Tuesday, August 26, 2008

ಭಾಷೆ ಯಾರ ಸ್ವತ್ತು?

ಭಾಷೆ ಯಾರ ಸ್ವತ್ತು?
ಈಚೆಗೆ ಹಿರಿಯರೊಬ್ಬರು ಕೇಳಿದ ಪ್ರಶ್ನೆಯಿದು: ’ಭಾಷೆ ಯಾರ ಸ್ವತ್ತು?’ ಇದೊಂದು ಕಾಡಿಸುವ ಪ್ರಶ್ನೆಯೆಂದು ಮೇಲು ನೋಟಕ್ಕೆ ಅನ್ನಿಸುವುದಿಲ್ಲ. ಕನ್ನಡ ಯಾರಿಗೆ ಸೇರಿದ್ದು ಎಂದು ಕೇಳಿದರೆ ಅದು ಆ ಭಾಷೆಯನ್ನು ಬಳಸುವ ಎಲ್ಲರಿಗೂ ಸೇರಿದ್ದು ಎಂದು ಉತ್ತರ ಕೊಡುತ್ತೇವೆ. ಆದರೆ ಈ ಭಾಷೆಯನ್ನು ಈ ಹಿಂದೆಯೂ ಆಡಿದವರಿದ್ದಾರೆ ಮುಂದೆ ಆಡುವವರೂ ಇದ್ದಾರೆ. ಆಂದರೆ ಕನ್ನಡ ಅವರೆಲ್ಲರಿಗೂ ಸೇರಿದ್ದು ಎಂದು ಹೇಳಬೇಕಾಗುತ್ತದೆ. ಯಾವುದೇ ಸ್ವತ್ತನ್ನು ನನಗೆ ಸೇರಿದ್ದು; ಕೆಲವರಿಗೆ ಸೇರಿದ್ದು ಇಲ್ಲವೇ ಎಲ್ಲರಿಗೂ ಸೇರಿದ್ದು ಎಂದು ಬಗೆಬಗೆಯಾಗಿ ನೋಡುತ್ತೇವೆ. ಸ್ವತ್ತು ಯಾರಿಗೆ ಸೇರಿದ್ದು ಎನ್ನುವುದನ್ನು ಅವಲಂಬಿಸಿ ಅದನ್ನು ಯಾರು ಹೇಗೆ ಬಳಸಬೇಕು ಮತ್ತು ಅದರ ಫಲವನ್ನು ಉಣ್ಣಬೇಕು ಎಂಬುದನ್ನು ನಿರ್ಧರಿಸುತ್ತೇವೆ. ಅದನ್ನು ಬಹುಮಟ್ಟಿಗೆ ಒಪ್ಪಿ ಆಚರಿಸುತ್ತವೆ. ಈ ಒಪ್ಪಂದವನ್ನು ಮೀರಿದ ಪ್ರಸಂಗಗಳು ತಿಕ್ಕಾಟಗಳಿಗೆ,ಕಾನೂನು ಸಮರಗಳಿಗೆ ಕಾರಣವಾಗುತ್ತವೆ. ಹಾಗಿದ್ದಲ್ಲಿ ಭಾಷೆ ಎನ್ನುವ ಎಲ್ಲರಿಗೆ ಸೇರಿದ ಸ್ವತ್ತಿನ ನಿರ್ವಹಣೆ ಹೇಗೆ ಆಗುತ್ತಿದೆ?

ಎಲ್ಲರಿಗೆ ಸೇರಿದ ಸ್ವತ್ತನ್ನು ಎಲ್ಲರೂ ಬಳಸದೇ ಇರಬಹುದು.ಬಳಸುವವರೂ ಕೂಡ ಬಳಸುವ ಪ್ರಮಾಣದಲ್ಲಿ ಏರುಪೇರುಗಳಿರುತ್ತವೆ. ಊರೊಟ್ಟಿನ ಮೈದಾನವೊಂದನ್ನು ಕೆಲವರು ಆಟ ಆಡಲು ಬಳಸಿಯಾರು. ಮತ್ತೆ ಕೆಲವರು ಹಾದು ಹೋಗುವ ದಾರಿ ಅದರ ನಡುವೆ ಇದ್ದೀತು. ಕೆಲವರು ತಿರುಗಾಡಿ ಬಂದಾರು. ಮತ್ತೆಕೆಲವರು ಎಂದೂ ಅದರೆಡೆಗೆ ತಲೆಹಾಕದೆಯೂ ಇದ್ದುಬಿಡುತ್ತಾರೆ. ಆದರೆ ಇದರಿಂದ ಆ ಮೈದಾನ ಊರೊಟ್ಟಿನದು ಎಂಬುದಕ್ಕೆ ಧಕ್ಕೆಯೇನೂ ಇಲ್ಲ. ಅದನ್ನು ಕೆಲವರು ತಮ್ಮದನ್ನಾಗಿ ಮಾಡಿಕೊಂಡು ಬೇರೆಯವರ ಬಳಕೆಗೆ ಸಿಗದಂತೆ ಮಾಡಿದಾಗ ತಕರಾರುಗಳು ಹುಟ್ಟಿಕೊಳ್ಳುತ್ತವೆ.ಇಲ್ಲವೇ ಆ ಮೈದಾನವನ್ನು ಯಾವಾಗ ಯಾರು ಮತ್ತು ಏಕೆ ಬಳಸಬೇಕು ಎಂಬುದನ್ನು ಕುರಿತು ಒಮ್ಮುಖದ ನಿರ್ಧಾರಗಳನ್ನು ತೆಗೆದುಕೊಂಡಾಗಲೂ ಗೊಂದಲಗಳು ಉಂಟಾಗುತ್ತವೆ.

ಭಾಷೆ ಎಲ್ಲರಿಗೆ ಸೇರಿದ ಸ್ವತ್ತು ಎಂದರೂ ಅದು ಇತರ ಸ್ವತ್ತುಗಳ ಹಾಗೆ ಇರುವಂತೆ ತೋರುತ್ತಿಲ್ಲ. ಏಕೆಂದರೆ ಅದಕ್ಕೆ ಎಲ್ಲರೂ ನೋಡಬಹುದಾದ ಗ್ರಹಿಸಬಹುದಾದ ಹೊರ ನೆಲೆಯೊಂದು ಇಲ್ಲ. ನಾವು ಆಡುವ ಇಲ್ಲವೇ ಕೇಳುವ ಮಾತುಗಳೆಲ್ಲ ಆ ಸ್ವತ್ತಿನ ಫಲಿತಗಳೇ ಹೊರತು ಆ ಮಾತುಗಳೇ ಸ್ವತ್ತುಗಳಲ್ಲ. ಹಾಗಾಗಿ ಎಲ್ಲರಿಗೂ ಸೇರಿದ ಭಾಷೆಯೆಂಬ ಸ್ವತ್ತಿನ ದುರುಪಯೋಗ,ಅತಿಕ್ರಮಣಗಳು ನಡೆಯುತ್ತಿವೆಯೇ ಎನ್ನುವುದನ್ನು ಸುಲಭವಾಗಿ ಗುರುತಿಸಲು ಆಗುವುದಿಲ್ಲ. ನಮಗೆ ಗೊತ್ತಿಲ್ಲದಂತೆ ಎಲ್ಲರಿಗೂ ಸೇರಿದ ಸ್ವತ್ತಿನ ಮೇಲಿನ ಹಿಡಿತ ಕೆಲವರ ಕೈಸೇರಿರಲೂ ಬಹುದು. ಅದು ಹಾಗಾಗಿದೆ ಎನ್ನವುದು ನಮಗೆ ಗೊತ್ತಾಗದೆಯೂ ಇರಬಹುದು.

ಎಲ್ಲರಿಗೂ ಸೇರಿದ ಸ್ವತ್ತುಗಳಾದ ನೆಲ ಮತ್ತು ನೀರು ಈಗ ಎಲ್ಲರಿಗೂ ಸೇರಿದ ಸ್ವತ್ತುಗಳಾಗಿ ಉಳಿದಿಲ್ಲ. ನೆಲ ಮತ್ತು ನೆಲಕ್ಕೆ ಸೇರಿದ ಪ್ರತಿಯೊಂದು ಈಗ ಕೆಲವರ ಕೈಸೇರಿದೆ. ಇಲ್ಲವೆ ಕೆಲವರು ಅದರ ಬಳಕೆ ಹೇಗಾಗ ಬೇಕೆಂದು ತೀರ್ಮಾನಿಸುತ್ತಿದ್ದಾರೆ; ನೀರಿನ ಮಟ್ಟಿಗೂ ಇದೆ ಮಾದರಿ ಹೊಂದುವಂತೆ ತೋರುತ್ತಿದೆ. ಭಾಷೆಯ ನೆಲೆಯಲ್ಲಿಯೂ ಈ ಮಾತು ನಿಜವೇ ಎನ್ನುವುದನ್ನು ಈಗ ನಾವು ಗಮನಿಸಬೇಕಾಗಿದೆ. ಸ್ವತ್ತಿನ ಹಕ್ಕಿನ ಉಲ್ಲಂಘನೆ ಸುಲಭವಾಗಿ ಗುರುತಿಸುವಂತಿರುವ ಕೆಲಲವು ಪ್ರಸಂಗಗಳನ್ನು ಮೊದಲು ನೋಡೋಣ.

ಜಗತ್ತಿನಲ್ಲೆಲ್ಲಾ ಜನ ಸಮುದಾಯಗಳು ತಾವು ಹುಟ್ಟಿದ ನೆಲೆಗಳನ್ನು ತೊರೆದು ಬೇರೆಬೇರೆ ಕಡೆಗಳಿಗೆ ಹೋಗಿ ಬದುಕಿನ ದಾರಿಗಳನ್ನು ಹುಡುಕಿಕೊಳ್ಳುತ್ತಿದ್ದಾರೆ. ನೆಲದ ಮೇಲಿನ ಹಕ್ಕು ಯಾರಿಗೆ ಸೇರಿದ್ದು ಎಂಬ ಬಗೆಗೆ ಈಗಾಗಲೇ ಒಪ್ಪಿಕೊಂಡಿರುವ ವಿಭಜಬೆಯ ನೆಲೆಯಲ್ಲಿ ಹೀಗೆ ಒಂದೆಡೆಯಿಂದ ಇನ್ನೊಂದೆಡೆಗೆ ಹೋಗುವುದನ್ನು ವಲಸೆಗಳೆಂದು ಕರೆಯುವುದು ರೂಢಿಯಲ್ಲಿದೆ. ಹೀಗೆ ವಲಸೆ ಹೋದವರಿಗೆ ಮೂಲ ನಿವಾಸಿಗಳಿಗೆ ಒದಗುವ ಎಲ್ಲ ಹಕ್ಕುಗಳೂ ದೊರಕುವುದಿಲ್ಲ. ಇದು ಭಾಷೆಯ ಮಟ್ಟಿಗೂ ನಿಜ. ವಲಸೆ ಬಂದವರು ತಮ್ಮ ಸ್ವತ್ತಾದ ಭಾಷೆಯನ್ನು ಹೇಗೆ ಬಳಸಬೇಕು ಇಲ್ಲವೇ ಅದನ್ನು ಬಳಸಬೇಕೆ ಬೇಡವೇ ಎಂಬುದನ್ನು ನಿರ್ಧರಿಸುವವರು ಸ್ವತಃ ಅವರಲ್ಲ. ಅವರು ವಲಸೆ ನಿಂತ ನಾಡಿನ ಕೆಲವರು. ಹೀಗೆ ಮಾಡುವಾಗ ವಲಸೆ ಸಮುದಾಯಗಳು ತಮ್ಮ ಭಾಷೆಯ ಮೇಲಿನ ಹಕ್ಕನ್ನು ನಿಧಾನವಾಗಿ ಕಳೆದುಕೊಳ್ಳುತ್ತಾರೆ. ಬೇರೊಂದು ಭಾಷೆಯನ್ನು ಬಳಸುವವರಾಗಬೇಕಾಗುತ್ತದೆ. ಆ ಭಾಷೆಯನ್ನು ಅವರು ಬಳಸುತ್ತಿದ್ದರೂ ಅದರ ಹಕ್ಕುದಾರಿಕೆಯಲ್ಲಿ ಅವರಿಗೆ ಪಾಲಿರುವುದಿಲ್ಲ. ಟರ್ಕಿ,ಇರಾಕ್ ಮತ್ತು ಇರಾನ್ ನಾಡುಗಳ ನಡುವೆ ಇರುವ ಗುಡ್ಡಗಾಡು ಪ್ರದೇಶದಲ್ಲಿ ಕುರ್ದ್ ಎಂಬ ಸಮುದಾಯವಿದೆ. ಇವರು ಆಡುವ ಕುರ್ದಿಶ್ ಭಾಷೆಯು ಅವರ ಸ್ವತ್ತಾಗಿ ಇರಬೇಕೋ ಇಲ್ಲವೇ ಅವರು ಅದನ್ನು ಬಿಟ್ಟುಕೊಟ್ಟು ಟರ್ಕಿಶ್,ಪರ್ಶಿಯನ್ ಇಲ್ಲವೇ ಇರಾಕಿಗಳಿಗೆ ಒಗ್ಗಿಕೊಳ್ಳಬೇಕೋ ಎಂಬುದು ಹಲವು ದಶಕಗಳ ಹೋರಾಟದ ಸಂಗತಿಯಾಗಿದೆ. ಹೀಗೆಯೇ ನೂರಾರು ಕಡೆಗಳಲ್ಲಿ ವಲಸೆ ಸಮುದಾಯಗಳು ತಮ್ಮ ಭಾಷೆಯೆಂಬ ಸ್ವತ್ತಿನ ಮೇಲಿನ ಹಕ್ಕನ್ನು ಕಳೆದುಕೊಳ್ಳುತ್ತಿವೆ.ಅಮೇರಿಕಾ ದೇಶದಲ್ಲಿ ರೆಡ್ ಇಂಡಿಯನ್ ಸಮುದಾಯಗಳು ತಮ್ಮ ಭಾಷೆಗಳನ್ನು ಕಳೆದುಕೊಂಡದ್ದು ಒಂದು ಕತೆಯಾದರೆ ಈಗ ಆ ನಾಡಿನಲ್ಲಿ ಇರುವ ದೊಡ್ಡ ವಲಸೆ ಸಮುದಾಯ ಸ್ಪಾನಿಶ್ ಮಾತಾಡುವವರದಾಗಿದ್ದು ಅವರು ತಮ್ಮ ನುಡಿಯನ್ನು ಕಾಯ್ದುಕೊಳ್ಳಲು ಎಚ್ಚರದ ಹೆಜ್ಜೆಗಳನ್ನು ಇರಿಸಬೇಕಾಗಿದೆ. ಈ ಎಲ್ಲ ಅಂಶಗಳನ್ನು ಮನಗಂಡು ಮಾನವ ಹಕ್ಕುಗಳ ಪಟ್ಟಿಯಲ್ಲಿ ಭಾಷೆಯೆಂಬ ಸ್ವತ್ತಿನ ಹಕ್ಕನ್ನೂ ಕೂಡ ಈಗ ಸೇರಿಸಲಾಗಿದೆಯಾದರೂ ಅದನ್ನು ಉಳಿಸಿಕೊಳ್ಳಲು ದೊಡ್ಡದೊಡ್ಡ ಹೋರಾಟಗಳು ನಡೆಯುವುದು ಅನುವಾರ್ಯವಾಗುತ್ತಿದೆ.

ಇದು ಒಂದು ನೆಲೆ. ಇನ್ನೊಂದು ನೆಲೆ ಬೇರೆಯದೇ ಬಗೆಯದ್ದು. ಇಲ್ಲಿ ಒಂದೇ ಭಾಷೆಯನ್ನಾಡುವ ಜನ ಸಮುದಾಯದಲ್ಲಿ ಆ ಭಾಷೆ ಯಾರ ಸ್ವತ್ತು ಎಂಬುದನ್ನು ಗೊತ್ತು ಮಾಡುವುದು ಕಷ್ಟವಾಗುವಂತಹ ಸನ್ನಿವೇಶಗಳು ನಿರ್ಮಾಣವಾಗುತ್ತವೆ. ಭಾಷೆಯ ಸಂಪನ್ಮೂಲಗಳ ಸ್ವರೂಪವನ್ನು ನಿರ್ಧರಿಸುವಲ್ಲಿ ,ಅದರ ಬಳಕೆಯ ಮಾದರಿಗಳ ಚೌಕಟ್ಟುಗಳನ್ನು ರೂಪಿಸುವಲ್ಲಿ ಕೆಲವರು ಮಾತ್ರ ನಿರ್ಣಯಗಳನ್ನು ಮಾಡುವವರಾಗಿದ್ದು ಉಳಿದೆಲ್ಲ ಜನರೂ ಆ ನಿರ್ದೇಶನಗಳನ್ನು ಮತ್ತು ಮಾದರಿಗಳನ್ನು ಅನುಸರಿಸುವ ಇಕ್ಕಟ್ಟು ರೂಪುಗೊಳ್ಳುತ್ತದೆ. ಈ ನಿರ್ದೇಶನಗಳನ್ನು ಮೀರಿದ ಭಾಷಾ ಬಳಕೆಗೆ ಅಧಿಕೃತ ಮನ್ನಣೆ ದೊರೆಯುವುದಿಲ್ಲ; ಅದನ್ನು ಅಂಚಿನ ಬಳಕೆಯೆಂದು,ಅದಕ್ಕೆ ಮಾನ್ಯತೆ ನೀಡುವ ಅಗತ್ಯವಿಲ್ಲವೆಂದು ತೀರ್ಮಾನಿಸಲಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಭಾಷೆ ಎಲ್ಲರ ಸ್ವತ್ತು ಎನ್ನುವ ತಿಳುವಳಿಕೆಗೆ ಯಾವ ಬೆಲೆಯೂ ಇಲ್ಲವಾಗುತ್ತದೆ.

ಈ ಬಗೆಯ ನಿರ್ದೇಶನಗಳನ್ನು ಕೊಡುವವರು ತಮ್ಮ ಕ್ರಮವನ್ನು ಸರಿಯೆಂದು ಒಪ್ಪಿಸಲು ತಕ್ಕ ಕಾರಣಗಳನ್ನು ಮುಂದೊಡ್ಡುತ್ತಾರೆ. ಭಾಷೆ ಎಲ್ಲರ ಸ್ವತ್ತಾಗಿರುವುದರಿಂದ ಅದರ ಬಳಕೆಯೂ ಕೂಡ ಎಲ್ಲರಿಗೂ ’ಅನುಕೂಲ’ವಾಗುವಂತೆ ಇರಬೇಕು ಎನ್ನುವುದು ಒಂದು ಕಾರಣ. ಎಲ್ಲರಿಗೂ ಸಮಾನವಾದ ರೂಪವೊಂದನ್ನು ಮುಂದಿಡುವ ಮೂಲಕ ಮತ್ತು ಅದನ್ನು ಬಳಸಲು ಕಲಿಸಿಕೊಡುವ ಮೂಲಕ ಭಾಷೆಯನ್ನು ಆಡುವವರ ನಡುವೆ ಇರುವ ’ಅಸಮಾನತೆ’ಗಳನ್ನು ನಿವಾರಿಸುವ ದಾರಿಯಲ್ಲಿ ದಿಟ್ಟ ಹೆಜ್ಜೆಯನ್ನು ಇಟ್ಟಂತಾಯಿತು ಎನ್ನುವುದು ಇನ್ನೊಂದು ಕಾರಣ. ಆದರೆ ಈ ಈ ಕಾರಣಗಳ ಹಿಂದೆ ಇರುವ ತರ್ಕವನ್ನು ಎಚ್ಚರಿಕೆಯಿಂದ ಗಮನಿಸಬೇಕು. ಬಳಕೆಗೆ ಎಲ್ಲರಿಗೂ ಅನುಕೂಲವಾಗಿಸುವುದು ಮತ್ತು ಅಸಮಾನತೆಯನ್ನು ತೆಗೆದು ಹಾಕುವುದು ಎಂಬುದು ಪರುವದ ಊಟವನ್ನು ತಯಾರಿಸಿದಂತಲ್ಲ. ಎಲ್ಲರೂ ಒಟ್ಟಿಗೆ ಕುಳಿತು ಊಟಮಾಡುವಾಗ ತಯಾರಿಸುವ ಅಡುಗೆಯಂತಲ್ಲ. ಭಾಷೆಯು ಎಲ್ಲರಿಗೂ ಸೇರಿದ ಸ್ವತ್ತಾಗಿರುವುದರಿಂದ ಅದರ ಬಳಕೆಯೂ ಅವರವರ ಅಗತ್ಯಕ್ಕೆ ತಕ್ಕಂತೆ ಬೇರೆಬೇರೆಯಾಗಿರುವುದೇ ಹೆಚ್ಚು ಸಹಜವಾದುದು. ಇದು ಎಲ್ಲರಿಗೂ ತಿಳಿಯಲಾರದೆಂಬ ಕಾರಣವನ್ನು ಮುಂದೊಡ್ಡಿ ಎಲ್ಲರಿಗೂ ತಿಳಿಯುವ ಮಾದರಿಯೊಂದಿದೆ ಎನ್ನುವ ಭ್ರಮೆಯೊಂದನ್ನು ಹುಟ್ಟಿ ಹಾಕಲಾಗುತ್ತದೆ. ಭಿನ್ನತೆಯಲ್ಲಿ ಅಡ್ಡಿಗಳಿಲ್ಲ;ಆದರೆ ಆ ಭಿನ್ನತೆಗಳು ತರತಮದ ನೆಲೆಗಳಾಗಿ ಬದಲಾದಾಗ ಮಾತ್ರ ಅಡ್ಡಿಗಳು ಹುಟ್ಟಿಕೊಳ್ಳುತ್ತವೆ. ಅಂದರೆ ಬಹುತ್ವವೆನ್ನುವುದರಲ್ಲಿ ತೊಂದರೆಯಿಲ್ಲ. ಬಹುತ್ವದ ನಿರ್ವಹಣೆಯ ತಂತ್ರಗಳನ್ನು ಸಮುದಾಯಕ್ಕೆ ಒದಗಿಸಿಕೊಡಬೇಕಾಗುತ್ತದೆ.

ಇದಲ್ಲದೆ ಇಂದೇ ಸಮುದಾಯ ಒಂದಕ್ಕಿಂತ ಹೆಚ್ಚಿನ ಭಾಷೆಗಳನ್ನು ತನ್ನ ಸ್ವತ್ತುಗಳನ್ನಾಗಿ ಪಡೆದಾಗ ಸಮಸ್ಯೆ ಇನ್ನಷ್ಟು ಜಟಿಲವಾಗುತ್ತದೆ. ಇಲ್ಲಿಯೂ ಆಯಾ ಭಾಷೆಗಳನ್ನು ಆಡುವ ಕೆಲವರ ನಿರ್ಧಾರಗಳು ಮೇಲುಗೈ ಪಡೆದು ಸ್ವತ್ತಿನ ಜಂಟಿ ನಿರ್ವಹಣೆಗೆ ಹೊರಗಿನಿಂದ ನಿರ್ದೇಶನಗಳನ್ನು ನೀಡುವ ಪ್ರಸಂಗಗಳು ಹುಟ್ಟಿಕೊಳ್ಳುತ್ತವೆ. ಇದು ಇನ್ನೂ ಹೆಚ್ಚಿನ ಗೊಂದಲಕ್ಕೆ ಕಾರಣವಾಗುತ್ತದೆ. ಒಟ್ಟಾರೆಯಾಗಿ ಭಾಷೆಯು ಇತರ ನೈಸರ್ಗಿಕ ಮತ್ತು ನಿಸರ್ಗನೀಡಿದ ಸಾಮುದಾಯಿಕ ಹಕ್ಕಿನ ಸ್ವತ್ತು ಎನ್ನುವಾದದರೆ ಅದರ ಮೇಲಿನ ಸ್ವಾಮ್ಯ ಎಲ್ಲರಿಗೂ ಇರಬೇಕೆಂಬ ನಿಟ್ಟಿನಲ್ಲಿ ನಾವೀಗ ಭಾಷಾನೀತಿ ಮತ್ತು ಭಾಷಾ ಯೋಜನೆಗಳನ್ನು ರೂಪಿಸಬೇಕಾದ ದಿನಗಳು ಬಂದಿವೆ.

Wednesday, June 25, 2008

ನೆನಪುಮರವಿನ ಕಣ್ಣುಮುಚ್ಚಾಲೆಯಾಟ

ನೆನಪು ಮರೆವಿನ ಕಣ್ಣುಮುಚ್ಚಾಲೆಯಾಟ

ಹಾಳು ಮರೆವು ಎಂದು ಗೊಣಗದವರಿಲ್ಲ. ಮರೆವಿನ ನೆರವು ಪಡೆದು ತಮ್ಮ ಅರೆಕೊರೆಗಳನ್ನು ಮುಚ್ಚಿಟ್ಟುಕೊಳ್ಳುವುದು ಎಲ್ಲರೂ ಆಡುವ ಆಟವೇ ಸರಿ. ಹಾಗೆಯೇ ನೆನಪು ಚೆನ್ನಾಗಿರುವವರು ನಮ್ಮ ಮೆಚ್ಚುಗೆಯನ್ನು ಪಡೆಯುತ್ತಾರೆ.;ಜಾಣರೆಂದೆನಿಕೊಳ್ಳುತ್ತಾರೆ. ಈ ನೆನಪು ಮರೆವಿನ ಕಣ್ಣುಮುಚ್ಚಾಲೆಯಲ್ಲಿ ಭಾಷೆಗೇನಾದರೂ ಜಾಗವಿದೆಯೇ ಎನ್ನುವುದನ್ನು ಈಗ ನೋಡೋಣ. ನಮಗೆ ಒಬ್ಬರು ಚೆನ್ನಾಗಿ ಗೊತ್ತು ಎಂದಿಟ್ಟುಕೊಳ್ಳಿ. ಕೆಲಕಾಲ ನಮ್ಮ ಕಣ್ಣಿಗೆ ಬೀಳದಿದ್ದರೆ ಅವರನ್ನು ನಾವು ಮರೆಯುವುದುಂಟು. ಆದರೆ ಈ ಮರೆವಿಗೆ ಎರಡು ನೆಲೆಗಳಿವೆ. ಈಗ ಅವರು ನಮ್ಮ ಕಣ್ಣೆದುರಿಗೆ ಬಂದರೆ ಅವರು ನಮಗೆ ಗೊತ್ತಿರುವವರು ಎನಿಸಿದರೂ ಅವರ ಹೆಸರು ನಮ್ಮ ನೆನಪಿಗೆ ಬಾರದೇ ಹೋಗಬಹುದು. ಮತ್ತೆ ಕೆಲವೊಮ್ಮೆ ಅವರ ಹೆಸರು ನಮ್ಮ ನೆನಪಿನಲ್ಲಿ ಉಳಿದಿದ್ದರೂ ಅವರೇ ಎದುರಿಗೆ ಬಂದು ನಿಂತರೂ ನಾವು ಅವರನ್ನು ಗುರುತಿಸಿದೇ ಹೋಗಬಹುದು. ಇವೆಲ್ಲವೂ ನಮ್ಮೆಲ್ಲರಿಗೂ ಆಗಿರುವ ಅನುಭವಗಳೇ ಸರಿ. ಈ ಎರಡು ಬಗೆಯ ಮರೆವನ್ನು ಭಾಷೆಯ ನೆರವಿನಿಂದ ಅರಿತುಕೊಳ್ಳೋಣ. ಒಂದು ಪದಕ್ಕೆ ದನಿಯ ನೆಲೆ ಇರುವಂತೆ ತಿರುಳಿನ ನೆಲೆಯೂ ಇರುವುದಷ್ಟೆ. ಬಲ್ಲವರು ಈ ಎರಡು ನೆಲೆಗಳನ್ನು ಪದ-ಪದಾರ್ಥಗಳ ನೆಲೆ ಎಂದಿದ್ದಾರೆ. ದನಿ ಮತ್ತು ತಿರುಳುಗಳೆರಡೂ ನಮಗೆ ಗೊತ್ತಿದ್ದರೆ ಆ ಪದವನ್ನು ಬಳಸಬಹುದು. ಇವೆರಡರಲ್ಲಿ ಯಾವುದೊಂದನ್ನು ಮರೆತರೂ ನಾವು ಗೊಂದಲಕ್ಕೆ ಒಳಗಾಗುತ್ತೇವೆ.;ಎರಡನ್ನೂ ಮರೆತರಂತೂ ನಮ್ಮ ಪಾಡು ಇನ್ನಷ್ಟು ಇಕ್ಕಟ್ಟಿಗೆ ಸಿಕ್ಕುವುದು. ನಾವು ನೆನಪಿಟ್ಟುಕೊಳ್ಳುವ ಬಗೆಯಲ್ಲೂ ಈ ಎರಡು ನೆಲೆಗಳಿರುವಂತೆ ತೋರುತ್ತದೆ. ನೆನಪಿನ ’ದನಿಯ’ನೆಲೆ ಒಂದು; ನೆನಪಿನ ತಿರುಳಿನ ನೆಲೆ ಇನ್ನೊಂದು. ’ದನಿ’ ಯ ನೆಲೆ ಮರೆತರೆ ಏನೋ ಮರೆತಂತೆ ಅನ್ನಿಸುತ್ತದೆ. ಆದರೆ ಏನು ಮರೆತೆವೆಂದು ಹೇಳಲಾರೆವು. ’ತಿರುಳಿನ’ ನೆಲೆ ಮರೆತರೆ ಬೇರೇನೋ ನೆನಪಿಗೆ ಬರುತ್ತದೆಯಾದರೂ ಬೇಕಾದ್ದು ನೆನಪಿಗೆ ಬರುವುದಿಲ್ಲ.ಒಮ್ಮೆ ಕಲಿತ ಹಾಡೊಂದನ್ನು ಈಗ ನೆನೆದುಕೊಳ್ಳಿ. ಸರಿಯಾಗಿ ಹೇಳಲು ಬಂದರೆ ಸರಿ. ಮರೆತಿದ್ದರೆ ಏನಾಗುವುದೆಂದು ನೋಡಿ. ಆ ಹಾಡಿನ ಧಾಟಿ ಮರೆತಿದ್ದರೆ ಅದರ ಪದಗಳನ್ನು ನೆನಪಿಟ್ಟುಕೊಂಡಿದ್ದರೂ ಹಾಡಲಾಗುವುದಿಲ್ಲ. ಧಾಟಿ ನೆನಪಿದ್ದು ಪದಗಳು ಮರೆತಿದ್ದರೆ ನಾವು ಹಾಡನ್ನು ಗುನುಗ ತೊಡಗುತ್ತೇವೆ. ಸಾಲುಗಟ್ಟಲೆ ಗುನುಗಿಯೇ ಹಾಡಿ ಮುಗಿಸುತ್ತೇವೆ. ಮೊದಲನೆಯದು ’ದನಿ’ ಯ ನೆಲೆಯ ಮರೆವು;ಎರಡನೆಯದು ’ತಿರುಳಿನ’ನೆಲೆಯ ಮರೆವು.

ಸರಿ. ಹೀಗೇಕಾಗುತ್ತದೆ? ಹಿಂದೆ ಈ ಅಂಕಣದಲ್ಲಿ ಬರೆದಿದ್ದ ಒಂದು ಮಾತನ್ನು ಮರೆತಿದ್ದರೆ ನೆನಪು ಮಾಡಿಕೊಳ್ಳಿ. ನಮ್ಮ ಮೆದುಳಿನಲ್ಲಿ ದನಿ ಮತ್ತು ತಿರುಳನ್ನು ಕೂಡಿಟ್ಟುಕೊಳ್ಳುವ ಮತ್ತು ಮರಳಿ ನಮ್ಮ ಬಳಕೆಗೆ ಒದಗಿಸುವ ತಾಣಗಳು ಬೇರೆಬೇರೆಯಾಗಿವೆ. ದನಿಯ ನೆಲೆಯು ಬ್ರಾಕಾನ ತಾಣದಲ್ಲಿದ್ದರೆ ತಿರುಳಿನ ನೆಲೆಯು ವರ್ನಿಕೆಯ ತಾಣದಲ್ಲಿರುತ್ತದೆ. ಇವೆರಡಲ್ಲಿ ಯಾವೊಂದು ತಾಣಕ್ಕೆ ತೊಂದರೆಯಾದರೂ ಮಾತು ಕಟ್ಟುತ್ತದೆ. ಅಂದರೆ ನೆನಪು ಕುಗ್ಗುತ್ತದೆ. ಬ್ರಾಕಾನ ತಾಣಕ್ಕೆ ತೊಂದರೆಯಾದರೆ ಏನನ್ನೋ ಹೇಳಬೇಕೆಂದರೂ ಹೇಳಲು ತಕ್ಕ ಪದಗಳು ದಕ್ಕುವುದಿಲ್ಲ. ಏಕೆಂದರೆ ಆ ಪದಗಳನ್ನು ದನಿಯ ನೆಲೆಗೆ ಒಯ್ಯುಲು ನಮಗೆ ಆಗುವುದಿಲ್ಲ. ಹಾಗೆಯೇ ವರ್ನಿಕೆಯ ತಾಣಕ್ಕೆ ತೊಂದರೆಯಾದರೆ ಏನು ಹೇಳಬೇಕೆಂದಿರುತ್ತೇವೋ ಅದನ್ನು ಹೇಳಲಾಗದೆ ಬೇರೆ ಏನನ್ನೋ ಹೇಳುತ್ತಿರುತ್ತೇವೆ. ಮರ ಎನ್ನುವ ಬದಲು ಹಕ್ಕಿ,ಹಣ್ಣು, ಎಲೆ, ದೆವ್ವ ಹೀಗೆ ಏನನ್ನಾದರೂ ( ಆದರೂ ಮರದೊಡನೆ ನಂಟಿರುವ ಯಾವುದೋ ಪದವನ್ನು) ಹೇಳಬಹುದು. ನೆನಪುಗಳೆಲ್ಲವೂ ಭಾಷೆಯೊಡನೆ ನಂಟನ್ನು ಪಡೆದಿರುತ್ತವೆಂದು ಹೇಳಲಾಗದು. ಆದರೂ ನೆನಪಿನ ಕಟ್ಟೋಣಕ್ಕೂ ಭಾಷೆಯ ಕಟ್ಟೋಣಕ್ಕೂ ಹೊಂದಾಣಿಕೆ ಇದೆ ಎನ್ನುವುದಂತೂ ದಿಟ. ಅಂದರೆ ಭಾಷೆಯಲ್ಲಿ ಇರುವ ಎರಡು ನೆಲೆಗಳಂತೆ ನೆನಪಿಗೂ ಎರಡು ನೆಲೆಗಳಿರುತ್ತವೆ ಎಂದಾಯ್ತು.

ನೆನಪಿಟ್ಟುಕೊಳ್ಳುವುದು ಎಂದರೇನು? ಬೇಕಾದಾಗ,ಬೇಕಾದ್ದು ಬೇಕಾದಷ್ಟು ನಮ್ಮ ಎಚ್ಚರದ ನೆಲೆಗೆ ಬಂದರೆ ಅದನ್ನು ನೆನಪು ಎನ್ನುತ್ತೇವೆ ತಾನೆ? ಹೀಗೆ ನೆನಪಿಟ್ಟುಕೊಳ್ಳುವವರ ಬಗೆಗಳನ್ನು ಗಮನಿಸಿ. ಕೆಲವರು ಮಾತಾಡುವಾಗ ಯಾವುದೋ ಗಾದೆ ಮಾತನ್ನು ಹೇಳಬೇಕೆಂದು ಬಯಸುತ್ತಾರೆ. ಆದರೆ ಆ ಗಾದೆ ನೆನಪಿಗೆ ಬರುವುದಿಲ್ಲ. ಅದರ ಬದಲಿಗೆ ’ಅದೇನೋ ಅಂತಾರಲ್ಲ ಹಾಗಾಯ್ತು ನಿನ್ನ ಕತೆ’ ಎಂದು ಬಿಡುತ್ತಾರೆ. ಇವರು ಪದವನ್ನು ಮರೆತು ಹಾಡು ಗುನುಗುವ ಬಗೆಯವರು. ಮತ್ತೆ ಕೆಲವರು ಗಂಟೆಗಟ್ಟಲೆ ಒಂದು ಕತೆಯನ್ನು ಹಾಡಿನಲ್ಲಿ ಹೇಳುವವರಿದ್ದಾರೆಂದು ಕೊಳ್ಳಿ. ಇವರು ಎಂದೋ ಯಾರೋ ಹೇಳಿದ ಹಾಡನ್ನು ’ಕಲಿತು’ ತಾವೂ ಹೇಳ ತೊಡಗಿದವರು. ಮತ್ತೆ ಮತ್ತೆ ಅದೇ ಹಾಡನ್ನು ಹೇಳಬಲ್ಲರು. ಇಂತವರು ಆ ಹಾಡನ್ನು ಹೇಗೆ ನೆನಪಿಟ್ಟುಕೊಳ್ಳುತ್ತಾರೆಂಬುದು ಒಂದು ಸೋಜಿಗ. ಕೆಲವರು ಹೇಳುವಂತೆ ಆ ಹಾಡಿನಲ್ಲಿ ಮತ್ತೆ ಮತ್ತೆ ಬರುವ ಕೆಲವು ಮಾತುಗಳಿರುತ್ತವೆ; ಹಾಗೆಯೇ ಅದರ ಓಟವನ್ನು ಕಟ್ಟಿಕೊಡುವ ಧಾಟಿಯೊಂದಿರುತ್ತದೆ. ಆ ಧಾಟಿ ಕೂಡ ಮತ್ತೆ ಮತ್ತೆ ಬರುತ್ತಲೇ ಇರುತ್ತದೆ. ಈ ಎರಡೂ ನೆಲೆಗಳು ಆ ನೀಳವಾದ ಹಾಡನ್ನು ಮರೆಯದಂತೆ ನೆನಪಿಟ್ಟುಕೊಳ್ಳಲು ಆ ಹಾಡುಗಾರರಿಗೆ ನೆರವಾಗುತ್ತವೆ. (ಚಿಕ್ಕವರಿದ್ದಾಗ ನಮಗೆ’ಕಲಿಸಿದ’/ ನಾವು ’ ಕಲಿತ’ ಮಕ್ಕಳ ಹಾಡುಗಳನ್ನು ಈಗ ಒಮ್ಮೆ ನೆನಪು ಮಾಡಿಕೊಂಡರೆ ಈ ಮೇಲೆ ಹೇಳಿದ್ದು ಇನ್ನಷು ಚೆನ್ನಾಗಿ ಗೊತ್ತಾಗುತ್ತದೆ.)

ಮರೆಯದೇ ಇರಬೇಕೆಂದು ನಾವೆಲ್ಲರೂ ಬಯಸುವವರು. ’ ನಾನು ಹೇಳಿದ್ದನ್ನು ಸೆರಗಿಗೆ ಗಂಟು ಹಾಕಿಟ್ಟುಕೋ, ಮರೀಬೇಡ’ ಎನ್ನುವವರುಂಟು. ’ಆಗಿದ್ದನ್ನೆಲ್ಲ ಕಂಕುಳಲ್ಲಿರಿಸಿಕೊಂಡಿದ್ದೇನೆ, ಮರೆತೇನೆಯೇ’ ಎಂದು ಮತ್ತೆ ಕೆಲವರು ಹೇಳುತ್ತಾರೆ. ನೆನಪಿಟ್ಟುಕೊಳ್ಳುವುದಕ್ಕೂ ಅವರು ಹೇಳುತ್ತಿರುವ ಕೆಲಸಕ್ಕೂ ಏನೂ ನಂಟಿಲ್ಲ. ಆದರೂ ಹೀಗೆ ಹೇಳುವುದೇಕೆ? ಸೆರಗಿನ ಗಂಟನ್ನು ನೋಡಿದಾಗ ಏನನ್ನೋ ನೆನಪಿಸಿಕೊಳ್ಳಬೇಕೆಂದು ಅನಿಸುತ್ತದೆ; ಆಗ ಅದನ್ನು ನೆನಪಿಸಿಕೊಳ್ಳುತ್ತೇವೆ ಎನ್ನಬಹುದೇ? ಅದೇನೋ ಸರಿ. ಆದರೆ ಏನೋ ನೆನಪಿಟ್ಟುಕೊಳ್ಳ ಬೇಕಿತ್ತು ಎನ್ನುವುದಷ್ಟೆ ನೆನಪಿಗೆ ಬಂದು ಏನು ನೆನಪಿಸಿಕೊಳ್ಳಬೇಕೋ ಅದೇ ಮರೆತು ಹೋದರೇನು ಮಾಡುವುದು? ಮನೆಗೆ ಬರುವಾಗ ಅಂಗಡಿಯಿಂದ ಏನನ್ನೋ ತರಲು ಮನೆಯಲ್ಲಿ ಹೇಳಿದ್ದಾರೆಂದುಕೊಳ್ಳಿ. ಹಿಂದಿರುಗಿ ಬರುವಾಗ ಅಂಗಡಿ ಕಣ್ಣಿಗೆ ಬೀಳುತ್ತದೆ. ಏನನ್ನೋ ಇಲ್ಲಿಂದ ತೆಗೆದುಕೊಂಡು ಹೋಗಬೇಕಿದೆ ಎನ್ನುವುದು ನೆನಪಿಗೆ ಬರುತ್ತದೆ. ಆದರೆ ಏನದು ಎಂಬುದು ನೆನಪಿಗೆ ಬರುವುದಿಲ್ಲ. ಇದನ್ನು ನೆನಪು ಎನ್ನಬೇಕೋ ಮರೆವು ಎನ್ನಬೇಕೋ?

ಭಾಷೆಯ ನೆಲೆಯ ನೆನಪುಗಳು ಹೇಗೆ ನೆಲೆಗೊಂಡಿರುತ್ತವೆ ಎನ್ನುವುದನ್ನು ತಿಳಿಯಲು ಹಲವರು ಮುಂದಾಗಿದ್ದಾರೆ; ಆ ದಿಕ್ಕಿನಲ್ಲಿ ತುಂಬ ಕೆಲಸಗಳನ್ನು ಮಾಡಿದ್ದಾರೆ. ಅವರ ತಿಳುವಳಿಕೆಯನ್ನು ಈಗ ಕೊಂಚ ಗೊತ್ತು ಮಾಡಿಕೊಳ್ಳೋಣ. ನಾವು ಒಂದು ಪದವನ್ನು ನೆನಪಿನಲ್ಲಿರಿಸಿಕೊಳ್ಳಲು ಇಲ್ಲವೇ ಅದನ್ನು ನೆನಪು ಮಾಡಿಕೊಳ್ಳಲು ಎರಡು ದಾರಿಗಳನ್ನು ಹಿಡಿಯಬಹುದು. ಒಂದು: ಆ ಪದದ ದನಿಯ ಹೋಲಿಕೆ ಇರುವ ಪದಗಳನ್ನು ನೆನಪಿಗೆ ತಂದುಕೊಳ್ಳುವುದು. ಎರಡು; ಆ ಪದದ ತಿರುಳಿನೊಡನೆ ನಂಟಿರುವ ಪದಗಳನ್ನು ನೆನಪಿಗೆ ತಂದುಕೊಳ್ಳುವುದು. ಕವಿಗಳು ತಮ್ಮ ಕವಿತೆಗಳಲ್ಲಿ ಪದಗಳನ್ನು ಜೋಡಿಸುವಾಗ ಈ ಎರಡೂ ಹಾದಿಗಳನ್ನು ಹಿಡಿಯುತ್ತಾರೆ. ’ಯಾರಾಗ ಹಾಡಿದರೂ ಯಾರಾಗ ಕೇಳುವರು’ ’ಗಿಡಗಂಟಿಯಾ ಕೊರಳೊಳಗಿಂದ ಹಕ್ಕಿಗಳ ಹಾಡು’ ಈ ಎರಡೂ ಸಾಲುಗಳಲ್ಲಿ ಮೊದಲನೆಯದು ಒಂದು ಪದದ ದನಿಯ ನೆಲೆಯ ನಂಟನ್ನು ಹೊಂದಿರುವ ಇನ್ನೊಂದು ಪದವನ್ನು ಜೋಡಿಸಿಟ್ಟುಕೊಂಡಿದೆ. ’ಯಾ(ವ)ರಾಗ ಹಾಡಿದರೂ ಯಾರಾ(ರು,ಆ)ಗ ಕೇಳುವರು.’ ಎರಡನೆಯ ಸಾಲಿನಲ್ಲಿ ತಿರುಳಿನ ನಂಟಿರುವ ಪದವನ್ನು ಬಳಸಿಕೊಳ್ಳಲಾಗಿದೆ.ಗಿಡಗಳ ಕೊರಳು ಅ ಗಿಡದಲ್ಲಿ ಅಡಗಿದ ಹಕ್ಕಿಗಳ ಕೊರಳಾಗಿ ಬಿಡುತ್ತದೆ. ಈ ಸಾಲುಗಳನ್ನು ಇಲ್ಲಿ ಹೇಳಿದ್ದೇಕೆ? ಭಾಷೆಯಲ್ಲಿ ಈ ಹಾದಿಗಳನ್ನು ಹಿಡಿದು ನಾವು ನೆನಪಿಟ್ಟುಕೊಳ್ಳ ಬೇಕಾದ್ದನ್ನು ಮರೆಯದಂತೆ ನೋಡಿಕೊಳ್ಳುತ್ತೇವೆ ಎಂಬುದನ್ನು ಗುರುತಿಸಿಕೊಳ್ಳಬೇಕು. ಈ ಎರಡು ಹಾದಿಗಳಲ್ಲಿ ಒಂದು ಹೋಲಿಕೆಯನ್ನು(=ಸಾದೃಶ್ಯವನ್ನು) ನೆಮ್ಮಿದರೆ ಇನ್ನೊಂದು ನಂಟನ್ನು (=ಸಂಬಂಧವನ್ನು) ನೆಮ್ಮುತ್ತದೆ.

ನಮ್ಮ ಸಂಸ್ಕೃತಿಯಲ್ಲಿ ಕೂಡಿಕೊಂಡ ನೆನಪುಗಳು ಕೂಡ ಹೀಗೆ ಹೋಲಿಕೆ ಮತ್ತು ನಂಟನ್ನು ನೆಮ್ಮಿಕೊಂಡಿರುತ್ತವೆ. ಇಲ್ಲಿರುವ ನೂರಾರು ಆಚರಣೆಗಳು, ಕತೆಗಳು, ಹಾಡುಗಳು ಹೀಗೆ ನೆನಪಿಗೆ ನೆರವಾಗುವ ಮೀಟುಗೋಲಾಗುವ ಬಯಕೆಯನ್ನು ಹೊಂದಿರುತ್ತವೆ. ಆದರೆ ಅವೆಲ್ಲವೂ ದಿನಕಳೆದಂತೆ ಹೀಗೆ ನೆನಪಿಗೆ ತಂದುಕೊಡಬಲ್ಲ ನೆಲೆಯನ್ನು ಕಾಯ್ದುಕೊಳ್ಳುತ್ತವೋ ಇಲ್ಲವೇ ಅದನ್ನು ಕಳೆದುಕೊಳ್ಳುತ್ತವೋ ಎನ್ನುವುದು ಬೇರೆಯ ಮಾತು. ನೆನಪು ಮರೆವಿನ ಕಣ್ಣು ಮಚ್ಚಾಲೆಯಾಟ ಒಬ್ಬೊಬ್ಬರ ಮಟ್ಟಿಗೆ ಎಷ್ಟು ದಿಟವೋ ಇಡೀ ಸಮುದಾಯಕ್ಕೂ ಅಷ್ಟೇ ದಿಟ.