ಅನುಸರಿಸಿ ರೂಪಿಸಿದ ನಿಯಮಗಳನ್ನೇ ಈಗಲೂ ನಾವು ಹೆಚ್ಚಾಗಿ ಬಳಸುತ್ತಿದ್ದೇವೆ. ಡಾ.ಡಿ.ಎನ್.ಶಂಕರಭಟ್ಟರು ಈ ಕೊರತೆಯನ್ನು ತೋರಿಸಿಕೊಟ್ಟಿದ್ದಾರೆ. ಅಲ್ಲದೆ ಈ ವ್ಯಾಕರಣವು ಬರೆಹದ ಕನ್ನಡವನ್ನು ಮಾತ್ರ ಗಮನದಲ್ಲಿ ಇರಿಸಿಕೊಳ್ಳುತ್ತದೆ. ಆಡುಗನ್ನಡವನ್ನು ಗಮನಿಸುವುದಿಲ್ಲ. ಆದ್ದರಿಂದ ಮಕ್ಕಳು ತಾವು ಆಡುವ ಕನ್ನಡ ವ್ಯಾಕರಣ ಬದ್ಧವಲ್ಲ ಎಂಬ ತಪ್ಪು ತಿಳುವಳಿಕೆಗೆ ಒಳಗಾಗುತ್ತಾರೆ. ಒಂದು ಚಿಕ್ಕ ನಿದರ್ಶನವನ್ನು ನೋಡಿ. ಸಪ್ತಮೀ ವಿಭಕ್ತಿಯ ಪ್ರತ್ಯಯಗಳೆಂದು 'ಒಳಗೆ' ಮತ್ತು 'ಅಲ್ಲಿ' ಎಂಬ ಎರಡು ರೂಪಗಳನ್ನು ಮಕ್ಕಳಿಗೆ ಪರಿಚಯಿಸಲಾಗುತ್ತದೆ.(ಇವು ಪ್ರತ್ಯಯಗಳೇ ಎಂಬುದು ಬೇರೆಯೇ ಪ್ರಶ್ನೆ. ಅದು ಒತ್ತಟ್ಟಿಗಿರಲಿ).ಮನೆಯೊಳಗೆ,ಮನೆಯಲ್ಲಿ, ಊರಿನೊಳಗೆ(ಊರೊಳಗೆ),ಊರಿನಲ್ಲಿ(ಊರಲ್ಲಿ) ಮುಂತಾದ ಪದರೂಪಗಳನ್ನು ಉದಾಹರಣೆಯಾಗಿ ಹೇಳಿಕೊಡಲಾಗುತ್ತದೆ. ಆದರೆ ಕನ್ನಡದ ಬಹುಪಾಲು ಮಕ್ಕಳು ಅದರಲ್ಲೂ ತುಂಗಭದ್ರೆಯ ಉತ್ತರದ ಭಾಗದವರು ತಾವು ಕಲಿತು ಆಡುವ ಕನ್ನಡ ಮಾತಿನಲ್ಲಿ ಈ ಪ್ರತ್ಯಯಗಳ ಬದಲು 'ಆಗ' ಎಂಬ ರೂಪವನ್ನೇ ಬಳಸುತ್ತಾರೆ. ಮನೆಯಾಗ,ಊರಾಗ,ತಲೆಯಾಗ ಇತ್ಯಾದಿ. ಆದರೆ ನಮ್ಮ ಶಾಲೆಯ ಪಠ್ಯಗಳಲ್ಲಿ ಇದರ ಸುಳಿವೇ ಇಲ್ಲ. ಅಂದರೆ ನಾವು ಯಾವ ಕನ್ನಡದ ರಚನೆಯನ್ನು ಮಕ್ಕಳಿಗೆ ಹೇಳಿಕೊಡುತ್ತಿದ್ದೇವೆ? ಇದು ಒಂದು ಚಿಕ್ಕ ಉದಾಹರಣೆ. ಇಂತವು ಹಲವಾರಿವೆ. ಅಂದರೆ ಕನ್ನಡದ ನಿಜವಾದ ಎಲ್ಲ ಲಕ್ಷಣಗಳನ್ನು ನಿರೂಪಿಸದ ವ್ಯಾಕರಣವನ್ನು ಮಕ್ಕಳಿಗೆ ನಾವು ಹೇಳಿಕೊಡುತ್ತಿದ್ದೇವೆ.

ಇನ್ನೊಂದು ಕಾರಣವನ್ನು ಈಗ ನೋಡೋಣ. ನಾವು ಶಾಲೆಗಳಲ್ಲಿ ಮಕ್ಕಳಿಗೆ ಕನ್ನಡವನ್ನು ಹೇಳಿಕೊಡುವುದೇಕೆ? ಅವರಿಗಾಗಲೇ ಕನ್ನಡ ಗೊತ್ತಿರುತ್ತದೆ. ಅದರ ವ್ಯಾಕರಣ ನಿಯಮಗಳನ್ನು ಅವರು ಅಂತಸ್ಥ ಮಾಡಿಕೊಂಡಿರುತ್ತಾರೆ. ನಿಯಮಗಳೇನು ಎಂದು ವಿವರಿಸಲು ಆಗದಿದ್ದರೂ ಎಲ್ಲರೂ ವ್ಯಾಕರಣ ಬದ್ಧವಾಗಿಯೇ ಕನ್ನಡವನ್ನು ಬಳಸುತ್ತಿರುತ್ತಾರೆ. ಹಾಗಿದ್ದಲ್ಲಿ ನಾವು ನಿಯಮಗಳನ್ನು ಮತ್ತೊಮ್ಮೆ ಕಲಿಸಬೇಕೇಕೆ? ಹಾಗೆ ನೋಡಿದರೆ ನಮ್ಮ ಕನ್ನಡ ಬೋಧನೆಯ ಗುರಿ ಮುಖ್ಯವಾಗಿ ೧) ಮಕ್ಕಳ ಪದಕೋಶವನ್ನು ಹೆಚ್ಚಿಸುವ ಕಡೆಗೆ ಇರಬೇಕು ೨) ಆ ಪದಕೋಶದ ನೆರವಿನಿಂದ ಹೊಸ ಪದರಚನೆಯನ್ನು ಮಾಡಲು ಮಕ್ಕಳು ಶಕ್ತರಾಗುವಂತೆ ಮಾಡಬೇಕು ಮತ್ತು ೩) ಆವರು ಕನ್ನಡವನ್ನು ಹಲವು ಹೊಸ ಸನ್ನಿವೇಶಗಳಲ್ಲಿ ಬಳಸಲು ಸಾಧ್ಯವಾಗುವಂತೆ ತರಬೇತು ನೀಡಬೇಕು. ಹಾಗೆ ನೋಡಿದರೆ ಈ ಮೂರೂ ಗುರಿಗಳ ಸಾಧನೆಗೆ ವ್ಯಾಕರಣ ನಿಯಮಗಳನ್ನು ಕಲಿಸುವುದು ಅಗತ್ಯವೆಂದು ತೋರುವುದಿಲ್ಲ.

ವ್ಯಾಕರಣ ನಿಯಮಗಳನ್ನು ಶಾಲೆಗಳಲ್ಲಿ ಹೊಸದಾಗಿ ಕಲಿಯುವ ಮೂಲಕವೇ ಭಾಷೆಯ ಬಳಕೆಯು ಸಾಧ್ಯವಾಗುತ್ತದೆ ಎಂಬ ತಿಳುವಳಿಕೆಯು ನಮ್ಮಲ್ಲಿ ಬಲವಾಗಿ ಬೇರುಬಿಟ್ಟಿದೆ. ಸಾಮಾನ್ಯ ಕಲಿಕೆಯ ತತ್ವಗಳನ್ನು ನಾವು ಭಾಷೆಯ ನೆಲೆಗೂ ಅನ್ವಯಿಸುತ್ತೇವೆ. ಗಣಿತದಲ್ಲಿ ನಿಯಮಗಳನ್ನು ಕಲಿತ ಹಾಗೆ ಅಥವಾ ವಿಜ್ಞಾನ ವಿಷಯದಲ್ಲಿ ರಚನೆಗಳನ್ನು ತಿಳಿದ ಹಾಗೆ ಭಾಷೆಯ ಕಲಿಕೆಯಲ್ಲೂ ವ್ಯಾಕರಣ ಕಲಿಕೆ ಅಗತ್ಯವೆಂದು ಒಪ್ಪಿಬಿಟ್ಟಿದ್ದೇವೆ. ಆದರೆ ಈ ನಿಯಮಗಳು ಮಕ್ಕಳಿಗೆ ಮೊದಲೇ ತಿಳಿದಿರುತ್ತವೆ. ಹಾಗಿದ್ದಲ್ಲಿ ನಮ್ಮ ಶಾಲಾ ಶಿಕ್ಷಣದಲ್ಲಿ ವ್ಯಾಕರಣವನ್ನೂ ಏಕೆ ಅಳವಡಿಸಿಕೊಳ್ಳಲಾಯಿತು ಎಂಬ ಪ್ರಶ್ನೆ ಎದುರಾಗುತ್ತದೆ. ಇದು ಅನ್ಯ ಭಾಷೆಯೊಂದನ್ನು ಕಲಿಸುವ ಸಂದರ್ಭಕ್ಕೆ ಅನ್ವಯಿಸುವ ವಿಧಾನವಾಗಿದೆ. ಬ್ರಿಟಿಶರು ಇಂಗ್ಲಿಶನ್ನು ನಮಗೆ ಕಲಿಸಲು ಮೊದಲು ಮಾಡಿದಾಗ ಹೀಗೆ ಭಾಷೆಯ ವ್ಯಾಕರಣವನ್ನು ಹೇಳಿಕೊಡುವ ಮೂಲಕವೇ ಅದರ ಬಳಕೆಯನ್ನು ತಿಳಿದುಕೊಳ್ಳಲು ಸಾಧ್ಯವೆಂಬ ತತ್ವವನ್ನು ಶಿಕ್ಷಣದಲ್ಲಿ ಜಾರಿಗೊಳಿಸಿದರು. ಅದನ್ನು ನಾವು ಮಕ್ಕಳು ಈಗಾಗಲೇ ಅರಿತಿರುವ ಭಾಷೆಯ ವಿಷಯಕ್ಕೂ ಅನ್ವಯಿಸಿಕೊಂಡು ಬಿಟ್ಟಿದ್ದೇವೆ. ವಿಭಕ್ತಿ,ಕಾರಕ,ಆಖ್ಯಾತ,ಸಂಧಿ ಮುಂತಾದ ವ್ಯಾಕರಣ ಪ್ರಕ್ರಿಯೆಗಳನ್ನು,ಪರಿಕಲ್ಪನೆಗಳನ್ನು ನಾವು 'ಹೇಳಿಕೊಡುವ' ಅಗತ್ಯವಿಲ್ಲ. ಆದರೆ ಭಾಷೆಯನ್ನು ಹೊಸಹೊಸ ಸನ್ನಿವೇಶಗಳಲ್ಲಿ ಬಳಸಲು ಬೇಕಾದ ಉತ್ಪಾದಕತೆಯ ಸಾಮರ್ಥ್ಯವನ್ನು ಮಾತ್ರ ಮಕ್ಕಳಲ್ಲಿ ಬೆಳಸಬೇಕಾಗುತ್ತದೆ. ಹಾಗೆ ನೋಡಿದರೆ ನಮ್ಮ ಶಾಲೆಗಳಲ್ಲಿ ಈ ನೆಲೆಗೆ ದೊರಕುತ್ತಿರುವ ಒತ್ತು ತುಂಬಾ ಕಡಿಮೆಯಾಗಿದೆ. ಹಾಗಾಗಿ ನಮ್ಮ ಮಕ್ಕಳು ತಾವು ಬಲ್ಲ ಕನ್ನಡವನ್ನು ಜೀವನದ ಬೇರೆಬೇರೆ ಸಂದರ್ಭಗಳಲ್ಲಿ ಬಳಸಲು ಹಿಂಜರಿಯುವಂತಾಗಿದೆ. ಅವರು 'ಕಲಿತ' ವ್ಯಾಕರಣ ಅವರಿಗೆ ನೆರವಾಗುವುದಿಲ್ಲ. ಅಂದರೆ ಭಾಷೆಯ ರಚನೆಯನ್ನು 'ತಿಳಿಯುವುದು' ಒಂದು ನೆಲೆಯಾದರೆ ಅದರ ಬಳಕೆಯನ್ನು 'ಕಲಿಯುವುದು' ಇನ್ನೊಂದು ನೆಲೆ. ಮೊದಲನೆಯದನ್ನು 'ಕಲಿಯಬೇಕಾಗಿಲ್ಲ'. ಹಾಗೆ ಕಲಿಸಿದರೂ ಅದು ಅವರಿಗೆ ಬಳಕೆಯ ಸಾಮರ್ಥ್ಯಗಳನ್ನು ತಂದುಕೊಡುವುದಿಲ್ಲ. ಆದರೆ ಬಳಕೆಯ ಸಾಮರ್ಥ್ಯಗಳನ್ನು ಮಾತ್ರ ಹೊಸದಾಗಿಯೇ 'ಕಲಿತು' ಗಳಿಸಿಕೊಳ್ಳಬೇಕಾಗುತ್ತದೆ. ನಮ್ಮ ಶಾಲೆಗಳಲ್ಲಿ ಈ ಅಂಶದ ಕಡೆಗೆ ನಾವು ಗಮನವನ್ನು ನೀಡುತ್ತಿಲ್ಲ.

ಈಗ ಮೂರನೆಯ ಕಾರಣ ಉರಿತು ಕೆಲವು ಮಾತುಗಳನ್ನು ಹೇಳುವುದು ಅಗತ್ಯ. ನಮ್ಮ ಶಾಲಾ ಶಿಕ್ಷಣದ ಹಂತದಲ್ಲಿ ನಾವು ಕಲಿತ ವ್ಯಾಕರಣ ಮುಂದೆ ನಮ್ಮನ್ನು ಕೈಹಿಡಿದು ನಡೆಸುವುದಿಲ್ಲವೆಂಬುದಕ್ಕೆ ಹಲವಾರು ನಿದರ್ಶನಗಳಿವೆ. ಹೊಸ ಪದಗಳನ್ನು ರಚಿಸುವಾಗ ನಾವು ಕಲಿತ ಸಂಧಿಯ ನಿಯಮಗಳನ್ನು ನಾವು ಲೆಕ್ಕಕ್ಕೆ ಇರಿಸಿಕೊಳ್ಳುವುದೇ ಇಲ್ಲ. ದಿನದಿನವೂ ಪತ್ರಿಕೆಗಳಲ್ಲಿ ನಮಗೆ ಓದಲು ಸಿಗುವ ಮುಂದಿನ ಹಲವಾರು ರಚನೆಗಳನ್ನು ಗಮನಿಸಿ. ಹಸುರೋತ್ಸವ,ಚುಟುಕೋತ್ಸವ,ಕನ್ನಡೀಕರಣ,ನಗದೀಕರಣ,ಸಿದ್ಧರಾಮಯ್ಯಗೆ ಆಹ್ವಾನ,ದುರ್ನಡತೆ,ಸನ್ನಡತೆ,ಮಿಲಿಯಾಂತರ ಇತ್ಯಾದಿ. ಈ ರಚನೆಗಳನ್ನು ತಪ್ಪು ಎಂದು ಹೇಳಲು ನಾವೇನೋ ಸಿದ್ಧ. ಆದರೆ ಇಂತಹ ರಚನೆಗಳನ್ನು ಸಿದ್ಧಗೊಳಿಸಿ ಬಳಸುವವರಿಗೆ ಅವರು ಕಲಿತ ವ್ಯಾಕರಣ ಏಕೆ ನೆರವಾಗಲಿಲ್ಲ? ಅಥವಾ ಅವರು ವ್ಯಾಕರಣವನ್ನು ಸರಿಯಾಗಿ ಕಲಿಯದೇ ಇದ್ದುದರಿಂದ ಹೀಗಾಯಿತು ಎಂದು ವಾದಿಸಬೇಕೆ? ಹಾಗೇನೂ ಇಲ್ಲ. ಇಂತಹ ರಚನೆಗಳು ಏಕೆ ಸಿದ್ಧಗೊಳ್ಳುತ್ತವೆ ಎನ್ನುವುದನ್ನು ಕಂಡುಕೊಳ್ಳಲು ಸಾಧ್ಯವಾಗುವಂತೆ ನಮ್ಮ ಕನ್ನಡವನ್ನು ನಾವಿನ್ನೂ ವಿವರಿಸಿಕೊಂಡಿಲ್ಲ. ನಮ್ಮ ಶಾಲಾ ವ್ಯಾಕರಣ ನಿಯಮಗಳು ಭಾಷೆಯನ್ನು 'ಒಡೆಯುವಾಗ' ತೋರುವ ಚಹರೆಗಳನ್ನು ಹೇಳಲು ಯತ್ನಿಸುತ್ತವೆ. ಆದರೆ ಭಾಷೆಯನ್ನು 'ಕಟ್ಟುವಾಗ' ಏನಾಗುತ್ತದೆ ಎನ್ನುವುದನ್ನು ನಮ್ಮ ಮಕ್ಕಳಿಗೆ ಶಾಲೆಗಳಲ್ಲಿ ನಾವು ಹೇಳಿಕೊಡುತ್ತಿಲ್ಲ. ಅದರ ಪರಿಣಾಮಗಳನ್ನು ನಾವೀಗ ದಿನವೂ ನೋಡುತ್ತಿದ್ದೇವೆ.

ಶಾಸ್ತ್ರೀಯ ಭಾಷೆ

ಕಳೆದ ಐವತ್ತು ವರ್ಷಗಳಲ್ಲಿ ಭಾರತದ ಭಾಷೆಗಳ ನಡುವಣ ಸಂಬಂಧಗಳಲ್ಲಿ ಹಲವಾರು ಪಲ್ಲಟಗಳಾಗುತ್ತಿವೆ. ಹಿಂದೆ ಗಣನೆಗೆ ಬಾರದಿದ್ದ ಹಲವು ಭಾಷೆಗಳು ಈಗ ರಾಜ್ಯಾಂಗದ ಎಂಟನೆಯ ಅನುಚ್ಚೇದದಲ್ಲಿ ಸೇರತೊಡಗಿವೆ. ಲಿಪಿ ಇಲ್ಲದ ಆದರೆ ಬಹುಜನರು ಬಳಸುತ್ತಿರುವ ಕೆಲವು ಭಾಷೆಗಳೀಗ ತಮಗೊಂದು ರಾಜ್ಯಾಂಗದತ್ತವಾದ ಸ್ಥಾನಮಾನಗಳು ಬೇಕೆಂದು ಹೋರಾಟಮಾಡಿ ಗೆಲ್ಲುತ್ತಿವೆ. ಹೀಗಿರುವಾಗ ಎರಡು ಸಹಸ್ರಮಾನಗಳ ಚರಿತ್ರೆಯುಳ್ಳ ಭಾಷೆಗಳು ತಮಗೊಂದು ಹೆಚ್ಚಿನ ಸ್ಥಾನ ದೊರಕಬೇಕೆಂದು ಹಪಹಪಿಸುತ್ತಿರುವುದು ಈ ಮೇಲಾಟದ ಪರಿಣಾಮವಾಗಿದೆ. ಆದ್ದರಿಂದ ಸಮಾನ ಸ್ಥಾನಮಾನದ ಜತೆಗಾರರೊಡನೆ ಹೆಚ್ಚು ಸಮಾನರಾಗ ಬಯಸುವ ಹಳೆಯ ಭಾಷೆಗಳ ಗಡಣದಲ್ಲಿ ಕನ್ನಡವೂ ಸೇರುವ ಬಯಕೆಯನ್ನು ವ್ಯಕ್ತಪಡಿಸುತ್ತಿದೆ. ಆದರೆ ನಿಜದಲ್ಲಿ ಇದರಿಂದ ಈ ನುಡಿಗೆ ಹೆಚ್ಚಿನ ಅವಕಾಶಗಳು ತನ್ನಿಂದ ತಾನೆ ಒದಗಿ ಬರುವುದಿಲ್ಲ. ಏಕೆಂದರೆ ಕ್ಲಾಸಿಕಲ್ ಭಾಷೆಯ ಸ್ಥಾನ ಪಡೆದ ತಮಿಳು ಸರಿಸುಮಾರು ೧೬೫೦ಕಿಂತ ಹಿಂದಿನ ತಮಿಳನ್ನು ಕ್ಲಾಸಿಕಲ್ ತಮಿಳಿನ ಮಾದರಿ ಎಂದು ಗುರುತಿಸಿಕೊಂಡಿದೆ. ಅಂದರೆ ಕನ್ನಡವೂ ಕ್ಲಾಸಿಕಲ್ ಸ್ಥಾನವನ್ನು ಪಡೆದರೆ ಆಗ ತನ್ನ ಯಾವುದೋ ಒಂದು ಈಗ ಬಳಕೆಯಲ್ಲಿಲ್ಲದ ಮಾದರಿಯೊಂದಕ್ಕೆ ಕ್ಲಾಸಿಕಲ್ ಪಟ್ಟವನ್ನು ಕಟ್ಟಬೇಕಾಗುತ್ತದೆ. ಜನ ಬಳಸದ ಮಾದರಿಯೊಂದನ್ನು ಕುರಿತು ನಡೆಯುವ ಅಧ್ಯಯನಗಳಿಗೆ ಮಹತ್ವವಿದೆ. ಆದರೆ ಇದರಿಂದ ಕನ್ನಡ ಬಳಕೆಯ ವಲಯಗಳನ್ನು ಹೆಚ್ಚಿಸಲು ಆಗುವುದಿಲ್ಲ. ಇಂದು ಕನ್ನಡದ ಬಳಕೆಯ ವಲಯಗಳು ಕುಗ್ಗುತ್ತಿರುವುದೇ ಮುಖ್ಯ ಸಮಸ್ಯೆಯಾಗಿದೆ. ಬಳಕೆಯಾಗುತ್ತಿರುವ ವಲಯಗಳಲ್ಲೂ ಅನೌಪಚಾರಿಕ ಮಾದರಿಗಳಿಗೆ ಹೆಚ್ಚು ಮನ್ನಣೆ ದೊರೆಯುತ್ತಿದೆ. ಹಾಗಿದ್ದಲ್ಲಿ ಪರಿಹಾರವೇನು?
ಎರಡು ಸಹಸ್ರ ಮಾನಗಳ ಬಳಕೆಯ ಚರಿತ್ರೆ ಇರುವ ಕನ್ನಡದಂತಹ ಭಾಷೆಗಳನ್ನು ಪಾರಂಪರಿಕ ಭಾಷೆಗಳೆಂದು ಗುರುತಿಸುವುದು ಒಳ್ಳೆಯದು. ಹೀಗೆ ಮಾಡುವುದರಿಂದ ಭಾಷೆಯ ಚಾರಿತ್ರಿಕ ಘನತೆಯನ್ನು ಒಪ್ಪುವುದರ ಜೊತೆಗೆ ಅದು ಈಗಲೂ ಜನಭಾಷೆಯಾಗಿ ಬಳಕೆಯಲ್ಲಿರುವುದನ್ನು ಗುರುತಿಸಿದಂತೆಯೂ ಆಗುತ್ತದೆ.ಪಾರಂಪರಿಕ ಭಾಷೆಗಳ ಬಗೆಗೆ ಇತರ ಭಾಷಿಕರಲ್ಲೂ ಆಸಕ್ತಿ ಇರುತ್ತದೆ.ಆಗ ವಲಸೆಹೋದ ಕನ್ನಡಿಗರು ಮತ್ತು ಇತರ ಭಾಷಿಕರು ಬೇರೆಬೇರೆ ಕಡೆಗಳಲ್ಲಿ ಕನ್ನಡವನ್ನು ಕಲಿಯಲು ಅವಕಾಶಗಳನ್ನು ಕಲ್ಪಿಸಿಸುವುದು ಸಾಧ್ಯವಾಗುತ್ತದೆ. ಕನ್ನಡ ನಾಡಿನಲ್ಲಿ ಮಾತ್ರವಲ್ಲದೆ ಗಡಿಗಳಾಚೆಗೂ ಕನ್ನಡದ ಬಳಕೆಯ ವಲಯಗಳನ್ನು ಹೆಚ್ಚಿಸಬಹುದು. ಪಾರಂಪರಿಕ ಭಾಷೆಯೆಂದು ಕನ್ನಡದಂತಹ ಭಾಷೆಗಳನ್ನು ಗುರುತಿಸುವುದರಿಂದ ಪರಂಪರೆ ಮತ್ತು ಅಧುನಿಕತೆಗಳೆರಡನ್ನೂ ಮಾನ್ಯಮಾಡಿದಂತಾಗುತ್ತದೆ.

ಪದವಿ ತರಗತಿಗಳಲ್ಲಿ ಕನ್ನಡ

ಪದವಿ ತರಗತಿಗಳಲ್ಲಿ ಕನ್ನಡವನ್ನು ವಿಶೇಷ ವಿಷಯವನ್ನಾಗಿ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಭಾಷೆಯನ್ನು ಕುರಿತ ಪಠ್ಯಕ್ರಮವೊಂದನ್ನು ಕಳೆದ ಅರ್ಧ ಶತಮಾನದಿಂದಲೂ ಹೆಚ್ಚು ಕಡಿಮೆ ಒಂದೇ ರೀತಿಯಲ್ಲಿ ಇರಿಸಿಕೊಂಡಿದ್ದೇವೆ. ಕೆಲವು ವಿಷಯಗಳನ್ನು ವಿಸ್ತರಿಸುವ ಅಥವಾ ಕೆಲವನ್ನು ಹ್ರಸ್ವಗೊಳಿಸುವ ಕೆಲಸ ಮಾತ್ರ ಆಗಾಗ ನಡೆಯುತ್ತಿರುವಂತಿದೆ. ಒಂದೆರಡು ವಿಶ್ವವಿದ್ಯಾಲಯಗಳಲ್ಲಿ ಆಮೂಲಾಗ್ರವಾಗಿ ಬದಲಾವಣೆ ಮಾಡಬೇಕೆಂಬ ಚಿಂತನೆ ನಡೆದು ಕೆಲವು ಪ್ರಯೋಗಗಳು ಕೂಡ ನಡೆದಿವೆ. ಈ ಬದಲಾವಣೆಗಳಿಗೆ ಪಾಠ ಮಾಡುವ ಶಿಕ್ಷಕರೇ ಕೆಲವೊಮ್ಮೆ ಆಡ್ಡಿಯಾಗುತ್ತಾರೆ ಎಂಬ ಮಾತು ಕೇಳಬರುತ್ತಿದೆ. ತಾವು ಕಲಿತದ್ದನ್ನು ಮಾತ್ರ ವಿದ್ಯಾರ್ಥಿಗಳಿಗೆ ಹೇಳಿಕೊಡಲು ಅವರು ಸಿದ್ಧರಿರುತ್ತಾರೆ. ಹೊಸ ಚಿಂತನೆಗಳು ಹೊಸ ಓದನ್ನು,ಹೆಚ್ಚಿನ ಸಿದ್ಧತೆಯನ್ನು ಬಯಸುತ್ತವೆ. ಈ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಹಳೆಯದನ್ನೇ ಸರಿಯೆಂದು ವಾದಿಸುವ ಬಗೆಯೊಂದು ಇದೆ. ಇದು ಸಹಜವೇ. ಅಲ್ಲದೆ ಬದಲಾವಣೆಗಳನ್ನು ಮಾಡಬೇಕೆಂದು ಬಯಸುವವರು ಏಕೆ ಬದಲಾವಣೆ ಬೇಕೆಂಬುದನ್ನು ಎಲ್ಲರಿಗೂ ತಿಳಿಹೇಳುವಲ್ಲಿ ವಿಫಲಾಗಿರಲೂ ಬಹುದು. ಇದು ಶಿಕ್ಷಕರನ್ನು ಕುರಿತ ಟೀಕೆಯಲ್ಲ. ಬದಲಾವಣೆಗಳನ್ನು ಬಯಸುವವರು ಅನುಸರಿಸಬೇಕಾದ ವಿಧಾನವನ್ನು ಕುರಿತು ಮರುಚಿಂತನೆ ಅಗತ್ಯವೆಂದು ಹೇಳುವುದು ನನ್ನ ಉದ್ದೇಶ.ಇಲ್ಲಿಂದ ಮುಂದೆ ಈಗಿರುವ ಪಠ್ಯಕ್ರಮದ ಬದಲಿಗೆ ಯಾವ ವಿಷಯಗಳನ್ನು ಪಾಠ ಹೇಳಬಹುದು ಎಂಬುದನ್ನು ಮೊದಲು ಸೂಚಿಸುತ್ತೇನೆ. ಅನಂತರ ಏಕೆ ಈ ಬದಲಾವಣೆ ಬೇಕೆಂಬುದನ್ನು ಕುರಿತು ಕೆಲವು ಮಾತುಗಳನ್ನು ಹೇಳುತ್ತೇನೆ.

ಮುಖ್ಯವಾಗಿ ಎರಡು ನೆಲೆಗಳಲ್ಲಿ ನಮ್ಮ ವಿಷಯಗಳನ್ನು ವಿಂಗಡಿಸಿಕೊಳ್ಳಬೇಕು. ೧) ಭಾಷೆಯನ್ನು ಕುರಿತ ಸಾಮಾನ್ಯ ವಿಚಾರಗಳು ೨) ಕನ್ನಡ ಭಾಷಾ ರಚನೆಯನ್ನು ಕುರಿತ ವಿಚಾರಗಳು. ಈಗಿರುವಂತೆ ಎರಡು ಚಾತುರ್ಮಾಸಗಳಲ್ಲಿ ಇವುಗಳನ್ನು ವಿಂಗಡಿಸಿಕೊಳ್ಳಬಹುದು. ಇದೇ ಅನುಕ್ರಮದಲ್ಲಿ ವಿಷಯಗಳನ್ನು ಇರಿಸಿಕೊಳ್ಳಬೇಕು.

ಅ)ಭಾಷೆಯನ್ನು ಕುರಿತು ಸಾಮಾನ್ಯ ವಿಚಾರಗಳು:

೧) ಭಾಷೆ ಎಂದರೇನು? ಪಾರಂಪರಿಕ ಚಿಂತನೆಗಳು ,ಪರಿಚಿತ ಚಿಂತನೆಗಳು ಮತ್ತು ಆಧುನಿಕ ಸಿದ್ಧಾಂತಗಳು
೨) ಭಾಷೆಯ ರಚನೆ,ಬಳಕೆ ಮತ್ತು ಬದಲಾವಣೆ - ಇವುಗಳ ಪರಿಚಯ
೩) ಭಾಷೆ ಮತ್ತು ಸಮಾಜ; ಭಾಷೆ ಮತ್ತು ಮನಸ್ಸು
೪) ಜಗತ್ತಿನ ಭಾಷೆಗಳು;ಭಾರತದ ಭಾಷೆಗಳು;ದ್ರಾವಿಡ ಭಾಷೆಗಳು;ಕನ್ನಡದ ಹಳಮೆ

ಆ)ಕನ್ನಡವನ್ನು ಕುರಿತ ವಿಚಾರಗಳು

೧) ಕನ್ನಡ ಧ್ವನಿರಚನೆ
೨) ಕನ್ನಡದ ಪದರಚನೆ
೩) ಕನ್ನಡದ ವಾಕ್ಯ ರಚನೆ
೪) ಕನ್ನಡ ಪದಕೋಶ: ಸ್ವರೂಪ
೫) ಕನ್ನಡ ವಿವಿಧ ಪ್ರಭೇದಗಳು ಅ) ಚಾರಿತ್ರಿಕ ಆ) ಪ್ರಾದೇಶಿಕ ಇ)ಸಾಮಾಜಿಕ ಈ)ಸಾಂದರ್ಭಿಕ
೬) ವಿವಿಧ ಸಂವಹನ ಮಾಧ್ಯಮಗಳಲ್ಲಿ ಕನ್ನಡ ಬಳಕೆಯಾಗುವ ಬಗೆ

ಪ್ರತಿ ಚಾತುರ್ಮಾಸದಲ್ಲಿ ಸರಾಸರಿ ಭಾಷಾ ವಿಷಯ ಬೊಧನೆಗೆ ಹದಿನಾರು ಅವಧಿಗಳ ಬೋಧನೆಯ ಅವಕಾಶ ಸಿಗುತ್ತದೆಯೆಂದು ಯೋಚಿಸಿ ಈ ವಿಷಯಗಳನ್ನು ಪಟ್ಟಿ ಮಾಡಲಾಗಿದೆ.

ಶಬ್ದಮಣಿದರ್ಪಣವನ್ನು ಪಠ್ಯವನ್ನಾಗಿ ಇರಿಸುವುದನ್ನು ಪೂರ್ಣವಾಗಿ ಕೈಬಿಡಬೇಕು. ಅದರಿಂದ ಏನೂ ಉಪಯೋಗವಿಲ್ಲ. ಇದು ಆ ಗ್ರಂಥಕ್ಕಾಗಲೀ ಅದರ ಕರ್ತೃವಿಗಾಗಲೀ ಮಾಡುತ್ತಿರುವ ಅಪಚಾರವೆಂದು ತಿಳಿಯಬಾರದು. ಈಗ ಕನ್ನಡವನ್ನು ಪದವಿ ತರಗತಿಗಳಲ್ಲಿ ವಿಶೇಷ ವಿಷಯವನ್ನಾಗಿ ಓದುವ ವಿದ್ಯಾರ್ಥಿಗಳಿಗೆ ಅದು ಅನಗತ್ಯ. ಹೆಚ್ಚಿನ ಓದಿಗೆ ಮುಂದೆ ಹೋಗುವವರು ತಮ್ಮ ಅಧ್ಯಯನದ ಯಾವುದಾದರೂ ಒಂದು ಹಂತದಲ್ಲಿ ಅಗತ್ಯ ಬಿದ್ದರೆ ಓದುತ್ತಾರೆ. ಶಬ್ದಮಣಿ ದರ್ಪಣ ಎಲ್ಲ ವಿದ್ಯಾರ್ಥಿಗಳೂ ಓದಲೇ ಬೇಕೆಂದು ಹೇಳುವುದರಲ್ಲಿ ಅರ್ಥವಿಲ್ಲ. ಅದನ್ನು ಓದದಿದ್ದರೆ ಹಳಗನ್ನಡ ಅರ್ಥವಾಗುವುದಿಲ್ಲ ಎಂಬ ಅಪಕಲ್ಪನೆಯನ್ನೂ ಬಿಡಬೇಕು. ಈಗಾಗಲೇ ಈ ಕುರಿತು ಡಾ.ಡಿ.ಎನ್.ಶಂಕರಭಟ್ಟರು ತಮ್ಮ ನಿಜಕ್ಕೂ 'ಹಳಗನ್ನಡ ವ್ಯಕರಣ ಎಂತಹುದು" ಎಂಬ ಗ್ರಂಥದಲ್ಲಿ ವಿವೇಚನೆ ಮಾಡಿದ್ದಾರೆ. ಹಳಗನ್ನಡ ನಮಗೆ ಗ್ರಹಿಕೆಯ ಭಾಷೆ ಬಳಕೆಯ ಭಾಷೆಯಲ್ಲ. ಅದನ್ನು ಓದಿ ತಿಳಿಯುವುದನ್ನು ಕಲಿಸುವ ಬೇರೆ ವಿಧಾನಗಳಿವೆ. ನಮ್ಮ ಶಿಕ್ಷಕರು ಅದನ್ನು ಯಶಸ್ವಿಯಾಗಿ ನಿರ್ವಹಿಸಬಲ್ಲರು. ಕನ್ನಡ ಕಾವ್ಯ ಪರಂಪರೆಯನ್ನು ಬಲ್ಲವರಿಗೆ ವ್ಯಾಕರಣಗಳ ಮೂಲಕ ಅವುಗಳನ್ನು ಪ್ರವೇಶ ಮಾಡುವುದು ಸಾಧ್ಯವಿಲ್ಲ ಎನ್ನುವುದು ಗೊತ್ತಿರುತ್ತದೆ.

ಮೂರನೆಯ ವರ್ಷದಲ್ಲಿ ಅಂದರೆ ಐದು ಮತ್ತು ಆರನೆಯ ಚಾತುರ್ಮಾಸಗಳಲ್ಲಿ ಭಾಷಾಧ್ಯಯನದ ಇನ್ನಿತರ ನೆಲೆಗಳನ್ನು ವಿದ್ಯಾರ್ಥಿಗಳಿಗೆ ಪರಿಚಯ ಮಾಡಿಕೊಡುವ ಪಠ್ಯಕ್ರಮವನ್ನು ರೂಪಿಸಬೇಕು. ಅದರ ಸ್ಥೂಲ ವಿವರವನ್ನು ಮುಂದೆ ಕೊಡಲು ಪ್ರಯತ್ನಿಸಿದ್ದೇನೆ.

ಅ)ಕನ್ನಡ ಭಾಷೆಯಲ್ಲಿ ಆಗಿರುವ ಬದಲಾವಣೆಗಳು

೧) ಧ್ವನಿ ರಚನೆಯಲ್ಲಿ ಮತ್ತು ನಿಯಮಗಳಲ್ಲಿ ಅಗಿರುವ ಬದಲಾವಣೆಗಳು
೨) ಪದರಚನೆಯ ನಿಯಮಗಳಲ್ಲಿ ಆಗಿರುವ ಬದಲಾವಣೆಗಳು
೩) ವಾಕ್ಯ ರಚನೆಯ ಸ್ವರೂಪದಲ್ಲಿ ಆಗಿರುವ ಬದಲಾವಣೆಗಳು
೪) ಕನ್ನಡ ಶಬ್ದಕೋಶದಲ್ಲಿ ಅಗಿರುವ ಬದಲಾವಣೆ;ಹೊಸ ಪ್ರವೃತ್ತಿಗಳು
೫) ಶಬ್ದಾರ್ಥಗಳ ಸಂಬಂಧದ ವಿವಿಧ ನೆಲೆಗಳು: ನುಡಿಗಟ್ಟು,ವಾಗ್ರೂಢಿ,ಒಗಟು,ನಗೆಹನಿ

ಆ)ಕನ್ನಡ ಮಾತು ಮತ್ತು ಬರವಣಿಗೆ
೧) ಮಾತು ಮತ್ತು ಬರವಣಿಗೆಗಳ ಸಂಬಂಧ
೨) ಕನ್ನಡ ಬರವಣಿಗೆಯ ವಿವಿಧ ವಲಯಗಳು ಮತ್ತು ಬಗೆಗಳು
೩) ಬರೆವಣಿಗೆಯ ಮೇಲೆ ತಂತ್ರಜ್ಞಾನದ ಪ್ರಭಾವ
೪) ಕನ್ನಡ ಮಾತಿನ ವಲಯಗಳು: ನಿರೂಪಣೆ,ಸಂಭಾಷಣೆ,ಕಥನ
೫) ಕನ್ನಡ ಸಾಹಿತ್ಯ ಭಾಷೆಯ ಕೆಲವು ಮುಖ್ಯ ಚಹರೆಗಳು

ಈ ಎಲ್ಲ ವಿಷಯಗಳನ್ನು ಏಕೆ ಪಾಠಮಾಡಬೇಕು?

ಈವರೆಗೆ ನಾವು ನಾವು ಕನ್ನಡದ ಚಾರಿತ್ರಿಕ ಸ್ವರೂಪವನ್ನು ಹಳೆಯ ಮಾದರಿಯಲ್ಲಿ ಹೇಳಿಕೊಡುತ್ತಿದ್ದೆವು. ಆದರೆ ಈಗ ಕನ್ನಡ ಹೇಗೆ ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿದೆ ಮತ್ತು ಅದರ ವಿವಿಧ ನೆಲೆಗಳೇನು ಎಂಬುದನ್ನು ಪರಿಚಯ ಮಾಡಿಕೊಡಬೇಕು. ಅದರಿಂದ ಅವರಿಗೆ ತಾವು ತಿಳಿದುಕೊಳ್ಳುತ್ತಿರುವುದು ಯಾವುದೋ ನಮಗೆ ಸಂಬಂಧಪಡದ ವಿಷಯ ಎನ್ನುವ ಭಾವನೆ ಮೂಡುವುದಿಲ್ಲ. ಬದಲಿಗೆ ಅವರು ತಮ್ಮ ನಿತ್ಯದ ವ್ಯವಹಾರದ ನೆಲೆಗಳನ್ನು ಇನ್ನಷ್ಟು ಚೆನ್ನಾಗಿ ತಿಳಿಯ ಬಲ್ಲರು.

ಬೋಧನೆಗಾಗಿ ಹೊಸ ವಿಧಾನಗಳನ್ನು ಅನುಸರಿಸಲು ಇದರಿಂದ ಅವಕಾಶಗಳು ದೊರೆಯುತ್ತವೆ. ಅಧ್ಯಾಪಕರು ತಾವು ಚರ್ಚಿಸುತ್ತಿರುವ ಹತ್ತಾರು ವಿಷಯಗಳಿಗೆ ನಿದರ್ಶನಗಳನ್ನು ನಿತ್ಯದ ಕನ್ನಡ ಭಾಷಾ ಬಳಕೆಯಿಂದ ಆಯ್ದುಕೊಳ್ಳಲು ಸಾಧ್ಯವಾಗುತ್ತದೆ. ಹಾಗೆ ಕನ್ನಡವನ್ನು ಕೇಳಿ ,ಓದಿ ಅದರ ವಿವಿಧ ಸಾಧ್ಯತೆಗಳನ್ನು ಗ್ರಹಿಸಲು ವಿದ್ಯಾರ್ಥಿಗಳಿಗೂ ಸೂಚನೆಯನ್ನು ಮಾಡುವುದು ಸಾಧ್ಯ. ಇದಕ್ಕಾಗಿ ಅಗತ್ಯವಾದ ವರ್ಕ್ ಬುಕ್ ಅನ್ನು ಸಿದ್ಧ ಮಾಡಬೇಕಾಗುತ್ತದೆ.

ಈ ಎಲ್ಲ ವಿಷಯಗಳನ್ನು ಪಾಠ ಮಾಡಬೇಕು ಎನ್ನುವುದು ಒಂದು ನೆಲೆಯಾದರೆ ಇವೆಲ್ಲವನ್ನೂ ಹೇಳಲು ಅಗತ್ಯವಾದ ಸಾಮಗ್ರಿ ಒಂದೆಡೆ ದೊರೆಯುವುದಿಲ್ಲ ಎನ್ನುವುದು ಇನ್ನೊಂದು ಮಾತು. ಈ ಕೊರತೆಯನ್ನು ನಿವಾರಣೆಮಾಡಲು ತಕ್ಕ ಪಠ್ಯವಸ್ತುವನ್ನು ಅಧ್ಯಾಪಕರ ಕಮ್ಮಟವನ್ನು ನಡೆಸಿ ಸಿದ್ಧಪಡಿಸಬೇಕಾಗುತ್ತದೆ. ಜೊತೆಗೆ ಪಾಠ ಮಾಡುವ ಅಧ್ಯಾಪಕರೂ ತಮ್ಮ ಅನುಭವದ ನೆರವಿನಿಂದ ಪೂರಕ ಸಾಮಗ್ರಿಯನ್ನು ರೂಪಿಸಿಕೊಳ್ಳಬಲ್ಲರು.

ಈ ಎಲ್ಲ ಬದಲಾವಣೆಯ ಹಿಂದೆ ಇರುವ ತರ್ಕ ಸರಳ. ೧) ಈವರೆಗೆ ನಾವು ಹೇಳಿಕೊಡುತ್ತಿರುವ ವಿಷಯಗಳು ವಿದ್ಯಾರ್ಥಿಗಳಲ್ಲಿ ಆಸಕ್ತಿಯನ್ನು ಹುಟ್ಟಿಸುವಷ್ಟು ಪ್ರಸ್ತುತವಾಗಿರಲಿಲ್ಲ.ಅಲ್ಲದೆ ಭಾಷಾಶಾಸ್ತ್ರದಲ್ಲಿ ಈಚೆಗೆ ನಡೆದಿರುವ ಅಧ್ಯಯನಗಳನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ. ೨) ಕನ್ನಡವೆಂದರೆ ನಮ್ಮಿಂದ ಬೇರೆಯಾದ ಸಂಗತಿಯಲ್ಲ. ನಮ್ಮೊಡನೆ ಇರುವ ನಮ್ಮ ವ್ಯಕ್ತಿತ್ವದ ಭಾಗವೇ ಅಗಿರುವ ಸಂಗತಿಯಾದ್ದರಿಂದ ಅದರ ಸ್ವರೂಪವನ್ನು ತಿಳಿಯಲು ಹೊಸ ದಾರಿಗಳನ್ನು ಹಿಡಿಯಬೇಕು. ೩) ಇಂದಿನ ಕಾಲಮಾನದ ಅಗತ್ಯಗಳಿಗೆ ತಕ್ಕಂತೆ ವಿದ್ಯಾರ್ಥಿಗಳಿಗೆ ತಿಳಿವಿನ ಹೊಸ ದಾರಿಗಳನ್ನು ತೋರಿಸಿಕೊಡಬೇಕು. ೪) ಮುಂದೆ ಇವುಗಳಲ್ಲಿ ಯಾವುದಾದರೊಂದು ನೆಲೆಯನ್ನಾದರೂ ವಿಸ್ತರಿಸಿಕೊಳ್ಳುತ್ತ ವಿದ್ಯಾರ್ಥಿಗಳು ತಮ್ಮ ಆಸಕ್ತಿಯನ್ನು ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ.

ಪದಕೋಶವೆಂಬ ಅಚ್ಚರಿ

ಭಾಷೆಯ ಪದಕೋಶವೊಂದು ಅಚ್ಚರಿ. ಏಕೆಂದರೆ ಅದು ಎಲ್ಲಿರುತ್ತದೆಂದು ಯಾರೂ ಹೇಳಲು ಬರುವುದಿಲ್ಲ. ನಿಘಂಟುಗಳನ್ನು ರಚಿಸಿ ಇಗೋ ಈ ಭಾಷೆಯಲ್ಲಿ ಇಂತಿಷ್ಟು ಪದಗಳಿವೆ ಎಂದೆಲ್ಲ ಹೇಳಿದರೂ ವಾಸ್ತವವಾಗಿ ಆ ಪದಗಳೆಲ್ಲ ಬಳಸುವವರಿಗೆ 'ಗೊತ್ತಿರುವುದಿಲ್ಲ'. ನಿಘಂಟನ್ನು ಬಾಯಿಪಾಠ ಮಾಡಿದರೆ ಭಾಷೆಯ ಮೇಲೆ ಹಿಡಿತ ಸಾಧಿಸಿದಂತೆ ಎಂದು ತಿಳಿದವರಿದ್ದಾರೆ. ಆದರೆ ಮಾತನಾಡುವ ಯಾರೂ ಹೀಗೆ ನಿಘಂಟುಗಳ ಬೆನ್ನು ಹತ್ತುವುದಿಲ್ಲ. ಹಾಗಾಗಿ ನಿಘಂಟು ನಮ್ಮ ಒಂದು ಕಾಲ್ಪನಿಕ ರಚನೆ. ಮಾತಾಡುವವರಲ್ಲಿ ಮತ್ತು ಕೇಳಿ ಅರಿತುಕೊಳ್ಳುವವರಲ್ಲಿ ಈ ಪದಕೋಶ ನೆನಪಾಗಿ ಇರಬೇಕು.ನಮಗೆ ಕನ್ನಡ ಗೊತ್ತು ಎಂದರೆ ಏನರ್ಥ? ಕನ್ನಡ ಭಾಷೆಯ ಪದಕೋಶ ನಮ್ಮ ನೆನಪಲ್ಲಿ ಇದೆಯೆಂಡೂ ಅರ್ಥ. ಆದರೆ ಅದಷ್ಟೇ ಕನ್ನಡವಲ್ಲ. ಕನ್ನಡ ಭಾಷೆಯ ರಚನೆಯ ನಿಯಮಗಳೂ ನಮಗೆ ತಿಳಿದಿರುತ್ತವೆ. ಈ ನಿಯಮಗಳು ಮತ್ತು ಪದಕೋಶ ಸೇರಿ ನಮ್ಮಲ್ಲಿ ಕನ್ನಡ ಎನಿಸಿಕೊಳ್ಳುತ್ತದೆ. ನಿಯಮಗಳನ್ನು ನಾವು ಒಮ್ಮೆ ಮಾತ್ರ ಇಡಿಯಾಗಿ ಅನಾವರಣಗೊಳಿಸಿಕೊಳ್ಳುತ್ತೇವೆ. ಅದು ನಮ್ಮ ಬಾಲ್ಯದಲ್ಲಿ ಸಂಭವಿಸುವ ಘಟನೆ. ಈ ನಿಯಮಗಳು ಎಲ್ಲ ಕನ್ನಡರಿಗೂ ಸಮಾನ. ಆದರೆ ಪದಕೋಶಕ್ಕೆ ಸೇರ್ಪಡೆ ಬೇರ್ಪಡೆಗಳು ನಾವು ಬದುಕಿರುವವರೆಗೂ ನಡೆಯುತ್ತಲೇ ಇರುವುದು ಸಾಧ್ಯ. ಅಲ್ಲದೆ ಎಲ್ಲರಿಗೂ ಇದು ಸಮಾನವಲ್ಲ. ಒಬ್ಬರಿಗೆ ತಿಳಿದಿರುವ ಕನ್ನಡದ ಎಷ್ಟೋ ಪದಗಳು ಇನ್ನೊಬ್ಬರಿಗೆ ತಿಳಿಯದಿರಬಹುದು. ಆದರೆ ನಾವು ಕನ್ನಡವನ್ನು ಬಳಸಲು ಅದರಿಂದ ಅಡ್ಡಿಯಾಗುವುದಿಲ್ಲ.

ಕನ್ನಡದಂತಹ ಭಾಷೆಯ ಪದಕೋಶದ ಪದಗಳಿಗೆ ಮೂರು ನೆಲೆಗಳಿರುತ್ತವೆ. ಉಚ್ಚಾರದ ನೆಲೆ,ಅರ್ಥದ ನೆಲೆ ಮತ್ತು ಬರಹದ ನೆಲೆ. ಇವುಗಳಲ್ಲಿ ಕೆಲವು ಪದಗಳಿಗೆ ಉಚ್ಚಾರದ ನೆಲೆ ಇಲ್ಲದೆಯೂ ಹೋಗಬಹುದು. ಹಾಗೆಯೇ ಮತ್ತೆ ಕೆಲವು ಪದಗಳಿಗೆ ಬರೆಹದ ನೆಲೆ ದೊರಕುವುದಿಲ್ಲ. ಆದರೆ ಅರ್ಥ ನೆಲೆ ಮಾತ್ರ ಎಲ್ಲ ಪದಗಳಿಗೂ ಇದ್ದೇ ಇರುತ್ತದೆ. ಆದರೆ ನಮ್ಮ ಭಾಷಾ ಕಲಿಕೆ ಮತ್ತು ಬಳಕೆಯಲ್ಲಿ ನಾವು ಉಚ್ಚಾರ ಮತ್ತು ಬರಹ ರೂಪಗಳಿಗೆ ಕೊಡುವ ಒತ್ತನ್ನು ಅರ್ಥಕ್ಕೆ ನೀಡುವುದಿಲ್ಲ. ಅಥವಾ ಒಂದು ಪದದ ಅರ್ಥದ ಎಲ್ಲ ಸಾಧ್ಯತೆಗಳನ್ನು ಭಾಷಿಕರು ತಿಳಿಯುವುದು ಅಗತ್ಯವೆಂದು ನಮ್ಮ ಶಿಕ್ಷಣ ಕ್ರಮ ಭಾವಿಸುವುದಿಲ್ಲ .ಇದರ ಪರಿಣಾಮ ಕನ್ನಡದ ಬಳಕೆಯಲ್ಲಿ ಕಾಣ ತೊಡಗಿದೆ. ಸಾಮಾನ್ಯವಾಗಿ ಪದಗಳಿಗೆ ವಾಚ್ಯ ಅಥವಾ ನೇರಬಳಕೆಯ ಅರ್ಥದ ಜೊತೆಗೆ ಸೂಚ್ಯವಾದ ಅರ್ಥಗಳೂ ಇರುತ್ತವೆ. ಈ ಸೂಚ್ಯ ಅಥವಾ ಲಕ್ಷಣಾರ್ಥಗಳು ಭಾಷಿಕರ ಸಂಸ್ಕೃತಿಯ ಕೊಡುಗೆ. ಈ ದಿನಮಾನಗಳಲ್ಲಿ ಪದದ ಬಳಕೆಯ,ವಾಚ್ಯ ಅರ್ಥಕ್ಕೆ ಹೆಚ್ಚು ಒತ್ತು ದೊರೆಯುತ್ತಿದೆ. ಸೂಚ್ಯಾರ್ಥಗಳಲ್ಲಿ ಪದಗಳನ್ನು ಬಳಸುವ ಪ್ರಸಂಗಗಳು ಕಡಿಮೆಯಾಗ ತೊಡಗಿವೆ. ಅಥವಾ ಹಾಗೆ ಬಳಸಿದಾಗಲೂ ತಪ್ಪಾಗಿ ಬಳಸುತ್ತಿರುವ ಪ್ರಸಂಗಗಳೇ ಹೆಚ್ಚು.ಒಂದು ಸರಳ ಉದಾಹರಣೆಯನ್ನು ನೋಡೋಣ. ಕೆಂಭೂತ ಎಂದರೆ ಒಂದು ಪಕ್ಷಿ. ಇದು ವಾಚ್ಯಾರ್ಥ. ಆದರೆ ಕನ್ನಡದಲ್ಲಿ 'ಒಬ್ಬರನ್ನು ಅನುಕರಿಸಲು ಹೋಗಿ ನಗೆಪಾಟಲಾಗುವ ವ್ಯಕ್ತಿ'ಗೂ ಕೆಂಭೂತ ಎನ್ನುವ ಸೂಚ್ಯಾರ್ಥವಿದೆ.ನವಿಲನ್ನು ನೋಡಿ ಕೆಂಭೂತ ಕುಣಿಯಲು ಹೋದದ್ದನ್ನು ಅದರಿಂದ ನಗೆಗೀಡಾಗಿದ್ದನ್ನು ಕನ್ನಡದ ಗಾದೆ ಮಾತೊಂದು ಹೇಳುತ್ತದೆ. ಈ ಸಂದರ್ಭನಿಷ್ಠ ಅರ್ಥ ಗೊತ್ತಿಲ್ಲದಿದ್ದಾಗ ಕೆಂಭೂತ ಎಂಬ ಪದವನ್ನು ಹೇಗೆ ಬಳಸ ಬೇಕೆಂಬುದು ಗೊತ್ತಾಗುವುದಿಲ್ಲ. ಅಥವಾ ಬಳಸಿದಾಗಲೂ ತಪ್ಪು ಅರ್ಥ ಬರುವಂತೆ ಬಳಸುವುದು ಹೆಚ್ಚಾಗುತ್ತದೆ.ಈ ಪರಿಸ್ಥಿತಿಯಿಂದಾಗಿ ಕನ್ನಡದ ವಾಗ್ರೂಢಿಗಳು,ನುಡಿಗಟ್ಟುಗಳು ನಮ್ಮ ದಿನನಿತ್ಯದ ಬಳಕೆಯಿಂದ ಜಾರಿ ಹೋಗುತ್ತಿವೆ. ಬಳಸುವವರೂ ತಪ್ಪುಗ್ರಹಿಕೆಯಿಂದ ಬಳಸುವುದು ಎದ್ದುಕಾಣುತ್ತಿದೆ.

ಪದಗಳು ಪದಕೋಶದಲ್ಲಿದ್ದರೂ ಅವುಗಳನ್ನು ಸರಿಯಾಗಿ ಬಳಸದಿರುವುದು ಒಂದು ಸಮಸ್ಯೆಯಾದರೆ ಇನ್ನೊಂದು ಸಮಸ್ಯೆಯ ಕಡೆಗೆ ಭಾಷಾವಿದರು ನಮ್ಮ ಗಮನ ಸೆಳೆಯುತ್ತಿದ್ದಾರೆ. ಅದೆಂದರೆ ಕನ್ನಡದ 'ನಿಜ' ಪದಗಳು 'ಕಣ್ಮರೆ'ಯಾಗುತ್ತಿವೆಯೆಂಬುದು ಈ ಭಾಷಾವಿದರ ಕೊರಗಾಗಿದೆ. ಕನ್ನಡದ ನಿಜಪದಗಳೆಂದರೇನು? ಬೇರೆ ಭಾಷೆಗಳಿಂದ ಪಡೆದುಕೊಳ್ಳದ,ಲಾಗಾಯ್ತಿನಿಂದಲೂ ಕನ್ನಡದಲ್ಲಿ ಬಳಕೆಯಾಗುತ್ತಿರುವ ಪದಗಳನ್ನು ನಿಜಪದಗಳೆಂದು ಸದ್ಯ ತಿಳಿಯೋಣ. ಈ ನಿಜಪದಗಳಲ್ಲಿ ಹಲವು ಬರವಣಿಗೆಯಲ್ಲಿ ಮಾತ್ರ ದಾಖಲಾಗಿರುವಂತಹವು. ಅಂದರೆ ಕಾವ್ಯಗಳಲ್ಲಿ,ಶಾಸನ ಮುಂತಾದ ಲಿಖಿತ ದಾಖಲೆಗಳಲ್ಲಿ ಈ ಪದಗಳು ಈಗ ಬರಹದಲ್ಲಾಗಲೀ ಮಾತಿನಲ್ಲಾಗಲೀ ಬಳಕೆಯಾಗುತ್ತಿಲ್ಲ. ಉದಾ.ಗೆ ಶಾಸನಗಳಲ್ಲಿ 'ಮತ್ತರ್' ಎಂಬ ಪದವೊಂದು ಬಳಕೆಯಾಗುತ್ತದೆ. ಕೃಷಿ ಭೂಮಿಯ ಒಂದು ಬಗೆಯನ್ನು ಅದು ಸೂಚಿಸುತ್ತಿತ್ತು. ಆದರೆ ಈಗ ಆ ಪದ ಯಾರ ಪದಕೋಶದ ಭಾಗವಾಗಿಯೂ ಇಲ್ಲ. ಈಗ ಅದನ್ನು ಬಳಸುವುದೂ ಇಲ್ಲ. ಹಾಗೆಯೇ ಎಷ್ಟೋ ಪದಗಳು ಬರಹದ ರೂಪವಿರದೆಯೂ ಆಡು ಮಾತಿನಲ್ಲಿ ಬಳಕೆಯಾಗುತ್ತಿದ್ದವು.ಅಂತಹ ಪದಗಳಲ್ಲಿ ಹಲವಾರು ಈಗ ಮರೆಯಾಗುತ್ತಿವೆ. ಅವುಗಳನ್ನು ಬಳಸುವ ಪ್ರಸಂಗಗಳು ಈಗ ಕಂಡು ಬರುತ್ತಿಲ್ಲ. ಕನ್ನಡ ಮಾತನಾಡುವ ಬೇರೆಬೇರೆ ಪ್ರದೇಶಗಳಲ್ಲಿ ಬೇರೆಬೇರೆ ಸಾಮಾಜಿಕ ಸಮುದಾಯಗಳಲ್ಲಿ ಇಂತಹ ಪದಗಳಿದ್ದವು. ಉದಾಹರಣೆಗೆ ನಮ್ಮ ಹಳೆಯ ಆಹಾರವಸ್ತುಗಳ, ಈಗ ಬಳಕೆಯಲ್ಲಿದ ಹಲವಾರು ಉಪಕರಣಗಳ ಹೆಸರುಗಳನ್ನು ಗಮನಿಸಬಹುದು. ಅವುಗಳಲ್ಲಿ ಎಷ್ಟೋ ಪದಗಳು ಈಗ ಇಲ್ಲ. ಈ ಕಾರಣದಿಂದಾಗಿ ಕನ್ನಡದ ಕೆಲವು ಲೇಖಕರು ತಮ್ಮ ಕಥೆ ಕಾದಂಬರಿಗಳ ಕೊನೆಗೆ ತಾವು ಬಳಸಿದ ಪದಗಳಿಗೆ ಕನ್ನಡದಲ್ಲೇ ಅರ್ಥವನ್ನು ನೀಡುತ್ತಿದ್ದಾರೆ. ಅಂದರೆ ಅವರು ಬಳಸಿದ ಆ ಪದಗಳು ಈಗ ಎಲ್ಲ ಕನ್ನಡಿಗರಿಗೂ ಗೊತ್ತಾಗುವ ಹಾಗಿಲ್ಲವೆಂಬುದನ್ನು ಅವರು ಸೂಚಿಸುತ್ತಿದ್ದಾರೆ.

ಈ ಪರಿಸ್ಥಿತಿಯನ್ನು ಹೇಗೆ ಗ್ರಹಿಸಬೇಕು. ಇದು ಆತಂಕ ಪಡಬೇಕಾದ ಸಂಗತಿಯೆಂದು ಕೆಲವರು ವಾದಿಸುತ್ತಾರೆ. ತಮ್ಮ ವಾದಕ್ಕೆ ಪೂರಕವಾಗಿ ಕನ್ನಡ ಪದಕೋಶ ತನ್ನ ನಿಜ ಪದಗಳನ್ನು ಕಳೆದುಕೊಳ್ಳುವುದನ್ನು ಹಾಗೆಯೇ ಬೇರೆ ಭಾಷೆಗಳಿಂದ ಅಸಂಖ್ಯಾತ ಪದಗಳನ್ನು ಪಡೆದುಕೊಳ್ಳುತ್ತಿರುವುದನ್ನು ಎತ್ತಿ ಹೇಳುತ್ತಾರೆ.ಯಾವುದೇ ಭಾಷೆಯ ಪದಕೋಶದಲ್ಲಿ ಹೀಗೆ ನಿಜಪದಗಳ ಬಳಕೆ ಕಡಿಮೆಯಾಗಿ ಬೇರೆ ಭಾಷೆಗಳಿಂದ ಪದಗಳ ಬಳಕೆ ಹೆಚ್ಚುವುದು ಅಷ್ಟು ಅಸಹಜವಾದ ಸಂಗತಿ ಏನೂ ಅಲ್ಲ. ಇದಕ್ಕೆ ಆಯಾ ಸಂದರ್ಭದ ಸಾಂಸ್ಕೃತಿಕವಾದ ಕಾರಣಗಳು ಹಲವು ಇರುತ್ತವೆ. ಕನ್ನಡದ ಮಟ್ಟಿಗೆ ಈ ಬದಲಾವಣೆಯನ್ನು ಆತಂಕಕಾರಿ ಎಂದು ವಾದಿಸುವುದು ಎಷ್ಟು ಸರಿ? ಈ ಪ್ರಶ್ನೆಯನ್ನೊಮ್ಮೆ ಉತ್ತರಿಸಲು ನೋಡೋಣ. ಹೊಸ ಪದಗಳು ಬಳಕೆಯಾಗುತ್ತಿರುವುದನ್ನು 'ಕನ್ನಡದ ಕೊಲೆ' ಎಂದು ನಾವು ವರ್ಣಿಸಲು ಸಿದ್ಧರಾಗುತ್ತೇವೆ. ಆದರೆ ಕನ್ನಡದ ನಿಜಪದಗಳನ್ನೇ ಬಳಸುವುದನ್ನು ಒಪ್ಪಿಕೊಳ್ಳಲು ನಾವು ಎಷ್ಟು ಸಿದ್ಧರಿದ್ದೇವೆ? ಕನ್ನಡದ ಹಲವು ಉಪಭಾಷೆಗಳ ಸಾವಿರಾರು ಪದಗಳನ್ನು ಸಮಾಜದ ಅಂಚಿನ ಸಮುದಾಯದ ಜನರು ಬಳಸಿದರೆ ಆ ಪದಗಳ ಬದಲು ನಾವು ಶಿಷ್ಟ ಅಥವಾ ಪ್ರಮಾಣ ಎಂದು ಗುರುತಿಸುವ ಪದಗಳನ್ನು ಬಳಸಬೇಕೆಂದು ಬಯಸುತ್ತೇವೆ. ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಇದು ಬಲವಾಗಿ ಬೇರೂರಿರುವ ಅಭ್ಯಾಸವಾಗಿದೆ. ಅಂದರೆ ನಿಜಪದಗಳನ್ನು ಕತ್ತು ಹಿಸುಕಲು ನಾವು ಹಿಂಜರಿಯುತ್ತಿಲ್ಲ. ಅವುಗಳನ್ನು ನಮ್ಮದೇ ಆದ ಕಾರಣಗಳನ್ನು ನೀಡಿ ಹಿಂದೆ ಸರಿಸುತ್ತಿದ್ದೇವೆ.ಕಸದ ಬುಟ್ಟಿಗೆ ಎಸೆಯುತ್ತಿದ್ದೇವೆ ಹೆಚ್ಚೆಂದರೆ ಕಥೆಗಾರರು ತಮ್ಮ ಸೋಪಜ್ಞತೆಯನ್ನು ಸಾಬೀತು ಮಾಡಲು ಆ ಪದಗಳನ್ನು ಬಳಸಿಯಾರು. ಅಥವಾ ಸಿನಿಮಾದಂತಹ ಮಾಧ್ಯಮಗಳು 'ನಕಲಿ'ಗಳನ್ನು,ಸಿದ್ಧಮಾದರಿಗಳನ್ನು ಬಿಂಬಿಸಲು ಆ ಪದಕೋಶವನ್ನು ಬಳಸಿಕೊಳ್ಳುವಂತೆ ಅನುವುಮಾಡಿಕೊಡಲಾಗಿದೆ.

ಈ ಮೇಲಿನ ವಿವರಣೆಯಿಂದ ತಿಳಿಯುವುದೇನು? ನಮಗೇ ಗೊತ್ತಿಲ್ಲದಂತೆ ನಾವು ಇಬ್ಬಗೆಯ ವರ್ತನೆಯನ್ನು ತೋರುತ್ತಿದ್ದೇವೆ. ಒಂದು ಕಡೆ ನಿಜಪದಗಳನ್ನು ನಿರಾಕರಿಸುತ್ತಲೇ ಅವು ಕಳೆದುಹೋಗುತ್ತಿವೆಯೆಂದು ಹಪಹಪಿಸುತ್ತಿದೇವೆ. ಇನ್ನೊಂದು ಕಡೆ ಬೇರೆ ಭಾಷೆಗಳಿಂದ ಬಂದ ಪದಗಳನ್ನು ಬಳಸುವುದನ್ನು ಗುಮಾನಿಯಿಂದ ನೋಡುತ್ತಿದೇವೆ.'ಶುದ್ಧಕನ್ನಡ'ಕ್ಕಾಗಿ ಕನಸು ಕಾಣುತ್ತಿದ್ದೇವೆ. ನಮ್ಮ ಕನ್ನಡವನ್ನು ರಕ್ತಹೀನಗೊಳಿಸುತ್ತಾ ಅದು ಯಾವ ಪೋಷಕ ದ್ರವವನ್ನೂ ಪಡೆಯಬಾರದೆಂದೂ ಹಾಗೇ ಜೀವ ಉಳಿಸಿಕೊಳ್ಳಲು ಹೋರಾಡಬೇಕೆಂದು ನಿರೀಕ್ಷಿಸುತ್ತಿದೇವೆ. ನೀವು ಕುವೆಂಪು ಅವರ ಮಲೆಗಳಲ್ಲಿ ಮದುಮಗಳು ಕಾದಂಬರಿಯನ್ನು ಓದಿದ್ದರೆ ಅಲ್ಲಿ ಬರುವ ಶಂಕರ ಹೆಗ್ಗಡೆಯು ತನ್ನ ಹೆಂಡತಿ ಮಕ್ಕಳನ್ನು ನೋಡಿಕೊಳ್ಳುವ ಮಾದರಿಯಲ್ಲಿ ನಾವಿರುವಂತಿದೆಯಲ್ಲವೇ?.ಇದು ಕನ್ನಡಕ್ಕಿರುವ ನಿಜವಾದ ಆತಂಕ.

ಪದ: ಅರ್ಥ ಮತ್ತು ಬಳಕೆ

ಭಾಷೆಯನ್ನು ಕಲಿಸುವಾಗ ಸಮಾನಾರ್ಥಕ ಪದಗಳನ್ನು ಹೇಳಿಕೊಡುವ ಪದ್ಧತಿ ಇದೆ. ಸಂಸ್ಕೃತ ಭಾಷೆಯಲ್ಲಿ ಹೀಗೆ
ನಾಮಪದಗಳಿಗೆ ಸಮಾನಾರ್ಥಕ ಪದಗಳ ಪಟ್ಟಿಯನ್ನು ನೀಡುವ ಕೋಶವಿದೆಯಷ್ಟೆ. ಇದನ್ನು ಅಮರಕೋಶವೆನ್ನುತ್ತಾರೆ. ಅದನ್ನು ಬಾಯಿಪಾಠ ಮಾಡುವುದು ಸಂಸ್ಕೃತ ಭಾಷಾ ಕಲಿಕೆಯ ಭಾಗವಾಗಿತ್ತು. ಅದರಲ್ಲಿ ಒಂದು ನಾಮಪದಕ್ಕೆ ಸಮಾನವೆಂದು ಗುರುತಿಸಲಾದ ಪದಗಳನ್ನು ಪಟ್ಟಿ ಮಾಡಲಾಗಿದೆ. ಉದಾ.ಗೆ ಸೂರ್ಯ ಎಂಬ ಪದಕ್ಕೆ ಸಮಾನವಾಗಿ ರವಿ,ಭಾನು,ಆದಿತ್ಯ,ಮಾರ್ತಾಂಡ,ತರಣಿ ಹೀಗೆ ಹಲವು. ಕನ್ನಡದಲ್ಲೂ ಹೀಗೆ ನಾಮಪದಗಳಿಗೆ ಸಮಾನಾರ್ಥಕ ಪದಗಳನ್ನು ಗುರುತಿಸುವುದುಂಟು. ಆದರೆ ಇತರ ಪದವರ್ಗದ ಪದಗಳಿಗೆ ಹೀಗೆ ಸಮಾನಾರ್ಥಕ ಪದಗಳನ್ನು ಗುರುತಿಸಲು ಸಾಧ್ಯವೇ? ಉದಾ.ಗೆ ಗುಣಪದಗಳನ್ನು ನೋಡೋಣ. ಕೊಂಚ ಎಂಬ ಅರ್ಥ ನೀಡುವ ಹಲವಾರು ಪದಗಳನ್ನು ಕನ್ನಡಿಗರು ಬಳಸುತ್ತಾರೆ. ತುಸು,ಸ್ವಲ್ಪ.ಇಂಕರ,ರವಷ್ಟು,ಹನಿ,ತಟಕು,ವಸಿ,ಚೂರು,ತೊಟ್ಟು,ಚಿಟ್ಟು,ಚಿಟುಕು ಇತ್ಯಾದಿ. ಈ ಪದ ಪಟ್ಟಿಯನ್ನು ಓದುತ್ತಿರುವವರಲ್ಲಿ ಹಲವರು ಈಗಾಗಲೇ ಇವೆಲ್ಲವೂ ಸಮಾನಾರ್ಥಕಗಳಲ್ಲವೆಂದು ತಗಾದೆ ತೆಗೆಯುತ್ತಿರಬಹುದು. ಇವುಗಳಲ್ಲಿ ಕೆಲವು ಒಂದೊಂದು ಪ್ರದೇಶದಲ್ಲಿ ಬಳಕೆಯಾಗುತ್ತವೆ. ಆ ಪದ ಇನ್ನೊಂದು ಕಡೆಯ ಕನ್ನಡಿಗರಿಗೆ ತಿಳಿಯದೇ ಇರರುವ ಸಾಧ್ಯತೆ ಇದೆ.

ಕ್ರಿಯಾಪದಗಳಲ್ಲಿ ಹೀಗೆ ಸಮಾನಾರ್ಥಕ ಪದಗಳು ಇರಬಹುದೇ? ಒಂದೇ ಕ್ರಿಯೆಯನ್ನು ವಿವರಿಸಲು ಒಂದಕ್ಕಿಂತ ಹೆಚ್ಚು ಕ್ರಿಯಾಪದಗಳನ್ನು ನಾವು ಬಳಸುತ್ತೇವೆಯೇ? 'ಊಟ ಬಡಿಸು' ಎಂಬ ವಾಕ್ಯದಲ್ಲಿ ಇರುವ ಕ್ರಿಯಾಪದವನ್ನು ನೋಡಿ. ಇದಕ್ಕೆ ಬದಲಾಗಿ ಇಕ್ಕು,ನೀಡು,ಇಡು,ಹಾಕು,ಕೊಡು ಮುಂತಾದ ಪದಗಳನ್ನು ಬಳಸಬಹುದು. ಇವುಗಳಿಗೆ ಬೇರೆ ಬೇರೆ ಸಂದರ್ಭದ
ಬಳಕೆಯಿದೆ. ಅಂದರೆ ಅವುಗಳ ನಡುವೆ ಸೂಕ್ಷ್ಮವಾದ ವ್ಯತ್ಯಾಸಗಳಿವೆ. ಅಲ್ಲದೆ ಕೆಲವು ಪದಗಳನ್ನು ಎಲ್ಲಕಡೆಯೂ ಬಳಸುವುದಿಲ್ಲ. ಹಾಗೆ ನೋಡಿದರೆ ಸಮಾನಾರ್ಥಕ ಪದಗಳೆಂಬ ಪರಿಕಲ್ಪನೆಯೇ ಸರಿಯಿಲ್ಲವೇನೋ ಏಕೆಂದರೆ ಒಂದು ಅರ್ಥವನ್ನುಳ್ಲ ಎರಡು ಪದಗಳನ್ನು ಅಥವಾ ಒಂದಕ್ಕಿಂತ ಹೆಚ್ಚು ಪದಗಳನ್ನು ಭಾಷೆ ಹೊಂದಲು ಕಾರಣಗಳೇನು? ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆಬೇರೆ ಪದಗಳು ಬಳಕೆಯಾಗುತ್ತಿರುವುದು ಒಂದು ಕಾರಣ. 'ಚೆಂಡನ್ನು ಎಸೆ(ಎಸಿ)' ಎಂದು ಕೆಲವು ಕಡೆ ಹೇಳಿದರೆ ಮತ್ತೆ ಕೆಲವು ಕಡೆ 'ಚೆಂಡನ್ನು ಒಸಿ' ಎನ್ನುತ್ತಾರೆ. ಮತ್ತೆ ಕೆಲವು ಕಡೆ 'ಚೆಂಡನ್ನು ಒಗೆ(ಒಗಿ)' ಎನ್ನುತ್ತಿರಬಹುದು. ಮತ್ತೆ ಕೆಲವು ಕಡೆ 'ತೂರು' ಎಂದು ಹೇಳುವರು. ಆದರೆ ಒಂದೇ ಪ್ರದೇಶದಲ್ಲಿ ಒಂದೇ ಸಾಮಾಜಿಕ ವರ್ಗದಲ್ಲಿ ಒಂದೇ ಅರ್ಥವನ್ನು ನೀಡುವ ಎರಡು ಪದಗಳನ್ನು ಬಳಸುತ್ತಿದ್ದರೆ ಅವುಗಳಲ್ಲಿ ಕೆಲವು ಬೇರೆ ಭಾಷೆಯಿಂದ ಬಂದು ಸೇರಿಕೊಂಡಿರುವ ಸಾಧ್ಯತೆಗಳು ಹೆಚ್ಚು.

ನಾವೀಗ ಇಂತಹ ಇನ್ನೊಂದು ಬಗೆಯ ಪದವರ್ಗದಲ್ಲಿರುವ ಸಮಾನಾರ್ಥಕ ಪದಗಳನ್ನು ಗಮನಿಸೋಣ. ಈ ಮುಂದಿನ ಪದಗಳನ್ನು ನೋಡಿ: ಜತೆ(ಗೆ), ಜೊತೆ(ಗೆ), ಜತಿ, ಸಂಗಡ, ಒಡನೆ, ಒಂದಿಗೆ, ಒಟ್ಟಿಗೆ, ಕೂಡ(ಕುಟೆ), ಜೋಡಿ, ಇತ್ಯಾದಿ. ಇವುಗಳೆಲ್ಲವನ್ನು ಸಾಮಾನ್ಯವಾಗಿ ಅವ್ಯಯಗಳೆಂದು ಕರೆಯುವ ಪರಿಪಾಠವಿದೆ. ಇವುಗಳ ಬಳಕೆಯನ್ನು ಗಮನಿಸಿದರೆ ಇವೆಲ್ಲವೂ ಒಂದರ ಬದಲು ಇನ್ನೊಂದು ಬಳಕೆಯಾಗಬಹುದು ಎನಿಸಿದರೂ ಇವುಗಳು ಕನ್ನಡದಲ್ಲಿ ನೆಲೆಗೊಂಡ ಕ್ರಮದಲ್ಲೇ ಹಲವು ಏರುಪೇರುಗಳಿವೆ. 'ಜೊತೆ' ಎಂಬ ಪದವನ್ನೇ ನೋಡಿ. ಇದು ಪರಿಷತ್ತಿನ ಕನ್ನಡ-ಕನ್ನಡ ನಿಘಂಟಿನ ದಾಖಲೆಯಂತೆ ಸಂಸ್ಕೃತದ 'ಯುತ' ಎಂಬ ಪದದಿಂದ ರೂಪುಗೊಂಡಿದೆ. ನಿಘಂಟು ಹೀಗೆ ಹೇಳಲು ಇರುವ ಕಾರಣಗಳು ತಿಳಿಯುತ್ತಿಲ್ಲ. ಇದನ್ನು ತದ್ಭವ ಎಂದೇನೂ ಹೇಳುತ್ತಿಲ್ಲ. ಆದರೆ 'ಯುತ' ಎಂಬುದು 'ಜೊತೆ'ಯಾದುದು ಯಾವಾಗ? ಇಪ್ಪತ್ತನೆಯ ಶತಮಾನಕ್ಕೆ ಹಿಂದೆ ಈ ಪದ ಬಳಕೆಯಾಗಿರುವುದಕ್ಕೆ ನಿದರ್ಶನಗಳಿಲ್ಲವೆಂದೇ ನಿಘಂಟು ತಿಳಿಸುತ್ತದೆ. ಹಾಗೆಯೇ 'ಜೋಡಿ' ಪದ ಮರಾಟೀ ಭಾಷೆಯ 'ಜುಡಾ'ದಿಂದ ಬಂದಿದೆ ಎಂದು ದಾಖಲಿಸಲಾಗಿದೆ. ಜೋಡಿ ಮತ್ತು ಜೊತೆಗಳು ನಾಮಪದಗಳಾಗಿಯೂ ಕೆಲಸ ಮಾಡುತ್ತವೆ. ಇದೆಲ್ಲ ಕಾರಣದಿಂದ ಈ ಪದಗಳ ಬಳಕೆಯಲ್ಲಿ ಸಮಾನತೆ ಇರುವಷ್ಟೇ ವ್ಯತ್ಯಾಸಗಳೂ ಇವೆ.

ಇನ್ನೊಂದು ಇಂತಹ ಪದ ಪಟ್ಟಿಯನ್ನು ನೋಡಿ: ಅಲ್ಲಿ, ಒಳಗೆ, ಬಳಿ, ಹತ್ತಿರ. ಇವುಗಳಲ್ಲಿ ಕೆಲವು ಒಂದೊಂದು ಸಂದರ್ಭದಲ್ಲಿ ಇನ್ನೊಂದು ಪದದೊಡನೆ ಸಮಾನಾರ್ಥವನ್ನು (ಅಥವಾ ಸಮಾನ ನಿಯೋಗವನ್ನು) ಹೊಂದಿರುವಂತೆ ತೋರುತ್ತದೆ.'ರೈತರಲ್ಲಿ ಚಿಕ್ಕಾಸೂ ಇಲ್ಲ' ಎಂಬ ವಾಕ್ಯವನ್ನು ಗಮನಿಸಿ.. ಈ ವಾಕ್ಯದಲ್ಲಿ 'ಅಲ್ಲಿ' ಬದಲು 'ಬಳಿ' ಇಲ್ಲವೇ 'ಹತ್ತಿರ' ಪದಗಳನ್ನು ಬಳಸಬಹುದು. ಆದರೆ 'ಒಳಗೆ' ಪದವನ್ನು ಬಳಸಲು ಬರುವುದಿಲ್ಲ. ಆದರೆ 'ಕಣ್ಣುಮಿಟುಕಿಸುವುದರೊಳಗೆ ಎಲ್ಲ ನಡೆದು ಹೋಯಿತು' ಎನ್ನುವ ವಾಕ್ಯದಲ್ಲಿ 'ಒಳಗೆ' ಬದಲು 'ಅಲ್ಲಿ' ಬಳಸಲು ಸಾಧ್ಯ. ಆದರೆ ಈ ವಾಕ್ಯದಲ್ಲಿ 'ಬಳಿ' ಮತ್ತು'ಹತ್ತಿರ' ಪದಗಳಿಗೆ ಜಾಗವಿಲ್ಲ. 'ತಲೆಯಲ್ಲಿ ಕೂದಲಿಲ್ಲ' ಎಂಬ ವಾಕ್ಯದಲ್ಲಿ 'ಅಲ್ಲಿ' ಬದಲು ಉಳಿದ ಮೂರು ಪದಗಳಲ್ಲಿ ಯಾವುದನ್ನೂ ಬಳಸಲು ಸಾಧ್ಯವಾಗುವುದಿಲ್ಲ. ಹಾಗೆ ಬಳಸಿದರೆ ಅರ್ಥವೇ ಬದಲಾಗಿಬಿಡುತ್ತದೆ.' ನಾನು ಹೋಗುವುದರೊಳಗೆ ಬಸ್ಸು ಹೊರಟುಹೋಗಿತ್ತು' ಎಂಬ ವಾಕ್ಯದಲ್ಲಿ 'ಒಳಗೆ' ಬದಲು ಈಗಿರುವಂತೆಯೇ (ಅಂದರೆ ವಾಕ್ಯದ ಸ್ವರೂಪವನ್ನು ಬದಲಾಯಿಸದೇ) 'ಅಲ್ಲಿ' ಪದವನ್ನು ಬಳಸುವುದು ಸಾಧ್ಯವಿಲ್ಲ. ಈ ವಿವರಣೆಗಳನ್ನು ಗಮನಿಸಿದರೆ ಮೇಲು ನೋಟಕ್ಕೆ ಒಂದೆ ಅರ್ಥವನ್ನುಹೊಂದಿರುವಂತೆ ತೋರುವ ಪದಗಳು ಬಳಕೆಯಲ್ಲಿ ಹಲವು ವ್ಯತ್ಯಾಸಗಳನ್ನು ಹೊಂದಿರುತ್ತವೆಂಬುದು ಗೊತ್ತಾಗುತ್ತದೆ. ಹಾಗಾಗಿ ಒಂದು ಪದಕ್ಕೆ ಅರ್ಥವೇನು ಎಂಬ ಪ್ರಶ್ನೆಗಿಂತ ಅದು ಭಾಷೆಯಲ್ಲಿ ಏನು ಕೆಲಸ ಮಾಡುತ್ತದೆ ಮತ್ತು ಇತರ ಪದಗಳೊಡನೆ ಅದು ಬಳಕೆಯ ಸಂದರ್ಭದಲ್ಲಿ ಹೊಂದಿರುವ ಸಂಬಂಧ ಏನು ಎಂಬುದು ಮುಖ್ಯವಾಗುತ್ತದೆ.

ಮೇಲಿನ ಕಂಡಿಕೆಯಲ್ಲಿ ಪಟ್ಟಿಮಾಡಿದ ಪದಗಳಲ್ಲಿ 'ಅಲ್ಲಿ' ಎಂಬುದಕ್ಕೆ ಹಲವು ಬಗೆಯ ಬಳಕೆ ಇರುವುದು ಗಮನಿಸಬೇಕಾದ ಸಂಗತಿ. ಇದು ದೂರ ಸೂಚಕ ಸರ್ವನಾಮವಾಗಿ ಬಳಕೆಯಾಗುತ್ತದೆ. ಆಗದು ಸ್ವತಂತ್ರ ಪದ. ಪ್ರತ್ಯಯ ಇಲ್ಲವೇ ಪದೋತ್ತರಿಯಾಗಿ ಬಳಕೆಯಾಗಲು ಮೊದಲಾದದ್ದು ಹೊಸಗನ್ನಡದಲ್ಲಿ. ನಡುಗನ್ನಡದಲ್ಲೂ 'ಅಲಿ' ಮತ್ತು 'ಒಳು' ಎಂಬ ಪದಗಳು ಕ್ರಮವಾಗಿ 'ಅಲ್ಲಿ' ಮತ್ತು 'ಒಳಗೆ' ಪದಗಳಿಗೆ ಬದಲಾಗಿ ಬಳಕೆಯಾಗುತ್ತಿದ್ದವು.ಈ ಒಳ್,ಉಳ್,ಒಳು ಗಳಿಗೆ ಯಾವಾಗ '-ಗೆ' ಪ್ರತ್ಯಯ ಬಂದು ಸೇರಿತು ಮತ್ತು ಅದಕ್ಕೆ ಇರುವ ಕಾರಣಗಳೇನು ಎನ್ನುವುದೇ ಇನ್ನೊಂದು ಚರ್ಚೆಗೆ ಕಾರಣವಾಗುವ ಸಂಗತಿ. 'ಒಳಗೆ' ಎಂಬುದರಲ್ಲಿ ಇರುವ '-ಗೆ' ಎಂಬ ಪ್ರತ್ಯಯಕ್ಕೆ ಸಮಾನವಾದ '-ಕ್ಕೆ' ಎಂಬ ಪ್ರತ್ಯಯವನ್ನು ಬಳಸಿ 'ಒಳಕ್ಕೆ' ಎಂಬ ಪದರೂಪವನ್ನು ಪಡೆದುಕೊಂಡೆವೆಂದುಕೊಳ್ಳಿ. ಆದರೆ ಇವೆರಡೂ ಯಾವಾಗಲೂ ಒಂದೇ ಬಗೆಯ ಕೆಲಸ ಮಾಡುವುದಿಲ್ಲ. 'ಮನೆಯೊಳಗೆ ಹೋಗು' ಎಂಬಲ್ಲಿ 'ಒಳಕ್ಕೆ' ಎಂಬ ಪದ ಬಳಸಬಹುದು. ಆದರೆ 'ಮನೆಯೊಳಗೆ ಇಲಿಯಿದೆ' ಎಂಬ ವಾಕ್ಯದಲ್ಲಿ 'ಒಳಕ್ಕೆ' ಬಳಸಲು ಸಾಧ್ಯವಿಲ್ಲ.

'ಅಲ್ಲಿ' ಪ್ರತ್ಯಯವಾಗಿ ಬಳಕೆಯಾದಾಗ ಅದನ್ನು ಸಪ್ತಮೀ ವಿಭಕ್ತಿ ಸೂಚಕವೆಂದು ವ್ಯಾಕರಣಗಳು ಹೇಳುತ್ತವೆ.ಆದರೆ ಈ ಪದರೂಪಕ್ಕೆ ಹಲವಾರು ಬಗೆಯ ಕೆಲಸಗಳಿರುವಂತೆ ತೋರುತ್ತದೆ.ಅದು ಎಷ್ಟೋ ಸಂದರ್ಭಗಳಲ್ಲಿ ಇನ್ನೊಂದು ಸಪ್ತಮೀ ವಿಭಕ್ತಿ ಸೂಚಕವಾದ 'ಒಳಗೆ'ಪದರೂಪಕ್ಕಿಂತ ಬೇರೆಯಾಗಿಯೇ ವರ್ತಿಸುತ್ತದೆ. 'ಅವರು ಚುನಾವಣೆಗೆ ನಿಂತಲ್ಲಿ ಗೆಲ್ಲುವುದು ಖಚಿತ' ಎನ್ನುವ ವಾಕ್ಯದಲ್ಲಿ ಇರುವ 'ಅಲ್ಲಿ' ಸಪ್ತಮೀ ವಿಭಕ್ತಿ ಸೂಚಕವಲ್ಲ;ಅದು ಸಂಭಾವನಾರ್ಥವನ್ನು (ನಿಂತರೆ ಎನ್ನುವ ಅರ್ಥದಲ್ಲಿ) ಸೂಚಿಸುತ್ತದೆ. ಈ ಬಗೆಯ ಬಳಕೆ ಈಗೀಗ ಕಡಿಮೆಯಾಗುತ್ತಿರುವಂತೆ ತೋರುತ್ತದೆ. ಅಥವಾ ಬರೆವಣಿಗೆಗೆ ಮಾತ್ರ ಸೀಮಿತಗೊಳ್ಳುತ್ತಿದೆ.;ಮಾತಿನಲ್ಲಿ ಮರೆಯಾಗುತ್ತಿರುವಂತಿದೆ.

ಈ ಟಿಪ್ಪಣಿಯ ಉದೇಶವಿಷ್ಟೆ: ನಾವು ಪದಗಳ ಅರ್ಥದ ಬಗೆಗೆ ಹೆಚ್ಚು ಎಚ್ಚರವಹಿಸುತ್ತೇವೆ. ಆದರೆ ಅವುಗಳ ಅರ್ಥವೆಂಬುದು ನಿಗದಿತವಾಗಿರುವುದಿಲ್ಲ. ಅದರಲ್ಲೂ ನಾಮಪದ ಮತ್ತು ಕೆಲವೊಮ್ಮೆ ಕ್ರಿಯಾಪದಗಳು ಹೆಚ್ಚು ಖಚಿತವಾದ ಅರ್ಥವನ್ನು ಹೊಂದಿವೆ ಎಂಬು ನಮಗೆ ತೋರಬಹುದು. ಆದರೆ ಭಾಷೆಯಲ್ಲಿ ಇರುವ ಸಾವಿರಾರು ಇತರ ಪದವರ್ಗದ ಪದರೂಪಗಳಿಗೆ ಹೀಗೆ ಅರ್ಥವೆಂಬುದನ್ನು ನಿಗದಿಯಾಗಿ ಹೇಳುವಂತಿರುವುದಿಲ್ಲ. ಅವು ಬಳಕೆಯಲ್ಲಿ ಪಡೆದುಕೊಳ್ಳುವ 'ವಾಕ್ಯಾತ್ಮಕ ಸಂಬಂಧ'ವನ್ನು ನಾವು ಗುರುತಿಸಬೇಕಾಗುತ್ತದೆ. ಆಗ ಮಾತ್ರ ಅವುಗಳ ನಿಜಸ್ವರೂಪ ನಮಗೆ ತಿಳಿಯಲು ಸಾಧ್ಯವಾಗುತ್ತದೆ. ಹೊಸಗನ್ನಡದಲ್ಲಿ ಹೀಗೆ ಪದರೂಪಗಳ ಬಳಕೆಯನ್ನು ಆಧರಿಸಿದ ವ್ಯಾಕರಣವನ್ನು ಜರೂರಾಗಿ ರಚಿಸುವ ಅಗತ್ಯವಿದೆ. ಅಲ್ಲದೆ ಈ ನಿಟ್ಟಿನಲ್ಲಿ ಹತ್ತೊಂಬತ್ತನೆಯ ಶತಮಾನದವರೆಗೆ ರಚನೆಯಾದ ವ್ಯಾಕರಣಗಳು ನಮ್ಮ ಉಪಯೋಗಕ್ಕೆ ಸಾಲವು. ಹೊಸಗನ್ನಡದ ಬಳಕೆಯ ಚಹರೆಗಳೇ ಬದಲಾಗಿಬಿಟ್ಟಿವೆ. ಆದ್ದರಿಂದ ಇಂದಿನ ಕನ್ನಡವನ್ನು ಗಮನಿಸಿಯೇ ನಮ್ಮ ಹೊಸ ವ್ಯಾಕರಣ ರಚನೆಯಾಗುವ ಅಗತ್ಯವಿದೆ.

ಓದುವುದು ಎಂದರೇನು?

ಈಚೆಗೆ ಹೆಚ್ಚು ಕಳವಳ ಮೂಡಿಸುವ ದನಿಯಲ್ಲಿದ್ದ ವರದಿಯೊಂದು ಎಲ್ಲ ಕಡೆಗಳಲ್ಲೂ ಪ್ರಕಟಗೊಂಡಿತು. ಅದರಂತೆ ಕನ್ನಡ ನಾಡಿನ ಐದನೆಯ ತರಗತಿಯಲ್ಲಿ ಓದುತ್ತಿರುವ ಮಕ್ಕಳಲ್ಲಿ ನೂರಕ್ಕೆ ಅರವತ್ತು ಮಂದಿಗೆ ಒಂದೆರಡು ಕನ್ನಡ ವಾಕ್ಯಗಳನ್ನು ಕೂಡ ತಪ್ಪಿಲ್ಲದೆ ಓದಲು ಬರುವುದಿಲ್ಲ. ಎಲ್ಲರಲ್ಲೂ ಆತಂಕ ಮೂಡಿಸುವ ಸುದ್ದಿಯಿದು. ನಮ್ಮ ಮಕ್ಕಳು ಹೀಗೆ ಓದುವುದರಲ್ಲಿ ಹಿಂದೆ ಬಿದ್ದಿದ್ದಾರೆ ಎಂಬುದನ್ನು ತಿಳಿದುಕೊಳ್ಳಲು 'ಪ್ರಥಮ'ಎಂಬ ಸಂಸ್ಥೆಯೊಂದು ತನ್ನದೇ ಆದ ರೀತಿಯಲ್ಲಿ ಪರಿಶೀಲನೆ ಮಾಡಿ ಈ ಸಂಗತಿಯನ್ನು ಎಲ್ಲರ ಗಮಕ್ಕೆ ತಂದಿದೆ. ತನ್ನ ವರದಿಯನ್ನು ಪ್ರಕಟಿಸಿದೆ. ಈ ಸಮೀಕ್ಷೆಯಲ್ಲಿ ಕಂಡು ಬಂದ ಮಾಹಿತಿಯನ್ನು ಆಧರಿಸಿ ಪತ್ರಿಕೆಗಳು ಸುದ್ದಿ ಮಾಡಿದವು. ಸಂಪಾದಕೀಯದಲ್ಲಿ ಆತಂಕವನ್ನು ತೋರಿದವು. ಅಗ್ರಲೇಖನಗಳನ್ನು ಬರೆದು ನಮ್ಮ ಶಿಕ್ಷಣದಲ್ಲಿ ಕಲಿಕೆಗೆ ಕೊನೆಯ ಮಣೆಯಷ್ಟೇ ದೊರಕುತ್ತಿದೆ ಎಂದು ಹಲುಬಿದವು. ಸರ್ಕಾರದ ಯಾವುದೇ ಇಲಾಖೆಯಿಂದ ಈ 'ಅಪಾಯಕಾರಿ ಪರಿಸ್ಥಿತಿ' ಬಗ್ಗೆ ಅಧಿಕೃತವಾದ ಪ್ರತಿಕ್ರಿಯೆಯೊಂದು ಪ್ರಕಟವಾದಂತೆ ಕಂಡುಬರುತ್ತಿಲ್ಲ.

'ಪ್ರಥಮ' ಸಂಸ್ಥೆಯ ಈ 'ಶೋಧ'ದ ಸರಿ ತಪ್ಪುಗಳನ್ನು ಕುರಿತು ಮಾತನಾಡುವ ಮೊದಲು 'ಓದುವುದು' ಎಂದರೇನು ಎಂಬ ಬಗ್ಗೆ ಕೊಂಚ ತಿಳಿದುಕೊಳ್ಳುವುದು ಅಗತ್ಯ. ಓದುವುದು ಒಂದು ಬಗೆಯಲ್ಲಿ 'ಒಳಗೆ ಪಡೆದುಕೊಳ್ಳುವ' ಕೆಲಸ.ಬೇರೆಯವರು ಮಾತನಾಡುವಾಗ ಕೇಳಿ ಅದನ್ನು ನಾವು ಅರಿತುಕೊಳ್ಳುವ ಹಾಗೆ ಬೇರೆಯವರು ಬರೆದದ್ದನ್ನು ನಾವು ಓದಿ ತಿಳಿದುಕೊಳ್ಳುತ್ತೇವೆ.ನಾವು ಬರೆಯುವಾಗ ಅಥವಾ ನಾವು ಬರೆದದ್ದನ್ನು ಓದುವಾಗಲೂ ಇದೇ ಕೆಲಸ ನಡೆಯುತ್ತಿರುತ್ತದೆ. ಓದುವಾಗ ಕಣ್ಣು ಕೆಲಸ ಮಾಡುತ್ತದೆ. ಇದರ ಜೊತೆಗೆ ನಾವು ನುಡಿಯಲು ಬಳಸುವ ದೇಹದ ಅಂಗಗಳು ಕೆಲಸ ಮಾಡುತ್ತವೆ. ಅದರಿಂದಾಗಿ ನಮ್ಮ ಕಿವಿಯೂ ಕೆಲಸ ಮಾಡುತ್ತದೆ. ನಮ್ಮ ನುಡಿಯುವ ಅಂಗಗಳು ಕೆಲಸ ಮಾಡುವಾಗ ನಮ್ಮ ಕಿವಿಯೂ ಕೆಲಸ ಮಾಡುವುದು. ಇವೆರಡು ಒಟ್ಟಾಗಿ ನಡೆಯುವ ಕೆಲಸಗಳು. ಆದರೆ ಕಣ್ಣು ಓದುವ ಕೆಲಸ ಮಾಡುವಾಗ ನಮ್ಮ ನುಡಿಯುವ ಅಂಗಗಳು ಕೆಲಸ ಮಾಡಲೇ ಬೇಕೆಂದಿಲ್ಲ. ಅಂದರೆ ಓದುವುದು ಮೂರು ನೆಲೆಯ ಕೆಲಸ. ಕಣ್ಣಿನ ಕೆಲಸ,ಕಿವಿಯ ಕೆಲಸ,ನುಡಿಯುವ ಅಂಗಗಳ ಕೆಲಸ.

ಶಾಲೆಯಲ್ಲಿ ಬರೆಯುವುದನ್ನು ಮತ್ತು ಓದುವುದನ್ನು ಕಲಿಸಲು ಈಗ ಬಳಸುತ್ತಿರುವ ವಿಧಾನಗಳು ಭಾಷೆ ಮತ್ತು ಬರವಣಿಗೆಯ ಅತಿ ಚಿಕ್ಕ ಘಟಕವನ್ನು ಆಧಾರವಾಗಿ ಇರಿಸಿಕೊಂಡಿರುತ್ತವೆ. ಇದರಲ್ಲಿ ತಪ್ಪೇನೂ ಇಲ್ಲವಾದರೂ ನಮ್ಮ ಓದು ಮತ್ತು ಬರೆಹಗಳು ಮುಂದೆಯೂ ಹಾಗೆ ಉಳಿಯುವುದಿಲ್ಲ. ಬರಹದ ಮಾತನ್ನು ಸದ್ಯ ಬದಿಗಿಡೋಣ. ಓದು ಎಂಬ ಕೌಶಲ ನಮ್ಮಲ್ಲಿ ಬೆಳೆಯುವ ಬಗೆಯನ್ನು ನೋಡೋಣ. ಮೊದಲು ಓದುವುದು ಎಂದರೆ ಬರಹದಲ್ಲಿ ಕಾಣಿಸುವ ಅಕ್ಷರಘಟಕಗಳೆಲ್ಲವನ್ನೂ ಅವು ಇರುವಂತೆಯೇ ಬೇರೆಬೇರೆಯಾಗಿ ಗ್ರಹಿಸಿ ಉಚ್ಚರಿಸುವುದು ಎಂದೇ ತಿಳಿಯುತ್ತೇವೆ ಹಾಗೆಯೇ ಓದುತ್ತೇವೆ.ನುಡಿಯುವ ಅಂಗಗಳ ನೆರೆವಿಲ್ಲದೆ ಓದುವುದು ಸಾದ್ಯವೇ ಇಲ್ಲ ಎನ್ನುವಂತೆ ನಮಗೆ ತರಬೇತನ್ನು ನೀಡಲಾಗುತ್ತದೆ. ಆದರೆ ದಿನಕಳೆದಂತೆ ನಾವು ಓದುವಾಗ ಮೌನವಾಗುತ್ತೇವೆ. ನುಡಿಯುವ ಅಂಗಗಳಿಗೆ ಕೆಲಸವನ್ನು ನೀಡುವುದಿಲ್ಲ. 'ಮೌನವಾಗಿ' ಓದುತ್ತೇವೆ. ಇಂತಹ ಓದಿನಲ್ಲಿ ಕಣ್ಣಿಗೆ ಕೆಲಸ ಹೆಚ್ಚು. ಕಣ್ಣಿನ ಮೂಲಕ ಓದುವಾಗ ಬರಹದ ಪ್ರತಿ ಘಟಕವನ್ನೂ ಬಿಡಿಬಿಡಿಯಾಗಿ ನಾವು ಗ್ರಹಿಸುವುದಿಲ್ಲ. ಒಂದು ಪದವನ್ನು ಒಂದು ಚಿತ್ರದಂತೆ ಇಡಿಯಾಗಿ ಗ್ರಹಿಸಿ ಓದುತ್ತೇವೆ. ಅದರಿಂದ ನಮ್ಮ ಓದಿಗೆ ಯಾವ ಅಡ್ಡಿಯೂ ಇಲ್ಲ. ಎಷ್ಟೋ ವೇಳೆ ನಾವು 'ಓದಿದ',ಸರಿಯಾಗಿ ಅರಿತುಕೊಂಡ ವಾಕ್ಯವೊಂದರಲ್ಲಿ ಬಳಕೆಯಾದ ಪದವೊಂದರ ಕಾಗುಣಿತ ನಮಗೆ ಗೊತ್ತಿರದೇ ಹೋಗಬಹುದು.ಇದರಿಂದಲೇ ನಾವು ನೂರಾರು ಬಾರಿ ಸರಿಯಾಗಿ ಓದಿದ ಪದಗಳನ್ನು ಬರೆಯುವಾಗ ತಪ್ಪು ಮಾಡುತ್ತಲೇ ಇರುತ್ತೇವೆ. ಅಂದರೆ ಓದಿದ ಪದದ ಪ್ರತಿ ಘಟಕವನ್ನೂ ನಾವು ಗ್ರಹಿಸುವುದು ಓದಿನಲ್ಲಿ ಅನಿವಾರ್ಯವಲ್ಲ. ಹೀಗಾಗುವುದು ಸರಿಯೋ ತಪ್ಪೋ ಎಂದು ಪ್ರಶ್ನೆ ಹಾಕುತ್ತಾ ಕೂರುವುದರಲ್ಲಿ ಅರ್ಥವಿಲ್ಲ. ಇರುವುದೇ ಹಾಗೆ. ಹೀಗೆಯೆ ಸಾವಿರಾರು ಪುಟಗಳನ್ನು ನಾವು ಓದುತ್ತಲೇ ಇದ್ದೇವೆ.

ಒಂದು ಚಿಕ್ಕ ಪರೀಕ್ಷೆಯನ್ನು ನಾವೇ ಮಾಡಿಕೊಳ್ಳಬಹುದು. ದಿನಪತ್ರಿಕೆಯೊಂದನ್ನು ಓದುವಾಗ ಅಲ್ಲಿರುವ ಪ್ರತಿ ಪದವನ್ನೂ ಬಿಡದೇ ಗಟ್ಟಿಯಾಗಿ ಉಚ್ಚರಿಸಿ ಓದಲು ಪ್ರಯತ್ನಿಸಿ ನೋಡಿ. ಆಗ ಎರಡು ಬಗೆಯ ಅಡ್ಡಿಗಳು ಎದುರಾಗುತ್ತವೆ.ಒಂದು: ಎಷ್ಟೋ ಪದಗಳನ್ನು ನಾವು ಸರಿಯಾಗಿ ಉಚ್ಚರಿಸಲು ಸಾಧ್ಯವಾಗುವುದಿಲ್ಲ. ಎರಡು: ನಮ್ಮ ಓದು ಬೇಸರವೆನಿಸುವಷ್ಟು ನಿಧಾನವಾಗುತ್ತದೆ. ಓದುವುದೇ ಆಯಾಸದ ಕೆಲಸವಾಗುತ್ತದೆ. ಆದರೆ ಕಣ್ಣಿನಿಂದ ಓದುವಾಗ ಈ ತೊಂದರೆಯನ್ನು ನಾವು ಅನುಭವಿಸುವುದಿಲ್ಲ. ಸರಾಗವಾಗಿ ಓದಿ ಅರಿತುಕೊಳ್ಳುತ್ತೇವೆ. ಇದರಿಂದ ಗೊತ್ತಾವುದೇನು? ನಾವು ಶಾಲೆಯಲ್ಲಿ ಓದಲು ಕಲಿಯುವ ಬಗೆ ಮುಂದೆ ನಮಗೆ ಉಪಯೋಗಕ್ಕೆ ಬರುವುದಿಲ್ಲ. ಆ ಕೌಶಲವನ್ನು ನಾವು ಮುಂದೆ ಅಲ್ಲಿ ಕಲಿತ ಬಗೆಯಲ್ಲಿ ಬಳಸುವುದೇ ಇಲ್ಲ.

ಕೆಲವು ವೃತ್ತಿಗಳಲ್ಲಿ ಬರೆದದ್ದನ್ನು ಗಟ್ಟಿಯಾಗಿ ಓದಿ ಹೇಳುವುದು ಅಗತ್ಯವಾಗಿರುತ್ತದೆ. ಈಚೆಗೆ ಅಂತಹ ವೃತ್ತಿಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಉದಾ.ಗೆ. ವಾರ್ತಾ ವಾಚಕರು,ನಿರೂಪಕರು,ನಟರು. ಇವರೆಲ್ಲ ಯಾರೋ ಬರೆದದ್ದನ್ನು ತಾವು ನುಡಿಯುವ ಅಂಗಗಳನ್ನು ಬಳಸಿ ಓದಬೇಕಾಗುತ್ತದೆ.;ಹೇಳಬೇಕಾಗುತ್ತದೆ. ಆಗ ಅವರು ಉಚ್ಚಾರಣೆಯ ಅತಿ ಚಿಕ್ಕ ಘಟಕವನ್ನೂ ಬಿಡದೇ ಉಚ್ಚರಿಸಬೇಕು. ಇದು ಬೆಳೆಸಿಕೊಳ್ಳಬೇಕಾದ ಕೌಶಲ. ಶಾಲೆಯ ಓದಿನ ಕಲಿಕೆಯಷ್ಟೇ ಇದಕ್ಕೆ ಸಾಲದು.

ಇದೆಲ್ಲವನ್ನೂ ಹೇಳಿದ್ದಕ್ಕೆ ಕಾರಣವಿದೆ. 'ಪ್ರಥಮ್'ಸಂಸ್ಥೆ ಓದಿನ ಕೌಶಲವನ್ನು ಕುರಿತು ನಡೆಸಿದ ಸಮೀಕ್ಷೆ ವಾಸ್ತವವಾಗಿ ನಾವು ತಿಳಿದಷ್ಟು ಆತಂಕವನ್ನು ಹುಟ್ಟಿಸಬೇಕಾಗಿಲ್ಲ. ಏಕೆಂದರೆ ಯಾವ ಕೌಶಲವನ್ನು ಮಕ್ಕಳು ಪಡೆದಿಲ್ಲವೆಂದು ನಾವು ಗಾಬರಿಯಾಗುತ್ತಿದ್ದೇವೆಯೋ ಆ ಕೌಶಲ ಮುಂದೆ ಅವರಿಗೆ ಉಪಯೋಗಕ್ಕೆ ಬರುವಂತಹುದಲ್ಲ. ಅಥವಾ ಅದಿಲ್ಲದೆಯೂ ಆವರು ಸರಿಯಾಗಿ ಓದುವುದು ಸಾಧ್ಯವಾಗುತ್ತದೆ.ದೊಡ್ಡವರಾದಾಗ ಅವರು ಬಳಸುವುದು 'ಕಣ್ಣಿನ ಓದೇ' ಹೊರತು 'ಕಿವಿಯ ಓದನ್ನಲ್ಲ'

'ಪ್ರಥಮ್' ಸಂಸ್ಥೆಯ ಸಮೀಕ್ಷೆಯ ವಿಧಾನವನ್ನು ಕುರಿತು ಇನ್ನೂ ಕೆಲವು ಪ್ರಶ್ನೆಗಳನ್ನು ಎತ್ತಬಹುದು. ಈ ಬಗೆಯ ಕೌಶಲಗಳನ್ನು ಆಯ್ದ ಮಾದರಿಗಳ ಸಮೀಕ್ಷೆಯಿಂದ ಪರಿಶೀಲಿಸಲು ಸಾಧ್ಯವೇ ಎನ್ನುವುದು ಅಂತಹ ಇನ್ನೊಂದು ಪ್ರಶ್ನೆ.
ಓದು ಕೌಶಲ ವೈಯಕ್ತಿಕ ನೆಲೆಯ ಆವಿಷ್ಕಾರ. ಅದನ್ನು ಸಾಮುದಾಯಿಕ ನೆಲೆಯ ಸಮೀಕ್ಷೆಗಳಿಂದ ಮೌಲ್ಯಾಂಕನ ಮಾಡುವುದು ಸಾಧ್ಯವೇ? ಹಾಗೆ ಮಾಡುವುದು ಎಷ್ಟು ಸೂಕ್ತ? ಅಲ್ಲದೆ ಹೀಗೆ ಸಮೀಕ್ಷಿಸಲು ಇಡೀ ಕರ್ನಾಟಕದಿಂದ ಆಯ್ದುಕೊಂಡ ವಿದ್ಯಾರ್ಥಿಗಳ ಸಂಖ್ಯೆ ಹದಿನೈದು ಸಾವಿರ.( ಇವರಿಗೆ ಓದಲು ಕೊಟ್ಟ ಕೆಲವೇ ವಾಕ್ಯಗಳ ಮುದ್ರಿತ ಮಾದರಿಯಲ್ಲೇ ಮೂರು ಮುದ್ರಣ ದೋಷಗಳಿವೆ ಎಂಬುದು ಬೇರೆಯೇ ಮಾತು.) ಈ ಹದಿನೈದು ಸಾವಿರ ಜನರಿಗೆ ಓದಲು ನೀಡಿದ ಪರಿಸರ ಮತ್ತು ಸಮಯ ಎಷ್ಟು? ಹೀಗಾಗಿ ಈ ಸಮೀಕ್ಷೆಯ ಫಲಿತಗಳನ್ನು ಕಂಡು ನಾವು ಖಿನ್ನರಾಗಲು ಕಾರಣಗಳಿಲ್ಲ. ಹಾಗೆಂದ ಮಾತ್ರಕ್ಕೆ ನಮ್ಮ ಶಾಲೆಯ ಭಾಷಾ ಕಲಿಕೆಯ ವಲಯದಲ್ಲಿ ಎಲ್ಲವೂ ಸರಿಯಾಗಿದೆ ಎಂದೇನೂ ಅಲ್ಲ. ಆದರೆ ಅದನ್ನು ತಿಳಿಯಲು ಬೇರೆಯೇ ದಾರಿಗಳಿವೆ.

ಕನ್ನಡದ ಮೇಲೆ ಸಂಸ್ಕೃತದ ಸವಾರಿ

ಕನ್ನಡ ಬರಹದಲ್ಲಿ ಹೆಚ್ಚಾಗಿ ಸಂಸ್ಕೃತ ಪದಗಳನ್ನು ಸೇರಿಸಲು ನಾವು ಹಿಂಜರಿಯುವುದಿಲ್ಲ. ಹಾಗೆ ಸಂಸ್ಕೃತ ಪದಗಳನ್ನು ಹೆಚ್ಚು ಬಳಸುವುದು ಏಕೆಂದು ಕೇಳಿದರೆ ಹಾಗೆ ಮಾಡುವುದು ಸರಿಯೆಂದು ಒಪ್ಪಿಸುವ ಮಾತುಗಳನ್ನೂ ಹೇಳುತ್ತೇವೆ. ಒಂದು: ಕನ್ನಡದಲ್ಲಿ ತಕ್ಕ ಪದಗಳಿಲ್ಲದೇ ಇರುವುದರಿಂದ ಹೀಗೆ ಸಂಸ್ಕೃತ ಪದಗಳನ್ನು ಬಳಸುತ್ತೇವೆ. ಎರಡು: ಈಗಾಗಲೇ ಬಳಕೆಯಲ್ಲಿರುವ ಸಂಸ್ಕೃತ ಪದಗಳನ್ನೇ ಬಳಸುವುದರಿಂದ ಓದುವವರಿಗೆ ತಟಕ್ಕನೆ ತೊಂದರೆಯಿಲ್ಲದೆ ಗೊತ್ತಾಗುತ್ತದೆ..ಮೂರು: ಹೊಸ ಕನ್ನಡ ಪದಗಳನ್ನು ತಯಾರು ಮಾಡಲು ಆಗುವುದಿಲ್ಲ; ಹಾಗೆ ತಯಾರು ಮಾಡಿದರೂ ಅವುಗಳನ್ನು ಓದುವವರಿಗೆ ಸರಿಯಾಗಿ ಗೊತ್ತಾಗುವುದಿಲ್ಲ. ನಾಲ್ಕು. ಸಂಸ್ಕೃತ ಪದಗಳನ್ನು ಬಳಸುವುದರಿಂದ,ಆ ಪದಗಳಿಂದ ಹುಟ್ಟಿದ ರೂಪಗಳನ್ನು ಬಳಸಲು ಅನುವಾಗುತ್ತದೆ; ಅದರಿಂದ ನಮಗೆ ಹೆಚ್ಚು ಪದಗಳು ದೊರೆಯುತ್ತವೆ; ಇದು ಕನ್ನಡ ಪದಗಳ ಬಳಕೆಯಿಂದ ಆಗುವುದಿಲ್ಲ. ಐದು: ಸಂಸ್ಕೃತ ಪದಗಳಿಗೆ ಒಂದು ಬಗೆಯ ಸೊಬಗಿದೆ.;ಕನ್ನಡದ ದೇಸಿ ಪದಗಳ ರೂಪ ಒಂದು ಕಡೆಯಿಂದ ಇನ್ನೊಂದು ಕಡೆಗೆ ಬದಲಾಗುವುದರಿಂದ ಅವುಗಳಲ್ಲಿ ಸರಿಯಾದುದನ್ನು ಹುಡುಕಿ ಬಳಸುವುದು ಆಗದ ಮಾತು. ಈ ಎಲ್ಲ ವಿವರಣೆಯನ್ನೂ ನಾವು ಕೊಂಚ ಎಚ್ಚರಿಕೆಯಿಂದ ನೋಡಿದರೆ ಅವೆಲ್ಲವೂ ದಿಟವಲ್ಲವೆಂದು ಗೊತ್ತಾಗುತ್ತದೆ. ಎಲ್ಲರೂ ಹೇಗೆ ಮಾಡುತ್ತಿದ್ದಾರೋ ಹಾಗೇ ನಾವು ಮಾಡುತ್ತಿದ್ದೇವೆ ಎನ್ನುವುದಂತೂ ನಿಜ.

ಇದೂ ಅಲ್ಲದೆ ಹೆಚ್ಚು 'ಶುದ್ಧ'ವಾದ ಕನ್ನಡ ಎಂದರೆ ಸಂಸ್ಕೃತ ಪದಗಳು ಬೆರೆತ ಮತ್ತು ಸಂಸ್ಕೃತ ಪದಗಳನ್ನು ಅವುಗಳ ಮೂಲ ರೂಪದಲ್ಲೇ ಉಳಿಸಿಕೊಂಡ ಕನ್ನಡ ಎಂಬುದು ಜಾರಿಯಲ್ಲಿರುವ ಒಂದು ನಂಬಿಕೆಯಾಗಿದೆ. ಅಂದರೆ ನಾವು ಸಂಸ್ಕೃತ ಪದಗಳನ್ನು ನೆಮ್ಮುವುದಷ್ಟೇ ಅಲ್ಲ ಅವುಗಳು ಹೇಗಿವೆಯೋ ಹಾಗೇ ಬಳಸಬೇಕೆಂಬ ಒತ್ತಾಯವನ್ನೂ ಹೇರಿಕೊಂಡಿದ್ದೇವೆ. ನಮ್ಮ ಹಳೆಯ ಕವಿಗಳು ಹಿಂಜರಿಕೆ ಇಲ್ಲದೆ ಬಳಸಿದ 'ಅಂಕುಸ', 'ಜನುಮ', 'ಮೊಗ', 'ದಿಟ್ಟಿ', 'ಆಗಸ' ಮೊದಲಾದ ಪದಗಳನ್ನು ನಾವು ಮಾತು ಬರಹಗಳಲ್ಲಿ ಬಳಸಲು ಹಿಂಜರಿಯುತ್ತೇವೆ. ಹಾಗೆ ಬಳಸಿದರೂ ಆ ಬಳಕೆಯನ್ನು ಕವಿತೆ,ಕತೆಗಳಿಗೆ ಮೀಸಲಿಡುತ್ತೇವೆ.

ಸರಿ. ಇದು ಹೀಗಿದೆ ಎಂದು ಗೊತ್ತಾದ ಮೇಲೆ ಅದರಿಂದ ಆಗಿರುವ ತೊಂದರೆ ಏನು ಎಂಬುದನ್ನು ನೋಡೋಣ. ನಾವು ನಮ್ಮ ಬರೆವಣಿಗೆಯಲ್ಲಿ ಬಳಸುತ್ತಿರುವ ನೂರಾರು ಸಂಸ್ಕೃತ ಪದಗಳಿಗೆ ಬದಲಾಗಿ ಕನ್ನಡದ ಪದಗಳನ್ನೇ ಬಳಸಬಹುದಾಗಿದೆ. ಹಾಗೆ ಆ ಕನ್ನಡ ಪದಗಳನ್ನು ಬಳಸದೇ ಇರುವುದರಿಂದ ಅವುಗಳಲ್ಲಿ ಹಲವು ನಮ್ಮ ನೆನಪಿನಿಂದ ಜಾರಿ ಹೋಗುತ್ತಿವೆ. ಈ ಮಾತು ಎಷ್ಟು ಸರಿ ಎಂಬುದನ್ನು ತಿಳಿಸಲು ಮುಂದೆ ಕೆಲವು ಪದಗಳನ್ನು ನೀಡಿದ್ದೇನೆ. ಈ ಎಲ್ಲ ಪದಗಳೂ ದಿನಪತ್ರಿಕೆಯೊಂದರಲ್ಲಿ ಒಂದೇ ದಿನ ಬಳಕೆಯಾಗಿದ್ದವು. ಆಯಾ ಪದಗಳ ಜೊತೆಗೆ ಬದಲಾಗಿ ಬಳಸಬಹುದಾಗಿದ್ದ ಕನ್ನಡ ಪದಗಳನ್ನೂ ನೀಡಿದೆ. ವೈಫಲ್ಯ (ಸೋಲು), ನೇತೃತ್ವ (ಮುಂದಾಳುತನ, ಕಣ್ಗಾವಲು), ಅಂತಿಮ (ಕೊನೆ), ವಿಳಂಬ (ತಡ), ಸನ್ನಿಹಿತವಾಗು (ಹತ್ತಿರವಾಗು,ಹತ್ತಿರಬರು), ಸ್ಫೋಟ(ಸಿಡಿತ), ತಕ್ಷಣ(ಕೂಡಲೇ), ಸ್ವೀಕರಿಸು (ಪಡೆ,ಪಡೆದುಕೊಳ್ಳು), ಸ್ಥಾಪಿಸು (ನೆಲೆಗೊಳಿಸು, ಇಡು), ಸಾಕಾರಗೊಳ್ಳು (ಮೈದಳೆ, ಕಾಣಿಸು,ಕಾಣುವಂತಾಗು), ತ್ಯಜಿಸು( ಬಿಡು,ಇಟ್ಟುಕೊಡು,ತೊರೆ), ಅಭೂತಪೂರ್ವಕ( ಹಿಂದೆಂದೂ ಇಲ್ಲದ, ಈವರೆಗೆ ಇಲ್ಲದ) ಭೀತಿಪಡು (ಹೆದರು,ಬೆದರು),ಸಹಮತ (ಒಪ್ಪಿಗೆ, ಒಪ್ಪಂದ) ಉಕ್ತಿ (ಮಾತು,ನುಡಿ),ವಿನೂತನ (ಹೊಸ), ಪರಂಪರಾಗತ(ತಲೆಮಾರಿನಿಂದ ಬಂದ,ಹಿಂದಿನಿಂದಲೂ ಇರುವ), ಸಮೀಪಿಸು (ಹತ್ತಿರವಾಗು) ಮಗ್ನವಾಗು (ಮುಳುಗಿರು,ಮನಸ್ಸಿಟ್ಟಿರು),ಘಟಿಸು (ಆಗು,ನಡೆ), ಇಚ್ಚಿಸು( ಬಯಸು) ನಿಯಂತ್ರಿಸು (ಹಿಡಿತದಲ್ಲಿಡು), ರಕ್ಷಿಸು (ಕಾಪಾಡು,ಪೊರೆ) ಪುನರುಚ್ಚರಿಸು(ಮತ್ತೆ ಹೇಳು,ಮರಳಿ ನುಡಿ). ಜೊತೆಯಲ್ಲಿ ನೀಡಿಡ ಕನ್ನಡ ಪದಗಳು ಆಯಾ ಪದಗಳು ಬಳಕೆಯಾಗಿದ್ದ ಕಡೆ ಹೊಂದಿಕೊಳ್ಳುತ್ತವೆ ಎಂಬುದನ್ನು ಗುರುತಿಸಿಕೊಂಡಿದ್ದೇನೆ.ಒಂದುವೇಳೆ ಬೇರೆ ಪದಗಳು ಬೇಕೆಂದರೆ ಕನ್ನಡದಲ್ಲಿ ಅವು ದೊರೆಯುವುದಿಲ್ಲ ಎಂದು ಹೇಳಬರುವುದಿಲ್ಲ.ಅಂದರೆ ಕನ್ನಡ ಪದಗಳು ತಟಕ್ಕನೆ ಒದಗುವ ಕಡೆಗಳಲ್ಲೂ ನಾವು ಬರಹದಲ್ಲಿ ಸಂಸ್ಕೃತ ಪದಗಳನ್ನೇ ಬಳಸುತ್ತೇವೆ ಎಂದಾಯ್ತು. ಇದು ಸುದ್ದಿ ಪತ್ರಿಕೆಗಳಲ್ಲಿ ಕಂದುಬಂದದ್ದು. ಬೇರೆಬೇರೆ ಬಗೆಯ ಕನ್ನಡ ಬರಹಗಳಲ್ಲಿ ಈ ಬಗೆಯ ಬಳಕೆ ಇನ್ನೂ ಹೆಚ್ಚಾಗಿರುವುದನ್ನು ಕೊಂಚ ಎಚ್ಚರದಿಂದ ನೋಡಿದರೆ ತಿಳಿಯಬಹುದು.

ಹೀಗೆ ಬರೆದರೆ ತಪ್ಪೇನು ಎಂದು ಕೇಳಬಹುದು. ಇದು ತಪ್ಪು ಸರಿಯ ಮಾತಲ್ಲ. ನೂರಾರು ವರುಷಗಳಿಂದ ಈ ಸಂಸ್ಕೃತ ಪದಗಳನ್ನು ನಾವು ಬಳಸುತ್ತಲೇ ಬಂದಿದ್ದೇವೆ ಈಗಲೂ ಅವುಗಳನ್ನು ಬಳಸುವುದು ಸರಿಯೇ ತಾನೇ ಎಂದು ಹೇಳಿದರೆ ಅದಕ್ಕೆ ಏನೂ ಹೇಳುವಂತಿಲ್ಲ. ಆದರೆ ಕೊಂಚ ಈ ಬಗ್ಗೆ ತಲೆಕೆಡಿಸಿಕೊಳ್ಳೋಣ. ಹೀಗೆ ಬಂದು ಸೇರಿದ ಸಂಸ್ಕೃತ ಪದಗಳು ಎರಡು ಬಗೆಯಲ್ಲಿ ಕನ್ನಡ ಪದಗಳ ಜೊತೆ ನಡೆದುಕೊಂಡಿವೆ. ಒಂದು. ಕನ್ನಡ ಪದಗಳ ಜಾಗದಲ್ಲಿ ತಾವೇ ನೆಲೆಗೊಂಡಿರುವುದು. ಎರಡು: ಕನ್ನಡ ಪದಗಳನ್ನು ಹೊರದೂಡದಿದ್ದರೂ ಅವುಗಳ ಹರವನ್ನು ತಗ್ಗಿಸುವುದು. ಒಂದೆರಡು ಮಾದರಿಗಳನ್ನು ನೋಡಿ: 'ಸಮಯ' ಬಂದು "ಹೊತ್ತು' ಕಣ್ಮರೆಯಾಯಿತು. 'ಅನ್ನ' ಬಂದು 'ಕೂಳು' ಎಂಬ ಕನ್ನಡ ಪದ ಮೈಕುಗ್ಗುವಂತಾಯಿತು.ಇಂತಹ ನೂರಾರು ಪದಗ ಪಟ್ಟಿಯಿದೆ. ಕನ್ನಡ ಪದಗಳು ತೆರೆಮರೆಗೆ ಸರಿಯುವುದು, ಚಲವಣೆಯಲ್ಲಿದ್ದರೂ ಮೈಕುಗ್ಗಿಸಿಕೊಂಡಿರುವುದು ಎಷ್ಟು ಸರಿ?

ಸಂಸ್ಕೃತ ಪದಗಳನ್ನು ನಾವು ಇಷ್ಟು ಸಲೀಸಾಗಿ ಎಗ್ಗಿಲ್ಲದೆ ಬಳಸುವುದರಿಂದ ನಮಗೆ ಬೇರೊಂದು ಬಗೆಯ ನೆರವು ಒದಗಿದೆ. ಈಗಾಗಲೇ ಬಳಸಿ ಬಳಸಿ ಸವೆದು ಹೋದ ದಾರಿಯಲ್ಲಿ ನಾವು ನಡೆಯುವಂತಾಗಿದೆ. ಹೀಗಂದರೇನು? ಸರಕಾರಿ ಕಚೇರಿಗಳಲ್ಲಿ ಕೆಲಸ ಮಾಡುವವರು ತಮ್ಮ ಕಡತಗಳಲ್ಲಿ ಟಿಪ್ಪಣಿ ಬರೆಯುವುದನ್ನು ನೋಡಿದರೆ ಅವರು ತಾವೇ ಆ ವಾಕ್ಯಗಳನ್ನು ಹೊಸದಾಗಿ ಕಟ್ಟದೇ ಈಗಾಗಲೇ ಬಳಸಿದ ವಾಕ್ಯಗಳ ಚೌಕಟ್ಟನ್ನೇ ಇರುವಂತೆಯೇ ನಕಲು ಮಾಡುತ್ತಿರುತ್ತಾರೆ ಎನ್ನುವುದು ತಿಳಿಯುತ್ತದೆ. ಅಲ್ಲಿ ನುಡಿ ಬಳಕೆಯಲ್ಲಿ ತನ್ನತನ ಎನ್ನುವುದು ಇರುವುದಿಲ್ಲ.;ಇದ್ದರೂ ಕಡಿಮೆ. ಸಂಸ್ಕೃತ ಪದಗಳು ಹೀಗೆ ನಮಗೆ ಸವೆದ ಹಾದಿಯ ವಾಕ್ಯಗಳನ್ನು ಕಟ್ಟಲು ನೆರವಾಗುತ್ತವೆ. ಯಾರಾದರೂ ಕನ್ನಡ ಪದಗಳನ್ನೆ ಬಳಸಿ ವಾಕ್ಯಗಳನ್ನು ಕಟ್ಟಬೇಕೆಂದು ಹೊರಟಾಗ ಮೇಲೆ ಹೇಳಿದ ಮಾತು ದಿಟವೆಂಬುದು ಗೊತ್ತಾಗುತ್ತದೆ. ಹಾಗೆ ಮಾಡುವಾಗ ಬೇಕಾದಷ್ಟು ಕನ್ನಡ ಪದಗಳು ತಟಕ್ಕನೆ ನೆನಪಿಗೆ ಬರುವುದಿಲ್ಲ ಎನ್ನುವುದು ಒಂದು ಮಾತಾದರೆ ಹಾಗೆ ನೆನಪಿಗೆ ಬಂದ ಪದಗಳನ್ನು ಬಳಸಿ ವಾಕ್ಯಗಳನ್ನು ಕಟ್ಟ ಬೇಕಾದರೆ ಬೇರೆ ಬಗೆಯಲ್ಲೇ ಕಟ್ಟಬೇಕಾಗುತ್ತದೆ. ಈಗ ನೀವು ಓದುತ್ತಿರುವ ಬರಹವನ್ನು ಹೀಗೆ ಕನ್ನಡ ಪದಗಳಿಂದಲೇ ಕಟ್ಟ ಬೇಕೆಂದುಕೊಂಡೆ. ಆಗ ಅದರ ಎಡರುತೊಡರುಗಳು ಗೊತ್ತಾಗತೊಡಗಿದವು.

ಇದರಿಂದ ತಿಳಿಯುವುದೇನು? ನಾವು ಸಂಸ್ಕೃತ ಪದಗಳನ್ನು ಬಳಸುವುದರಿಂದ ಹೆಚ್ಚು ಮೈಮುರಿಯದೇ ಬರಹವನ್ನು ಕಟ್ಟುತ್ತಿರುತ್ತೇವೆ. ಕನ್ನಡವನ್ನು ಹೆಚ್ಚಾಗಿ ಬಳಸ ಹೊರಟಾಗ ನಮ್ಮ ದಾರಿ ಎಷ್ಟು ಕಡಿದಾಗಿದೆ ಎಂಬುದು ತಿಳಿಯುತ್ತದೆ. ಹಾಗಿದ್ದರೂ ಈ ಕಡಿದು ದಾರಿಯನ್ನೇ ನಾವೀಗ ಆಯ್ದುಕೊಳ್ಳಬೇಕೆಂಬುದು ನಾನು ಹೇಳುತ್ತೇನೆ. ಹೀಗೆ ಮಾಡುವುದರಿಂದ ನಾವು ಕನ್ನಡವನ್ನು ಬರೆಯುವ ಬಗೆಯೇ ಬದಲಾಗುತ್ತದೆ ಎನ್ನುವುದು ಒಂದು ಮಾತು. ಜೊತೆಗೆ ಕನ್ನಡ ಪದಗಳು ತೆರೆಯ ಹಿಂದಿನಿಂದ ಮುಂದೆ ಬರತೊಡಗುತ್ತವೆ; ಮೈಕುಗ್ಗಿಸಿಕೊಳ್ಳದೆ ತಮ್ಮ ನಿಜ ಬಣ್ಣದಲ್ಲಿ ಬಳಕೆಯಾಗ ತೊಡಗುತ್ತವೆ ಎನ್ನುವುದು ಇನ್ನೊಂದು ಮಾತು.

ಕೆಲವರು ಹಿಗೆ ಮಾಡುವುದರಿಂದ ಬೇಡದ ಹೊರೆಯನ್ನು ಮೈಮೇಲೆ ಎಳೆದುಕೊಂಡಂತೆ ಎನ್ನುವರು. ಮತ್ತೂ ಕೆಲವರು ಮುಂದೆ ಸಾಗುವುದನ್ನು ಬಿಟ್ಟು ಹೆಜ್ಜೆಗಳನ್ನು ಹಿಂದಕ್ಕೆ ಹಾಕಿದಂತೆ ಎನ್ನುವರು. ಮೊದಲ ಮಾತನ್ನು ಬದಿಗಿಡಿ. ಎರಡನೆಯ ಮಾತು ಸರಿಯಲ್ಲ. ಒಂದೊಮ್ಮೆ ನಾವು ಹಿಡಿದು ಹೋಗುತ್ತಿರುವ ದಾರಿ ತಪ್ಪಾಗಿದ್ದರೆ ಹಿಂದೆ ಹೋಗಿ ಸರಿದಾರಿಯನ್ನು ಹಿಡಿಯಬೇಕಲ್ಲವೇ?
ಕನ್ನಡ ಪದಗಳನ್ನೇ ಬಳಸುವುದೆಂದರೆ ಎಲ್ಲ ಸಂಸ್ಕೃತ ಪದಗಳನ್ನು ಹೊರಗಿಡುವುದೆಂದಲ್ಲ. ಕನ್ನಡ ಪದಗಳನ್ನು ಹೆಚ್ಚಾಗಿ ಬಳಸುವುದು; ಸಂಸ್ಕೃತ ಪದಗಳನ್ನು ಬಳಸಿದರೂ ಅವು ಕನ್ನಡದ ನುಡಿಜಾಡಿಗೆ ಹೊಂದಿಕೊಳ್ಳುವಂತೆ ಮಾಡಿ ಆಮೇಲೆ ಬಳಸುವುದು ನಮ್ಮ ಮುಂದಿನ ದಾರಿಯಾಗಬೇಕು.ಹೀಗೆ ಸಂಸ್ಕೃತ ಪದಗಳ ಸವಾರಿಯಿಂದ ತಪ್ಪಿಸಿಕೊಳ್ಳುವುದರಿಂದ ಮತ್ತೊಂದು ಗೊಂದಲದಿಂದ ಪಾರಾಗಬಹುದು. ಅದೆಂದರೆ ಈಗಿರುವ ಮಾತಿನ ಕನ್ನಡ ಮತ್ತು ಬರಹದ ಕನ್ನಡ ಬೇರೆಬೇರೆಯಾಗಿರುವುದನ್ನು ತಪ್ಪಿಸಬಹುದು. ಎರಡು ಒಂದೇ ಆಗದಿದ್ದರೂ ಅವುಗಳ ನಡುವೆ ಅಷ್ಟೊಂದು ದೊಡ್ಡ ತೆರಪು ಇಲ್ಲದಂತೆ ಮಾಡಬಹುದು. ಈಗ ಇವೆರಡು ಒಂದಕ್ಕೊಂದು ಬೆನ್ನು ಮಾಡಿ ನಡೆದಿವೆ. ಮಾತಾಡುವ ಕನ್ನಡಿಗರು ಕನ್ನಡ ಬರಹವನ್ನು ಓದಲು ಹಿಂಜರಿಯುತ್ತಿರುವುದು ಇದರಿಂದಾಗಿಯೇ ಇರಬೇಕು. ಹೆಚ್ಚು ಜನ ಕನ್ನಡವನ್ನು ಓದ ಬೇಕೆಂದರೆ ಅವರು ಮಾತಾಡುವ ಕನ್ನಡ ಮತ್ತು ಓದುತ್ತಿರುವ ಕನ್ನಡಗಳು ಬೇರೆಬೇರೆ ಎನ್ನಿಸಬಾರದಲ್ಲವೇ? ಕನ್ನಡವನ್ನು ಉಳಿಸಬೇಕೆಂದು ಪಣತೊಡುತ್ತಿರುವ ನಾವೆಲ್ಲ ಈ ದಿಕ್ಕಿನಲ್ಲಿ ಕೆಲಸ ಮಾಡಬೇಕಲ್ಲವೆ?

ಅನುವಾದದ ಭಾಷೆ

ದಿನಕಳೆದಂತೆ ಒಂದೇ ಭಾಷೆಯನ್ನು ಮಾತ್ರ ಬಲ್ಲ ಸಮುದಾಯಗಳು ಕಡಿಮೆಯಾಗುತ್ತಿವೆ. ವ್ಯಕ್ತಿಗಳು ಒಂದೇ ಭಾಷೆಗೆ ಮಿತಿಗೊಂಡು ಬದುಕಲು ಹಟ ತೊಡಬಹುದು;ಆದರೆ ಸಮುದಾಯಗಳಲ್ಲ. ಇಂದಿನ ಸಂಪರ್ಕ ಸಾಧನಗಳು ಎಲ್ಲ ಸಮುದಾಯಗಳ ಮೇಲೆ ತನ್ನದಲ್ಲದ ಬೇರೆ ಭಾಷೆಗಳ ಕೌಶಲಗಳನ್ನು ಹೊಂದಲು ಒತ್ತಾಯ ತರುತ್ತಿವೆ. ಕನ್ನಡದ ಮಟ್ಟಿಗೆ ಈ ಒತ್ತಾಯ ಮೊದಲಾಗಿ ಎರಡು ಸಾವಿರ ವರುಷಗಳೇ ಕಳೆದಿವೆ. ಪ್ರಾಕೃತಗಳು,ಅರ್ಧಮಾಗಧಿ,ಸಂಸ್ಕೃತ, ಅರಾಬಿಕ್,ಪರ್ಶಿಯನ್, ಮರಾಠಿ,ಉರ್ದು,ಹಿಂದಿ,ಇಂಗ್ಲಿಶ್,ಪೋರ್ಚುಗೀಸ್ ಜೊತೆಗೆ ನೆರೆಯ ದ್ರಾವಿಡ ಭಾಷೆಗಳು ಕನ್ನಡಿಗರನ್ನು ವಿವಿಧ ಕಾಲಮಾನಗಳಲ್ಲಿ ಬೇರೆಬೇರೆ ಬಗೆಗಳಲ್ಲಿ ಆವರಿಸಿಕೊಂಡಿವೆ. ಕನ್ನಡಿಗರು ಈ ಭಾಷೆಗಳಲ್ಲಿ ವ್ಯವಹರಿಸುವ ಸಂದರ್ಭಗಳು ಚರಿತ್ರೆಯಲ್ಲಿ ಮೈತಳೆದುನಿಂತಿವೆ. ಇದೆಲ್ಲದರ ಪರಿಣಾಮ ಕನ್ನಡ ಭಾಷೆಯ ಮೇಲೆ ಆಗಿದೆ. ಕನ್ನಡ ಮತ್ತು ಕನ್ನಡಿಗರು ಬೇರೆ ಬೇರೆ ಬಗೆಯಲ್ಲಿ ಈ ಪರಿಣಾಮಕ್ಕೆ ಒಳಗಾಗಿರುವುದು ಕಂಡುಬರುತ್ತದೆ.

ಒಂದಕ್ಕಿಂತ ಹೆಚ್ಚು ಭಾಷೆಗಳನ್ನು ಬಲ್ಲ ಕನ್ನಡಿಗರು ತಮ್ಮ ದಿನನಿತ್ಯದ ವ್ಯವಹಾರಗಳಲ್ಲಿ ತಾವು ಬಲ್ಲ ಇನ್ನೊಂದು ಭಾಷೆಯಿಂದ ಅನುವಾದಿಸಿಕೊಳ್ಳುವ ಕೆಲಸವನ್ನು ಮಾಡುತ್ತಿರುತ್ತಾರೆ.ನೀವು ತೆಲುಗನ್ನು ಬಲ್ಲ ಕನ್ನಡಿಗರು ಎಂದುಕೊಳ್ಳಿ. ತೆಲುಗು ಚಲನಚಿತ್ರವೊಂದನ್ನು ಟಿವಿಯಲ್ಲಿ ನೋಡುತ್ತಿದ್ದರೆ ಆಗ ನೀವು ಆ ಚಿತ್ರವನ್ನು ನೋಡುತ್ತಿರುವಷ್ಟು ಕಾಲ ತೆಲುಗಿನಿಂದ ಕನ್ನಡಕ್ಕೆ ಅಲ್ಲಿನ ಮಾತುಗಳನ್ನು ಅನುವಾದಿಸಿಕೊಳ್ಳುತ್ತಿರುತ್ತೀರಿ. ಆದರೆ ಹಾಗೆ ಮಾಡುತ್ತಿರುವುದು ನಿಮಗೆ ಗೊತ್ತಾಗುತ್ತಿರುವುದಿಲ್ಲ. ಇದೊಂದು ಯಥಾನುವಾದದ ಕೆಲಸವಲ್ಲ. ತೆಲುಗನ್ನು ತೆಲುಗಾಗಿಯೇ ನೀವು ಅರ್ಥ ಮಾಡಿಕೊಳ್ಳುವುದು ಸಾಧ್ಯವಿಲ್ಲ. ಹಾಗೆಂದು ಅಲ್ಲಿನ ಮಾತುಗಳನ್ನು ಪದ ಬಿಡದಂತೆ ಕನ್ನಡೀಕರಿಸಿಕೊಳ್ಳುವುದೂ ಸಾಧ್ಯವಿಲ್ಲ ಆದರೆ ನಾವು ಅನುವಾದಕರಂತೆ ಕೆಲಸ ಮಾಡುತ್ತಿರುವುದಂತೂ ನಿಜ. ಹೀಗಲ್ಲದೆ ಒಂದೇ ಭಾಷೆ ಬಲ್ಲವರಿಗಾಗಿ ಕನ್ನಡಕ್ಕೆ ವಿವಿಧ ಭಾಷೆಗಳಿಂದ ಅನುವಾದಿಸುವ ಕೆಲಸವೂ ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತದೆ. ಇದೊಂದು ಎಚ್ಚರದ,ಉದ್ದೇಶಿತ ಕ್ರಿಯೆ. ಅನುವಾದದಲ್ಲಿ ತೊಡಗಿದವರಿಗೆ ತಾವು ಏನು ಮಾಡುತ್ತಿದ್ದೇವೆ ಎನ್ನುವುದರ ಅರಿವು ಇರುತ್ತದೆ. ಇದು ಮಾತಿನ ಹಂತದಲ್ಲಿ ಇರುವಂತೆ ಬರಹದ ಹಂತದಲ್ಲೂ ಇರಬಹುದು. ಮಾತಿನ ಹಂತದಲ್ಲಿ ನಡೆಯುವ ಈ ಬಗೆಯ ಕ್ರಿಯೆ ಬಹು ವ್ಯಾಪಕವಾದುದು. ಅಂತಹ ಸಂದರ್ಭಗಳ ಲಕ್ಷಣಗಳನ್ನು ನಾವು ಇನ್ನೂ ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ. ಸರಳವಾದ ಈ ಉದಾಹರಣೆಯನ್ನು ನೋಡಿ. ತರಗತಿಯಲ್ಲಿ ಇಂಗ್ಲಿಶ್ ಬೋಧಿಸುತ್ತಿರುವ ಅಧ್ಯಾಪಕರು ಹಲವೊಮ್ಮೆ ಮೂಲ ಇಂಗ್ಲಿಶ್ ವಾಕ್ಯಗಳನ್ನು ಓದುತ್ತಲೇ ಅದರ ಕನ್ನಡ ಅನುವಾದನ್ನು ಮಾಡಿ ಮಕ್ಕಳಿಗೆ ಅದು ತಿಳಿಯುವಂತೆ ಮಾಡುತ್ತಿರುತ್ತಾರೆ. ಈ ಅನುವಾದಗಳು ಪ್ರಮಾಣೀಕರಣಗೊಳ್ಳುವುದಿಲ್ಲ.

ಬರವಣಿಗೆಯಲ್ಲಿ ಅನುವಾದವೆಂಬುದು ಹೆಚ್ಚು ಎಚ್ಚರದ ಮತ್ತು ಬಹು ವ್ಯಾಪಕವಾದ ಕೆಲಸವಾಗಿ ಬಿಡುತ್ತದೆ. ನಾವು ದಿನವೂ ಓದುವ ಬಹುಪಾಲು ಕನ್ನಡ ಸಾಮಗ್ರಿ ಕನ್ನಡಕ್ಕೆ ಅನುವಾದಗೊಂಡದ್ದು ಎನ್ನುವುದು ನಮಗೆ ಗೊತ್ತಾಗುವುದೇ ಇಲ್ಲ. ಪತ್ರಿಕೆಗಳು,ದೃಶ್ಯ ಮಾಧ್ಯಮಗಳು ವಾರ್ತೆಗಳನ್ನು,ಅಗ್ರ ಲೇಖನಗಳನ್ನು ಇಂಗ್ಲಿಶಿನಿಂದ ಅಥವಾ ಕೆಲವೊಮ್ಮೆ ಹಿಂದಿಯಿಂದ ಅನುವಾದಿಸಿಕೊಂಡಿರುತ್ತಾರೆ. ಕನ್ನಡದಲ್ಲೆ ಬರೆದಂತೆ ತೋರಿದರೂ ಮೂಲ ಸಾಮಗ್ರಿಗಾಗಿ ಇಂಗ್ಲಿಶ್ ಆಕರಗಳನ್ನು ದಂಡಿಯಾಗಿ ಬಳಸಿಕೊಂಡಿರುವುದನ್ನು ಯಾರಾದರೂ ಗುರುತಿಸಿಸಬಹುದು. ಸುಮ್ಮನೆ ಈಗ ದಿನವೂ ಬರುತ್ತಿರುವ ವಿಶ್ವ ಪುಟ್ ಬಾಲ್ ಪಂದ್ಯಗಳ ವರದಿಯನ್ನು ಎಚ್ಚರದಿಂದ ಓದಿದರೆ ಈ ಲಕ್ಷಣಗಳು ಗೊತ್ತಾಗುತ್ತವೆ. ರಾಜಕೀಯ ವಿಶ್ಲೇಷಣೆಗಳಿಗೆ,ಬೇರೆಬೇರೆ ಜ್ಞಾನ ಶಿಸ್ತುಗಳ ಮಾಹಿತಿಯನ್ನು ನೀಡುವ ಲೇಖನಗಳಿಗೆ ಹೀಗೆ ಇಂಗ್ಲಿಶ್ ಆಕರವನ್ನು ಆಶ್ರಯಿಸುವುದು ಒಪ್ಪಿತವಾಗಿರುವ ವಿಷಯವಾಗಿಬಿಟ್ಟಿದೆ. ನಮ್ಮ ಮಕ್ಕಳು ಓದುವ ಶಾಲಾ ಪಠ್ಯ ಪುಸ್ತಕಗಳು ಕನ್ನಡದಲ್ಲಿದ್ದರೂ ಅವುಗಳಲ್ಲಿ ಬಹುಪಾಲು ಮೊದಲು ಇಂಗ್ಲಿಶಿನಲ್ಲಿ ಬರೆದದ್ದನ್ನು ಆನಂತರ ಕನ್ನಡಕ್ಕೆ ಅನುವಾದ ಮಾಡಲಾಗಿರುತ್ತದೆ. ನಮ್ಮ ಶಾಸಕಾಂಗದಲ್ಲಿ ಅನುಮೋದನೆ ಪಡೆಯುವ ಮಸೂದೆಗಳು ಮೊದಲು ಇಂಗ್ಲಿಶಿನಲ್ಲೇ ಸಿದ್ಧಗೊಂಡಿರುತ್ತವೆ. ಅವುಗಳ ಕನ್ನಡ ಅನುವಾದವನ್ನು ಒದಗಿಸಲಾಗುತ್ತದೆಯದರೂ ವಿವರಣೆ ಅಗತ್ಯವಾದಾಗ ಇಂಗ್ಲಿಶ್ ಆವೃತ್ತಿಯನ್ನೇ ಅಧಿಕೃತವೆಂದು ತಿಳಿಯಬೇಕೆಂಬ ಶರತ್ತು ಇರುತ್ತದೆ.

ಈ ಎಲ್ಲ ಸಂಗತಿಗಳಿಂದ ಕನ್ನಡ ಮಾತಿನಲ್ಲಿ ಸ್ವತಂತ್ರ ರಚನೆಗಳು ಸಿಗುವಷ್ಟು ಬರೆಹದಲ್ಲಿ ಸಿಗುವುದಿಲ್ಲ ಎನ್ನುವ ಸಂಗತಿ ನಮಗೆ ಗೊತ್ತಾಗುತ್ತದೆ. ಮಾತಿನಲ್ಲೂ ಔಪಚಾರಿಕ ಸಂದರ್ಭದ ಮಾತುಗಳು ನೇರವಾಗಿ ಅಲ್ಲದಿದ್ದರೂ ಬಳಸು ದಾರಿಯಿಂದ ಅನುವಾದದ ನೆರಳನ್ನು ಹಿಡಿದಿರುತ್ತವೆ ಎನ್ನುವುದಕ್ಕೆ ನೂರಾರು ನಿದರ್ಶನಗಳು ನಮಗೆ ದೊರಕುತ್ತವೆ. ಇದರಿಂದ ಕನ್ನಡ ಭಾಷೆಯ ರಚನೆಯ ಮೇಲೆ ದಟ್ಟವಾದ ಪರಿಣಾಮಗಳು ಆಗಿವೆ.ಮುಖ್ಯವಾಗಿ ಪದರಚನೆ ಮತ್ತು ನುಡಿಗಟ್ಟುಗಳಲ್ಲಿ ಈ ಪರಿಣಾಮ ಎದ್ದು ಕಾಣುವಂತಿದೆ.

ಪದರಚನೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹೊಸ ಪದರೂಪಗಳನ್ನು ಬಳಸುವ ಅಗತ್ಯವುಂಟಾಗಿದೆ. ಇದಕ್ಕಾಗಿ ಹೆಚ್ಚು ಸಂಸ್ಕೃತ ಪದಗಳನ್ನು ಅವುಗಳಿಂದ ರಚನೆಗೊಂಡ ರೂಪಗಳನ್ನು ಬಳಸಲು ಮೊದಲು ಮಾಡಿದ್ದೇವೆ. ಕೆಲವು ಕಡೆಗಳಲ್ಲಿ ಮೂಲ ಇಂಗ್ಲಿಶ್ ಪದಗಳನ್ನು ಹಾಗೆಯೇ (ಹೆಚ್ಚಾಗಿ ನಾಮಪದಗಳ ರೂಪದಲ್ಲಿ) ಉಳಿಸಿಕೊಳ್ಳುವುದೂ ಉಂಟು.ಯಾವಾಗ ಮತ್ತು ಯಾವ ವಲಯಗಳಲ್ಲಿ ಹೀಗೆ ಸಂಸ್ಕೃತ ಮತ್ತು ಇಂಗ್ಲಿಶ್ ಪದರೂಪಗಳ ಅಯ್ಕೆ ನಡೆಯುತ್ತದೆ ಎಂಬುದು ಕುತೂಹಲಕರ ಸಂಗತಿಯಾಗಿದೆ.ದಿನಪತ್ರಿಕೆಗಳನ್ನು ತಿರುವಿಹಾಕಿದರೆ ಈ ಆಯ್ಕೆಗಳ ಸ್ವರೂಪ ಗೊತ್ತಾಗುವಂತಿರುತ್ತದೆ. ವಿಶ್ಲೇಷಣೆ ಮುಖ್ಯವಾಗಿರುವ ವಲಯಗಳಲ್ಲಿ ಸಂಸ್ಕೃತ ಪದಗಳನ್ನು ಆಯ್ದುಕೊಳ್ಳುವುದನ್ನು ಮತ್ತು ನಿರೂಪಣೆ ಮುಖ್ಯವಾಗಿರುವ ಕಡೆಗಳಲ್ಲಿ ಇಂಗ್ಲಿಶ್ ಪದಗಳನು ಉಳಿಸಿಕೊಳ್ಳುವುದನ್ನು ಗಮನಿಸುವುದು ಸಾಧ್ಯ. ಈ ನಿಯಮಗಳಿಗೆ ಅಪವಾದಗಳು ಇಲ್ಲವೆನ್ನುವಷ್ಟು ಕಡಿಮೆ.

ನುಡಿಗಟ್ಟುಗಳು ಭಾಷೆಯ ಬಳಕೆಯ ಗಡಿಗಳನ್ನು ಅಗಲವಾಗಿಸಬಲ್ಲವು. ಆದರೆ ಅನುವಾದಗಳನ್ನು ಅವಲಂಬಿಸಿದ ಇಂದಿನ ಕನ್ನಡ ಕನ್ನಡದ ನುಡಿಗಟ್ಟುಗಳಿಗೆ ಬದಲಾಗಿ ಇಂಗ್ಲಿಶ್ ಭಾಷೆಯ ನುಡಿಗಟ್ಟುಗಳನ್ನು ಇರುವಂತೆಯೇ ಅನುವಾದಮಾಡಿಕೊಂಡು ಬಳಸುವ ಹಾದಿಯನ್ನು ಕಂಡುಕೊಂಡಿದೆ. ಇದರಿಂದ ಕನ್ನಡದ ನುಡಿಕಟ್ಟುಗಳು ಬಳಕೆಯಿಂದ ಹಿಂದಕ್ಕೆ ಸರಿಯುವಂತಾಗಿದೆ. ಅಲ್ಲದೆ ಅನುವಾದಗೊಂಡು ಬಳಕೆಯಾದ ಎಷ್ಟೋ ನುಡಿಗಟ್ಟುಗಳನ್ನು ಅರಿಯಲು ಮೂಲ ಇಂಗ್ಲಿಶಿನ ಪರಿಚಯ ಅಗತ್ಯವೆನ್ನುವ ಪರಿಸ್ಥಿತಿಯೂ ನಿರ್ಮಾಣಗೊಂಡಿದೆ. ಹಾಗೆ ಮೂಲ ಗೊತ್ತಿಲ್ಲದ ಸಂದರ್ಭಗಳಲ್ಲಿಈ ಹೊಸ ನುಡಿಕಟ್ಟುಗಳು ಕನ್ನಡದ ಚೌಕಟ್ಟಿನಲ್ಲಿ ತುತ್ತಿನ ಕಲ್ಲುಗಳಂತೆ ಆಗಿಬಿಡುತ್ತವೆ.ಪತ್ರಿಕೆಗಳಲ್ಲಿ ಓದಲು ಸಿಗುವ ಜಾಹೀರಾತುಗಳ ಕನ್ನಡದಲ್ಲಿ ಈ ಬಗೆಯ ನುಡಿಗಟ್ಟುಗಳ ಸೇರ್ಪಡೆ ಹೆಚ್ಚಾಗಿ ಕಾಣುತ್ತದೆ. ಪತ್ರಿಕೆಗಳ ವರದಿಗಳಲ್ಲೂ ಅಪರೂಪವೇನಲ್ಲ. ಈಚಿನ ದಿನಗಳಲ್ಲಿ ಕನ್ನಡದ ವಾಕ್ಯ ರಚನೆಯ ಮೇಲೂ ಈ ಅನುವಾದ ಪ್ರಕ್ರಿಯೆಯ ಪರಿಣಾಮ ಹೆಚ್ಚಾಗಿ ಆಗುತ್ತಿರುವುದು ಕಂಡು ಬರುತ್ತಿದೆ. ವಾಕ್ಯದ ಕರ್ತೃವನ್ನು ಒಂದು ಉಪವಾಕ್ಯದ ಅನಂತರ ಹೇಳುವ ಪದ್ಧತಿ ಈಗ ಹೆಚ್ಚಾಗುತ್ತಿದೆ. ಇದು ಕನ್ನಡದಲ್ಲಿ ಇರದಿದ್ದ ವಾಕ್ಯ ರಚನೆಯ ವಿಧಾನ.ಉದಾ.ಗೆ"ಧಾರಾಕಾರವಾಗಿ ಸುರಿಯುತ್ತಿದ್ದ ಮಳೆಯಲ್ಲೂ ಸಮಯಪ್ರಜ್ಞೆಯನ್ನು ಕಾಯ್ದುಕೊಳ್ಳಬೇಕೆಂಬ ಉದ್ದೇಶದಿಂದ ಕ್ಲುಪ್ತಕಾಲಕ್ಕೆ ಆಗಮಿಸಿದ ಮುಖ್ಯ ಅತಿಥಿಗಳನ್ನು ಸ್ವಾಗತಿಸಲು ಸಮಾರಂಭದ ಆಯೋಜಕರು ಯಾರೂ ಅಲ್ಲಿ ಇರಲೇ ಇಲ್ಲ." ಕನ್ನಡದಲ್ಲಿ ಎರಡು ಅಥವಾ ಹೆಚ್ಚು ವಾಕ್ಯಗಳಾಗಿ ನಿರೂಪಿತವಾದಾಗ ಇದು ಸಹಜವಾಗಿರುತ್ತದೆ. ಆದರೆ ಈ ಬಗೆಯ ರಚನೆಗಳು ಈಗ ಕನ್ನಡದಲ್ಲಿ ಹೆಚ್ಚಾಗುತ್ತಿವೆ. ವಾಕ್ಯ ರಚನೆಯ ಮೇಲೆ ಆಗುತ್ತಿರುವ ಇನೂ ಹಲವು ಪರಿಣಾಮಗಳನ್ನು ನಾವಿನ್ನೂ ವಿವರವಾಗಿ ಅಭ್ಯಾಸ ಮಾಡಬೇಕಾಗಿದೆ.

ಕಥೆ,ಕಾದಂಬರಿ,ಕವನಗಳ ಅನುವಾದ ಎಂದಿನಿಂದಲೂ ಕನ್ನಡದಲ್ಲಿ ನಡೆಯುತ್ತಿದೆ. ಈಗಲೂ ಬೇರೆಬೇರೆ ಪ್ರಮಾಣದಲ್ಲಿ ನಡೆಯುತ್ತಲೇ ಇದೆ. ಇಲ್ಲಿ ಮಾತ್ರ ಅನುವಾದಕರು ಬಹು ಎಚ್ಚರದಿಂದ ಕನ್ನಡದ ಜಾಯಮಾನವನ್ನು ಕಾಯ್ದುಕೊಳ್ಳುವ ಪ್ರಯತ್ನವನ್ನು ಮಾಡುತ್ತಾರೆ. ಅನುವಾದಗಳ ಯಶಸ್ಸನ್ನು ಕುರಿತು ವಿಮರ್ಶೆ ಮಾಡುವವರು ಸಾಮಾನ್ಯವಾಗಿ ಅನುವಾದಕರ ಈ ಎಚ್ಚರವನ್ನು ಗುರುತಿಸುತ್ತಾರೆ. ಎಲ್ಲ ಅನುವಾದಗಳಲ್ಲೂ ಈ ಎಚ್ಚರ ಸಮ ಪ್ರಮಾಣದಲ್ಲಿ ಕಂಡುಬರುವುದಿಲ್ಲ. ಆದರೆ ಈ ವಲಯದಲ್ಲಿ ಮಾತ್ರ ತಾವು ಬಳಸುತ್ತಿರುವ ಕನ್ನಡವು ಮೂಲಕೃತಿಯ ಭಾಷೆಯಿಂದ ಬೇರೆಯಾಗಿರುವ ಸ್ವತಂತ್ರ ಅಸ್ತಿತ್ವವುಳ್ಳ ಭಾಷೆ ಎಂಬ ಬಗೆಗೆ ಹೆಚ್ಚಿನ ಕಾಳಜಿ ಕಾಣುತ್ತದೆ. ಆದರೆ ಈ ಬಗೆಯ ಅನುವಾದಗಳ ಭಾಷಿಕ ಪರಿಣಾಮ ಮಾತ್ರ ಹೆಚ್ಚಿನದಾಗಿ ತೋರುವುದಿಲ್ಲ. ಎಂದರೆ ಕನ್ನಡದ ಒಟ್ಟು ಬೆಳವಣಿಗೆಯ ನಿಟ್ಟಿನಲ್ಲಿ ನಾವು ಮೊದಲು ಚರ್ಚಿಸಿದ ವಲಯದ ಕನ್ನಡದ ಬಳಕೆಯೇ ಹೆಚ್ಚು ಪ್ರಭಾವ ಬೀರುವಂತಿದೆ.ಕನ್ನಡ ಭಾಷಾ ಯೋಜಕರು ಈ ಬಗ್ಗೆ ಗಮನ ಹರಿಸುವ ಅಗತ್ಯ ಎಂದಿಗಿಂತ ಈಗ ಹೆಚ್ಚಾಗಿದೆ.